ಪಟ್ನಾ (ಐಎಎನ್ಎಸ್): ಕಲಾಂ ನಿಧನದ ಸುದ್ದಿ ಕೇಳಿದಾಗಿನಿಂದ ಭೋಲಾ ಮಹ್ತೊ ಊಟ ಮಾಡಿಲ್ಲ. ಗುರುವಾರ ಕಲಾಂ ಅಂತ್ಯಕ್ರಿಯೆ ನೆರವೇರುವವರೆಗೆ ಉಪವಾಸ ಮಾಡುವುದಾಗಿ ಶಪಥ ಮಾಡಿದ್ದಾರೆ.
ಬಿಹಾರದ ನಲಂದಾ ಜಿಲ್ಲೆಯ ಪಿಲ್ಖಿ ಗ್ರಾಮದ ರೈತ ಮಹ್ತೊ ಅವರನ್ನು 2008ರಲ್ಲಿ ನಡೆದ ಕಹಿ ಘಟನೆ ಇನ್ನೂ ಕಾಡುತ್ತಿದೆ.
‘ಆ ವರ್ಷ ಕಲಾಂ ಅವರು ಮುಖ್ಯಮಂತ್ರಿ ನಿತೀಶ್್ ಕುಮಾರ್್ ಅವರೊಂದಿಗೆ ಉದ್ದೇಶಿತ ನಲಂದಾ ವಿಶ್ವವಿದ್ಯಾಲಯ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದರು.
ವಿ.ವಿಗಾಗಿ 446 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದಕ್ಕೆ ಸೂಕ್ತ ಪರಿಹಾರ ನೀಡಿಲ್ಲ ಎಂದು ನಾವೊಂದಿಷ್ಟು ಜನ ಪ್ರತಿಭಟನೆ ನಡೆಸಿದ್ದೆವು. ಆ ಸಂದರ್ಭದಲ್ಲಿ ಕಲಾಂ ಹಾಗೂ ನಿತೀಶ್್ ಅವರತ್ತ ಕಲ್ಲು ಎಸೆದಿದ್ದೆವು. ಈ ಘಟನೆಯ ಬಳಿಕ ನನ್ನಲ್ಲಿ ಅಪರಾಧಿ ಪ್ರಜ್ಞೆ ಕಾಡುತ್ತಿದೆ’ ಎನ್ನುತ್ತಾರೆ ಮಹ್ತೊ.
‘ಪ್ರತಿಭಟನೆಯ ಬಳಿಕ ಕಲಾಂ ಅವರು ಇತರ ಮೂವರು ಗ್ರಾಮಸ್ಥರೊಂದಿಗೆ ನನ್ನನ್ನು ಕರೆಸಿಕೊಂಡು ನಮ್ಮ ಸಂಕಷ್ಟ ಏನು ಎನ್ನುವುದನ್ನು ತಾಳ್ಮೆಯಿಂದ ಕೇಳಿದ್ದರು. ಕಲಾಂ ಅವರು ನಮಗೆ ದೊಡ್ಡ ಕೊಡುಗೆ (ವಿಶ್ವವಿದ್ಯಾಲಯ) ನೀಡಿದ್ದಾರೆ. ಇದರಿಂದ ಎಷ್ಟೋ ತಲೆಮಾರು ಉಪಯೋಗ ಪಡೆದುಕೊಳ್ಳಲಿದೆ. ಆದರೆ ಕಲಾಂ ವಿರುದ್ಧ ನಾವು ಮಾಡಿದ ಪ್ರತಿಭಟನೆ ಮಾತ್ರ ನನ್ನನ್ನು ಇನ್ನೂ ಕಾಡುತ್ತಿದೆ’ ಎಂದು ಮಹ್ತೊ ಅಂದಿನ ಘಟನೆಯನ್ನು ನೆನೆದು ಬೇಸರಪಟ್ಟುಕೊಳ್ಳುತ್ತಾರೆ.
ವಿಶ್ವವಿದ್ಯಾಲಯಕ್ಕೆ ಕಲಾಂ ಹೆಸರು (ತಿರುವನಂತಪುರ ವರದಿ): ಉದ್ದೇಶಿತ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಕಲಾಂ ಅವರ ಹೆಸರು ಇಡಲು ಕೇರಳ ಸರ್ಕಾರ ನಿರ್ಧರಿಸಿದೆ. ‘ಕಲಾಂ ಅವರ ಕೊಡುಗೆ ಗೌರವಾರ್ಥವಾಗಿ ಈ ವಿವಿಗೆ ಅವರ ಹೆಸರು ಇಡಲು ನಿಶ್ಚಯಿಸಿದ್ದೇವೆ’ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ವಿಧಾನಸಭೆಯಲ್ಲಿ ಬುಧವಾರ ತಿಳಿಸಿದರು.