ಬೆಂಗಳೂರು (ಪಿಟಿಐ): ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಕಂಪೆನಿಯು ಏಪ್ರಿಲ್ 1ರ ವೇಳೆಗೆ ತನ್ನ ಆಡಳಿತ ಮಂಡಳಿಯನ್ನು ಪುನರ್ರಚಿಸಲಿದೆ ಎಂದು ಅಧ್ಯಕ್ಷ ಆರ್.ಕೆ. ತ್ಯಾಗಿ ಹೇಳಿದರು.
ಇದೇ 31ರಂದು ಸೇವೆಯಿಂದ ನಿವೃತ್ತಿ ಆಗಲಿರುವ ತ್ಯಾಗಿ ಅವರು ನಗರದಲ್ಲಿ ಬುಧವಾರ ಮಾತನಾಡಿ, ‘ಕೇವಲ ತಯಾರಿಕಾ ಕಂಪೆನಿಯಾಗಿ ಗುರುತಿಸಿಕೊಳ್ಳದೆ, ವೈಮಾನಿಕ ತಂತ್ರಜ್ಞಾನ ಕ್ಷೇತ್ರದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಎಚ್ಎಎಲ್ ಬಯಸಿದೆ. ‘ಮೂರು ವರ್ಷಗಳ ಅವಧಿಯಲ್ಲಿ ಎಚ್ಎಎಲ್ ಅನ್ನು ತಂತ್ರಜ್ಞಾನ ಕಂಪೆನಿಯನ್ನಾಗಿ ಬದಲಾಯಿಸಲು ಪ್ರಯತ್ನ ಪಟ್ಟಿದ್ದೇವೆ’ ಎಂದರು.
‘ಕಂಪನಿಯು ಶೀಘ್ರ ಗತಿಯಲ್ಲಿ ಆಧುನೀಕರಣಕ್ಕೆ ತೆರೆದುಕೊಳ್ಳುತ್ತಿದೆ. ಎರಡು ವರ್ಷಗಳ ಅವಧಿಯಲ್ಲಿ ಎಚ್ಎಎಲ್ ಆಡಳಿತ ಮಂಡಳಿಯು ₨7 ಸಾವಿರ ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಒಪ್ಪಿಗೆ ಸೂಚಿಸಿದೆ. 5 ಸಾವಿರಕ್ಕಿಂತಲೂ ಹೆಚ್ಚು ಪೇಟೆಂಟ್ಗಳನ್ನು (ಹಕ್ಕುಸ್ವಾಮ್ಯ) ಹೊಂದಿರುವ ಎಚ್ಎಎಲ್, ‘ಮಹಾರತ್ನ’ ಕಂಪೆನಿಯಾಗಬೇಕು ಎಂಬುದು ನಮ್ಮ ಕನಸು’ ಎಂದು ಅವರು ಹೇಳಿದರು.