ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಕಾರಣಕ್ಕೆ ಕಾಂಗ್ರೆಸ್ ವಕ್ತಾರ ಹುದ್ದೆಯಿಂದ ಅಮಾನತುಗೊಂಡಿದ್ದ ಸಂಸದ ಶಶಿ ತರೂರ್ ಉಲ್ಟಾ ಹೊಡೆದಿದ್ದಾರೆ. ಇದೀಗ ನರೇಂದ್ರ ಮೋದಿ ಅವರ ವಿರುದ್ಧವೇ ಕಿಡಿಕಾರಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಮೋದಿ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ದೂರಿದ್ದಾರೆ.
‘ಅಧಿಕಾರದಲ್ಲಿರುವಾಗಲೇ ಹತ್ಯೆಯಾದ ಪ್ರಧಾನಿ ಇಂದಿರಾ ಗಾಂಧಿ ಅವರ ತ್ಯಾಗವನ್ನು ಸರ್ಕಾರ ಮರೆತಿದೆ. ಇಂದಿರಾ ಅವರ ಪುಣ್ಯತಿಥಿಯಾದ ಅ.31 ಅನ್ನು ಮರೆಯಲಾಗಿದೆ’ ಎಂದು ಅವರು ಹೇಳಿದ್ದಾರೆ. ‘ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ನೆನಪಿಗೆ ಅ.31 ಅನ್ನು ರಾಷ್ಟ್ರೀಯ ಏಕತಾ ದಿವಸ ಎಂದು ಮೋದಿ ಸರ್ಕಾರ ಘೋಷಿಸಿದೆ.
ಇದೇ ದಿನವೇ ಇಂದಿರಾ ಗಾಂಧಿ ಅವರು ಹತ್ಯೆಯಾಗಿದ್ದರೂ ಅವರ ಹೆಸರು ಎಲ್ಲಿಯೂ ಪ್ರಸ್ತಾಪವಿಲ್ಲ’ ಎಂದು ತರೂರ್್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.