ನವದೆಹಲಿ (ಪಿಟಿಐ/ಐಎಎನ್ಎಸ್): ಇರಾಕ್ನಲ್ಲಿ ಐಎಸ್ ಉಗ್ರ ಸಂಘಟನೆ ಅಪಹರಿಸಿದೆ ಎನ್ನಲಾದ ಭಾರತದ 39 ಮಂದಿ ಇನ್ನೂ ಬದುಕಿದ್ದಾರೆ ಎಂದು ಸರ್ಕಾರಕ್ಕೆ ಆರು ಮೂಲಗಳಿಂದ ಮಾಹಿತಿ ಬಂದಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ಲೋಕಸಭೆಗೆ ತಿಳಿಸಿದರು.
ಈ 39 ಮಂದಿಯನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂಬ ಮಾಧ್ಯಮ ವರದಿಗೆ ಸಂಬಂಧಿಸಿ ಸುಷ್ಮಾ ಸಂಸತ್ ಉಭಯ ಸದನಗಳಲ್ಲಿ ಸ್ಪಷ್ಟನೆ ನೀಡಿದರು.
ಉಗ್ರರ ವಶದಿಂದ ತಪ್ಪಿಸಿಕೊಂಡು ಬಂದಿರುವ ಭಾರತದ ಹರ್ಜೀತ್ ಮಸ್ಸಿ ಹೇಳಿಕೆಯನ್ನು ಆಧರಿಸಿ ಬಾಂಗ್ಲಾದೇಶದ ಇಬ್ಬರು ಪ್ರಜೆಗಳು ‘ ಉಗ್ರರ ಒತ್ತೆಯಲ್ಲಿರುವ ಭಾರತದ 39 ಮಂದಿಯನ್ನು ಕೊಲ್ಲಲಾಗಿದೆ’ ಎಂದು ಹೇಳಿದ್ದರು. ಇದನ್ನು ಆಧರಿಸಿ ಮಾಧ್ಯಮಗಳು ಈ ರೀತಿ ವರದಿ ಮಾಡಿವೆ. ಆದರೆ ಈ 39 ಮಂದಿ ಸತ್ತಿದ್ದಾರೆ ಎನ್ನುವುದಕ್ಕೆ ಯಾವುದೇ ಬಲವಾದ ಪುರಾವೆಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.
‘ಅಪಹೃತರ ಜತೆ ಸರ್ಕಾರ ನೇರ ಸಂಪರ್ಕದಲ್ಲಿ ಇಲ್ಲ. ಇವರ ಬಿಡುಗಡೆಗಾಗಿ ಸರ್ಕಾರವು ಕೊಲ್ಲಿ ರಾಷ್ಟ್ರಗಳ ಜತೆ ಸಂಪರ್ಕದಲ್ಲಿದೆ’ ಎಂದು ಅವರು ಲೋಕಸಭೆಗೆ ತಿಳಿಸಿದರು. ರಾಜ್ಯಸಭೆಯಲ್ಲೂ ಈ ಬಗ್ಗೆ ಹೇಳಿಕೆ ನೀಡಿದರು.
ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂದಿಯಾ ಅವರು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದಾಗ, ‘ಇವು ಕೇವಲ ಒಂದೇ ಮೂಲವನ್ನು ಆಧರಿಸಿದ ಮಾಹಿತಿಗಳು’ ಎಂದು ಸುಷ್ಮಾ ಹೇಳಿದರು.
ಐಎಸ್ ಉಗ್ರರ ವಶದಿಂದ ತಪ್ಪಿಸಿಕೊಂಡು ಬಂದ ಹರ್ಜೀತ್ ಮಸ್ಸಿ ಸರ್ಕಾರದ ರಕ್ಷಣೆಯಲ್ಲಿ ಇದ್ದಾರೆ ಎಂದೂ ತಿಳಿಸಿದರು. 39 ಮಂದಿ ಸತ್ತಿದ್ದಾರೆ ಎಂದು ಒಬ್ಬ ವ್ಯಕ್ತಿ ಹೇಳುತ್ತಿದ್ದಾರೆ. ಆದರೆ ಆರು ಮೂಲಗಳು ಹೇಳುವ ಪ್ರಕಾರ ಇವರೆಲ್ಲ ಇನ್ನೂ ಬದುಕಿದ್ದಾರೆ. ನಮಗೆ ಈ ಬಗ್ಗೆ ಲಿಖಿತ ಸಂದೇಶ ಬಂದಿದೆ ಎಂದರು.
ಸರ್ಕಾರವು ದೇಶವನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿದೆ ಎನ್ನುವ ವಿರೋಧಪಕ್ಷಗಳ ಆರೋಪವನ್ನು ಅವರು ಅಲ್ಲಗಳೆದರು. ‘ನಾವು ಯಾಕೆ ದಿಕ್ಕುತಪ್ಪಿಸಬೇಕು? ಅಪಹೃತರ ಬಿಡುಗಡೆಗೆ ಯತ್ನಿಸುತ್ತಿದ್ದೇವೆ’ ಎಂದರು.
ಅಪಹೃತರ ಭಾರತೀಯರ ಬಗ್ಗೆ ಮಾಹಿತಿ ಪಡೆದುಕೊಂಡ ಬಳಿಕವಷ್ಟೇ ನಿತ್ಯವೂ ತಾವು ನಿದ್ದೆ ಮಾಡುವುದಾಗಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.