ನವದೆಹಲಿ(ಪಿಟಿಐ): ಮೊಬೈಲ್ ಸೇವೆ ಬಳಕೆಗೆ ಬಂದು 20 ವರ್ಷ ಕಳೆದರೂ ರಾಷ್ಟ್ರದಲ್ಲಿ 55 ಸಾವಿರ ಹಳ್ಳಿಗಳು ಇನ್ನೂ ಮೊಬೈಲ್ ಸಂಪರ್ಕ ವ್ಯಾಪ್ತಿಯಿಂದ ಹೊರಗುಳಿದಿವೆ.
ಒಂದು ಅಂದಾಜಿನ ಪ್ರಕಾರ ರಾಷ್ಟ್ರದ 55,669 ಹಳ್ಳಿಗಳು ಮೊಬೈಲ್ ಸಂಪರ್ಕ ವ್ಯಾಪ್ತಿಯಿಂದ ಹೊರಗುಳಿದಿವೆ ಎಂದು ದೂರವಾಣಿ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಅವರು ಶುಕ್ರವಾರ ರಾಜ್ಯಸಭೆಗೆ ಲಿಖಿತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
‘ರಾಷ್ಟ್ರದಲ್ಲಿ ಮೊಬೈಲ್ ಸೇವೆ ಬಳಕೆಗೆ ಬಂದು 20 ವರ್ಷ ಕಳೆದರೂ ಇನ್ನೂ 56 ಸಾವಿರದಷ್ಟು ಹಳ್ಳಿಗಳು ಈ ಸೇವೆಯಿಂದ ಹೊರಗುಳಿದಿವೆಯೇ? ಎಂಬ ಪ್ರಶ್ನೆಗೆ ರವಿಶಂಕರ್ ಪ್ರಸಾದ್ ಅವರು ‘ಹೌದು’ ಎಂದು ಹೇಳಿದ್ದಾರೆ.
ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿ (ಯುಎಸ್ಒಎಫ್) ಅಡಿ ಐದು ಹಣಕಾಸು ವರ್ಷದಲ್ಲಿ ಹಂತ ಹಂತವಾಗಿ ಹಳ್ಳಿಗಳಿಗೆ ಮೊಬೈಲ್ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಹಿಮಾಲಯದ ರಾಜ್ಯಗಳ ವ್ಯಾಪ್ತಿಯ ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಮತ್ತು ಉತ್ತರಖಂಡದಲ್ಲಿ ತಾಂತ್ರಿಕ ಹಾಗೂ ಅಂದಾಜು ವೆಚ್ಚ ಒಳಗೊಂಡು ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈಶಾನ್ಯ ರಾಜ್ಯಗಳ 8,621 ಹಳ್ಳಿಗಳನ್ನು ಮೊಬೈಲ್ ಸಂಪರ್ಕ ವ್ಯಾಪ್ತಿಯಡಿ ತರಲು ಟೆಲಿಕಾಂ ಅಭಿವೃದ್ಧಿ ಯೋಜನೆಯಲ್ಲಿ ಸೇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.