ಬೆಂಗಳೂರು: ನಿಲುಗಡೆ ನಿಷೇಧ ಸ್ಥಳದಲ್ಲಿ ವಾಹನ ನಿನಿಲ್ಲಿಸಿದ್ದ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುವ ಬದಲು, ಹಣ ಪಡೆದು ಬಿಟ್ಟು ಕಳುಹಿಸಿದ ಆರೋಪದ ಮೇಲೆ ರಾಜಾಜಿನಗರ ಸಂಚಾರ ಠಾಣೆ ಎಎಸ್ಐ ಬಿ. ತಿಮ್ಮಯ್ಯ ಅವರನ್ನು ಅಮಾನತು ಮಾಡಲಾಗಿದೆ.
ತಿಮ್ಮಯ್ಯ ಅವರಿಗೆ ಏಪ್ರಿಲ್ 7ರಂದು ಟೋಯಿಂಗ್ ವಾಹನ ನೀಡಿ ನಿಲುಗಡೆ ನಿಷೇಧ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದ ಚಾಲಕರ ವಿರುದ್ಧ ಪ್ರಕರಣ ದಾಖಲಿಸುವ ಕೆಲಸಕ್ಕೆ ನಿಯೋಜಿಸಲಾಗಿತ್ತು.
ತಿಮ್ಮಯ್ಯ, ಡಾ.ರಾಜ್ಕುಮಾರ್ ರಸ್ತೆಯ ನಿಲುಗಡೆ ನಿಷೇಧವಿದ್ದ ಸ್ಥಳದಲ್ಲಿ ನಿಲ್ಲಿಸಿದ್ದ 31 ವಾಹನಗಳನ್ನು ಟೋಯಿಂಗ್ ವಾಹನದಲ್ಲಿ ತೆಗೆದುಕೊಂಡು ಹೋಗಿದ್ದರು. ಅದರಲ್ಲಿ ಕೇವಲ 10 ವಾಹನಗಳ ಚಾಲಕರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿ ತಲಾ ₨ 300 ದಂಡ ವಿಧಿಸಿದ್ದರು.
ಉಳಿದ ವಾಹನಗಳಲ್ಲಿ 7 ದ್ವಿಚಕ್ರ ವಾಹನ ಸವಾರರಿಗೆ ₨ 300 ದಂಡ ವಿಧಿಸುವ ಬದಲು, ಅವರಿಂದ ₨ 100 ವಸೂಲಿ ಮಾಡಿದ್ದರು. ಅಲ್ಲದೇ, ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರಲಿಲ್ಲ ಮತ್ತು ಆ ವಿವರಗಳನ್ನು ನೋಂದಣಿ ಪುಸ್ತಕದಲ್ಲಿ ನಮೂದಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ನಿಲುಗಡೆ ನಿಷೇಧವಿದ್ದ ಸ್ಥಳದಲ್ಲಿ ನಿಲ್ಲಿಸಿದ್ದ ಇಮ್ತಿಯಾಜ್ ಪಾಶಾ ಎಂಬುವರ ದ್ವಿಚಕ್ರ ವಾಹನವನ್ನು ಟೋಯಿಂಗ್ ವಾಹನದಲ್ಲಿ ತೆಗೆದುಕೊಂಡು ಹೋಗಲಾಗಿತ್ತು. ತಮ್ಮ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಲು ಬಂದಿದ್ದ ಇಮ್ತಿಯಾಜ್ ಅವರಿಗೆ ದಂಡ ವಿಧಿಸುವ ಬದಲು ಅವರಿಂದ ತಿಮ್ಮಯ್ಯ, ಹಣ ವಸೂಲಿ ಮಾಡಿದ್ದರು. ಈ ಸಂಬಂಧ ಇಮ್ತಿಯಾಜ್, ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು.
ಈ ಬಗ್ಗೆ ಪರಿಶೀಲಿಸಿದಾಗ ತಿಮ್ಮಯ್ಯ ಅವರು ನೋಂದಣಿ ಪುಸ್ತಕದಲ್ಲಿ ಮಾಹಿತಿ ಸರಿಯಾಗಿ ನಮೂದಿಸದಿರುವುದು ಗೊತ್ತಾಯಿತು. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಸಂಚಾರ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದರು