ನವದೆಹಲಿ (ಪಿಟಿಐ): ಮುಂಬೈ ದಾಳಿ ಸೂತ್ರಧಾರ ಉಗ್ರ ಹಫೀಜ್ ಸಯೀದ್ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಹಾಗಾಗಿ ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡುವುದಕ್ಕೆ ಆತನಿಗೆ ಅವ-ಕಾಶ ಇದೆ ಎಂದು ಪಾಕಿಸ್ತಾನ ಸೋಮವಾರ ಹೇಳಿದೆ.
‘ಹಫೀಜ್ ಸಯೀದ್ ಪಾಕಿಸ್ತಾನದ ಪ್ರಜೆ. ಹಾಗಾಗಿ ದೇಶದಲ್ಲಿ ಮುಕ್ತವಾಗಿ ಓಡಾಡುವುದಕ್ಕೆ ಆತನಿಗೆ ಅವಕಾಶ ಇದೆ. ಅದರಲ್ಲಿ ಏನು ಸಮಸ್ಯೆ... ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ’ ಎಂದು ಭಾರತದಲ್ಲಿ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಾಸಿತ್ ಹೇಳಿದ್ದಾರೆ. ನಿಯಂತ್ರಣ ರೇಖೆಗೆ ಅತ್ಯಂತ ಹತ್ತಿರದಲ್ಲಿ ಪಾಕಿಸ್ತಾನದ ಸೇನೆಯ ಜೊತೆಗೆ ಸಯೀದ್ ಕೆಲಸ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.
ಆತ ನಿರ್ದೋಷಿ ಎಂದು ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಆತನ ವಿರುದ್ಧ ಯಾವುದೇ ಪ್ರಕರಣದ ವಿಚಾರಣೆಯೂ ಬಾಕಿ ಇಲ್ಲ ಎಂದು ಬಾಸಿತ್ ತಿಳಿಸಿದ್ದಾರೆ.
2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ಸೂತ್ರಧಾರ ಹಫೀಜ್ ಎಂದು ಭಾರತ ಹೇಳುತ್ತಲೇ ಇದೆ. ಈ ದಾಳಿಯ ಸಂಚು, ಯೋಜನೆಗಳೆಲ್ಲವೂ ಪಾಕಿಸ್ತಾನದಲ್ಲಿಯೇ ನಡೆದಿದೆ. ಅಲ್ಲಿಂದಲೇ ದಾಳಿಯ ಅನುಷ್ಠಾನವೂ ನಡೆದಿದೆ. ಈ ದಾಳಿಯಲ್ಲಿ 166 ಜನರು ಬಲಿಯಾಗಿದ್ದರು. ಪಾಕಿಸ್ತಾನದಲ್ಲಿ ಈ ಪ್ರಕರಣದ ವಿಚಾರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಭಾರತ ಹಲವು ಬಾರಿ ಆಕ್ಷೇಪವನ್ನೂ ವ್ಯಕ್ತಪಡಿಸಿದೆ.
ಭಾರತದ ವಿರುದ್ಧ ಭಾರಿ ವಿರೋಧ ಹೊಂದಿರುವ ಈತನನ್ನು ‘ಭಯೋತ್ಪಾದಕ’ ಎಂದು ಅಮೆರಿಕವೂ ಘೋಷಿಸಿದೆ. ಭಾರತ ‘ಜಲ ಭಯೋತ್ಪಾದನೆ’ಯಲ್ಲಿ ತೊಡಗಿದೆ ಎಂದು ಇತ್ತೀಚೆಗೆ ಈತ ಆರೋಪಿಸಿದ್ದಾನೆ.
‘ಭಾರತ ಸರ್ಕಾರ ಒಂದೆಡೆ ಯಾವುದೇ ಸೂಚನೆ ನೀಡದೆ ನದಿಗಳಿಗೆ ನೀರು ಬಿಡುತ್ತಿದೆ. ಮತ್ತೊಂದೆಡೆ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವುದಾಗಿ ಹೇಳುತ್ತಿದೆ’ ಎಂದು ಪಾಕಿಸ್ತಾನ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಹಫೀಜ್ ಕಿಡಿ ಕಾರಿದ್ದಾನೆ.
ಮುಂಬೈ ದಾಳಿ ಸೂತ್ರಧಾರ: ಭಾರತ ತಿರುಗೇಟು |
---|
ನವದೆಹಲಿ (ಪಿಟಿಐ): ಹಫೀಜ್ ವಿರುದ್ಧ ಯಾವುದೇ ಪ್ರಕರಣ ಇಲ್ಲ, ಹಾಗಾಗಿ ಮುಕ್ತವಾಗಿ ಓಡಾಡುವುದಕ್ಕೆ ಆತನಿಗೆ ಅವಕಾಶ ಇದೆ ಎಂಬ ಪಾಕಿಸ್ತಾನದ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ. ಈ ಉಗ್ರ ಮುಂಬೈ ದಾಳಿಯ ಸೂತ್ರಧಾರ. ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವುದು ಪಾಕಿಸ್ತಾನದ ಕರ್ತವ್ಯವಾಗಿದೆ ಎಂದು ಭಾರತ ಹೇಳಿದೆ. |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.