ಬೆಂಗಳೂರು: ‘ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಮೇಲ್ಸೇ ತುವೆ ನಿರ್ಮಿಸುವ ಯೋಜನೆ ಇನ್ನೂ ಅಂತಿಮಗೊಂಡಿಲ್ಲ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಸ್ಪಷ್ಟಪಡಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಉಕ್ಕಿನ ಮೇಲ್ಸೇತುವೆ ಸಾಗುವ ಮಾರ್ಗದಲ್ಲಿ ಮಾರ್ಪಾಡು ಮಾಡುವಂತೆ ಬಗ್ಗೆ ಸಲಹೆಗಳು ಬಂದಿವೆ. ಹೆಬ್ಬಾಳ– ಮೇಖ್ರಿ ವೃತ್ತ–ಜಯಮಹಲ್– ಕಂಟೋನ್ಮೆಂಟ್– ಕ್ವೀನ್ಸ್ ರಸ್ತೆ ಮೂಲಕ ವಿಧಾನಸೌಧವನ್ನು ಸಂಪರ್ಕಿಸುವಂತೆಯೂ ಸಲಹೆ ಬಂದಿದೆ.
ಈ ಪ್ರಸ್ತಾವನೆಯ ತಾಂತ್ರಿಕ ಅಂಶಗಳ ಕುರಿತು ಸಲಹೆ ಪಡೆಯಲಾಗುತ್ತಿದೆ. ಇದನ್ನೂ ಪರಿಶೀಲಿಸುತ್ತಿದ್ದೇವೆ. ಸಾಧಕ ಬಾಧಕ ನೋಡಿಕೊಂಡು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.
‘ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಯೋಜನೆಯಲ್ಲಿ ಮಾರ್ಪಾಡು ಮಾಡಲು ಅವಕಾಶ ಇದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಉಕ್ಕಿನ ಮೇಲ್ಸೇತುವೆ ಕಾಂಕ್ರೀಟ್ ಮೇಲ್ಸೇತುವೆಗಿಂತ ಹೆಚ್ಚು ಬಾಳಿಕೆ ಬರಲಿದೆ. ಜಪಾನ್ನಲ್ಲಿ ಐದು ಸ್ತರಗಳಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಿಸಿರುವ ಉದಾಹರಣೆಗಳಿವೆ’ ಎಂದು ಬಿಡಿಎ ಎಂಜಿನಿಯರಿಂಗ್ ಸದಸ್ಯ ಪಿ.ಎನ್.ನಾಯಕ್ ಅವರು ತಿಳಿಸಿದರು.
ಕೆಂಪೇಗೌಡ ಬಡಾವಣೆ: ಪಟ್ಟಿ ಇಂದು ಪ್ರಕಟ
‘ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಪಡೆದವರ ಪಟ್ಟಿಯನ್ನು ಶುಕ್ರವಾರ ಮಧ್ಯಾಹ್ನದೊಳಗೆ ಪ್ರಕಟಿಸಲಾಗುವುದು. ಆಕ್ಷೇಪಣೆ ಸಲ್ಲಿಸುವುದಕ್ಕೆ 15 ದಿನಗಳ ಕಾಲಾವಕಾಶ ನೀಡುತ್ತೇವೆ’ ಎಂದು ಬಿಡಿಎ ಆಯುಕ್ತ ರಾಜಕುಮಾರ್ ಖತ್ರಿ ತಿಳಿಸಿದರು.
‘ನಿವೇಶನ ಸಿಗದವರಿಗೆ ಆದಷ್ಟು ಶೀಘ್ರ ಠೇವಣಿಯ ಮೊತ್ತವನ್ನು ಹಿಂತಿರುಗಿಸುತ್ತೇವೆ’ ಎಂದು ಸಚಿವ ಜಾರ್ಜ್ ತಿಳಿಸಿದರು.