ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಯ ನಂತರ ಆಮ್ ಆದ್ಮಿ ಪಕ್ಷದ ನಾಯಕರಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ವೈಮನಸ್ಸು ಈಗ ಸ್ಫೋಟಗೊಂಡಿದೆ.
ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಪಕ್ಷದ ಮುಂದಿನ ನಡೆ ಕುರಿತು ಚರ್ಚಿಸಲು ಶುಕ್ರವಾರ ಕರೆಯಲಾದ ರಾಷ್ಟ್ರೀಯ ಕಾರ್ಯಕಾರಿಣಿ ನಾಯಕರ ಕಚ್ಚಾಟ, ಆರೋಪ ಮತ್ತು ಪ್ರತ್ಯಾರೋಪಗಳಿಗೆ ವೇದಿಕೆಯಾಯಿತು.
ಪಕ್ಷದ ಪ್ರಮುಖ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಮನೀಶ್ ಸಿಸೋಡಿಯಾ ನಡುವೆ ಆರಂಭವಾದ ಮಾತಿನ ಚಕಮಕಿ ಪಕ್ಷದೊಳಗಿನ ಆಂತರಿಕ ತಿಕ್ಕಾಟವನ್ನು ಬಹಿರಂಗಗೊಳಿಸಿತು.
‘ವ್ಯಕ್ತಿ ಆರಾಧನೆಗೆ ಪಕ್ಷ ಬಲಿಯಾಗುತ್ತಿದೆ’ ಎಂದು ಯಾದವ್ ಅವರು ಅರವಿಂದ್ ಕೇಜ್ರಿವಾಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಇದರಿಂದ ಕೆರಳಿದ ಕೇಜ್ರಿವಾಲ್ ಆಪ್ತ ಸಿಸೋಡಿಯಾ, ‘ಪಕ್ಷದ ಆಂತರಿಕ ವಿಷಯಗಳನ್ನು ಬಹಿರಂಗಗೊಳಿಸುತ್ತಿದ್ದೀರಿ’ ಎಂದು ತಿರುಗೇಟು ನಿಡಿದರು.
ಒಂದು ಹಂತದಲ್ಲಿ ನಾಯಕರ ಪರಸ್ಪರ ವೈಯಕ್ತಿಕ ನಿಂದನೆ ಮತ್ತು ಟೀಕೆಗಳಿಂದ ಸಭೆ ಗೊಂದಲದ ಗೂಡಾಯಿತು. ಮತ್ತೊಂದೆಡೆ, ಇವರಿಬ್ಬರು ಪಕ್ಷದ ನಾಯಕತ್ವ ವೈಖರಿ ಕುರಿತು ಬರೆದಿರುವ ಪತ್ರಗಳು ಕೂಡ ಶುಕ್ರವಾರ ಮಾಧ್ಯಮಗಳಿಗೆ ಸೋರಿಕೆಯಾಗಿ ಚರ್ಚೆಗೆ ಗ್ರಾಸವಾಗಿದೆ.
ಕೇಜ್ರಿವಾಲ್ ವಿರುದ್ಧ ಆರೋಪ ದಾಖಲು: ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪದ ಹೇಳಿಕೆಯನ್ನು ಹಿಂದಕ್ಕೆ ಪಡೆಯಲು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್ ನಿರಾಕರಿಸಿದ್ದಾರೆ. ಈ ವಾಗ್ವಾದಗಳನ್ನು ಕೊನೆಗಳಿಸಿ, ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿ ಎಂದು ದೆಹಲಿಯ ನ್ಯಾಯಾಲಯವೊಂದು ನೀಡಿದ ಸಲಹೆಯನ್ನು ಕೇಜ್ರಿವಾಲ್ ನಿರಾಕರಿಸಿದರು.
ಹೀಗಾಗಿ ದೆಹಲಿಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಗೋಮತಿ ಮನೋಚ ಅವರು ಅಪರಾಧ ದಂಡ ಸಂಹಿತೆಯ 251ನೇ ಸೆಕ್ಷನ್ ಪ್ರಕಾರ ಕೇಜ್ರಿವಾಲ್ ಅವರ ವಿರುದ್ಧ ಮಾನನಷ್ಟ ಆರೋಪ ದಾಖಲಿಸಿದ್ದಾರೆ. ಗಡ್ಕರಿ ಮತ್ತು ಅವರ ಪರವಾಗಿರುವ ಸಾಕ್ಷಿಗಳನ್ನು ದಾಖಲು ಮಾಡಲು ಆಗಸ್ಟ್ 2ನೇ ತಾರೀಕನ್ನು ನಿಗದಿ ಮಾಡಿದ್ದಾರೆ.
ನಿತಿನ್ ಗಡ್ಕರಿ ವಿರುದ್ಧ ಜ.30ರಂದು ಕೇಜ್ರಿವಾಲ್ ಭ್ರಷ್ಟಾಚಾರದ ಆರೋಪ ಮಾಡಿದ್ದರು. ‘ಗಡ್ಕರಿ ಭ್ರಷ್ಟ ರಾಜಕಾರಣಿಯಾಗಿದ್ದು, ಮತ ಹಾಕುವ ಮುನ್ನ ಯೋಚಿಸಿ’ ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದರು. ಕೋರ್ಟ್ ಆರೋಪ ದಾಖಲಿಸಿದ ನಂತರ ಕೇಜ್ರಿವಾಲ್ ಪ್ರಕರಣದಲ್ಲಿ ತಮ್ಮದೇನೂ ತಪ್ಪಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.