ಶಿರಸಿ (ಉತ್ತರ ಕನ್ನಡ): ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಶಿರಸಿಯ ವಿಶ್ವಜಿತ್ ಪ್ರಕಾಶ ಹೆಗಡೆಗೆ ಐಐಟಿಯಲ್ಲಿ ಎಂಜಿನಿಯರಿಂಗ್ ಓದುವ ಆಸೆ.
‘ಶಾಲೆಯ ದಿನಗಳಲ್ಲಿ ಪ್ರತಿದಿನ 3–4 ತಾಸು ಅಭ್ಯಾಸ ಮಾಡುತ್ತಿದ್ದೆ. ಡಿಸೆಂಬರ್ ನಂತರದಲ್ಲಿ 8–10 ತಾಸು ಓದುವುದು, ಜೊತೆಗೆ ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು, ಅರ್ಥವಾಗದ ವಿಷಯಗಳ ಕುರಿತು ಶಿಕ್ಷಕರೊಂದಿಗೆ ಚರ್ಚೆ, ಗಣಿತ ಹಾಗೂ ವಿಜ್ಞಾನ ವಿಷಯದ ಟ್ಯೂಷನ್ ನನಗೆ ಪ್ರಥಮ ಸ್ಥಾನ ಪಡೆಯಲು ಸಹಕಾರಿಯಾಯಿತು’ ಎಂದು ಆತ ‘ಪ್ರಜಾವಾಣಿ’ಗೆ ತಿಳಿಸಿದ.
‘ರಾಜ್ಯದ ಮೊದಲ 5 ಸ್ಥಾನಗಳಲ್ಲಿ ಒಬ್ಬನಾಗಬಹುದೆಂದು ನಿರೀಕ್ಷಿಸಿದ್ದೆ. ಆದರೆ ಪ್ರಥಮ ಸ್ಥಾನ ಬಂದಿದ್ದು ತುಂಬಾ ಖುಷಿಯಾಗಿದೆ’ ಎಂದು ಹೇಳಿದ.
‘5ನೇ ತರಗತಿಯಿಂದ ಆತ ಒಮ್ಮೆಯೂ ಪ್ರಥಮ ಸ್ಥಾನ ಬಿಟ್ಟುಕೊಟ್ಟಿಲ್ಲ. ಓದಿನಲ್ಲಿ ಸದಾ ಮುಂದು. ಉತ್ತಮ ಚೆಸ್ ಆಟಗಾರ. 7 ಮತ್ತು 8ನೇ ತರಗತಿಯಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ್ದ’ ಎಂದು ಗೃಹಿಣಿಯಾಗಿರುವ ಅಮ್ಮ ಜಯಶ್ರೀ, ಉದ್ಯಮಿಯಾಗಿರುವ ತಂದೆ ಪ್ರಕಾಶ ಹೆಗಡೆ ಹೇಳಿದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಯೊಬ್ಬ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಇದೇ ಪ್ರಥಮ.