ದೇವನಹಳ್ಳಿ: ಬಯಲು ಸೀಮೆಯ ಶಾಶ್ವತ ಕುಡಿಯುವ ನೀರಿನ ಯೋಜನೆ ಗೆ ಪರಮಶಿವಯ್ಯ ವರದಿ ಸೂಕ್ತವಾಗಿದ್ದು ಎತ್ತಿನಹೊಳೆ ಯೋಜನೆ ಜಾರಿಗೆ ನಮ್ಮ ವಿರೋಧ ವಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಕಲ್ಯಾಣ ಕುಮಾರ್ ತಿಳಿಸಿದರು.
ಗುರುವಾರ ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಎತ್ತಿನಹೊಳೆ ಸೇರಿದಂತೆ ಯಾವುದೇ ಒಂದು ಯೋಜನೆಗೂ ಸಮಗ್ರ ವರದಿಯಾಗಿಲ್ಲ ಅರಣ್ಯ ಮತ್ತು ಪರಿಸರದ ಸಾಧಕ ಬಾಧಕಗಳ ಬಗ್ಗೆ ಕೇಂದ್ರದಿಂದ ಅನುಮತಿ ಪಡೆದಿಲ್ಲ ವಾದರೂ ಕೇಂದ್ರ ಸಚಿವ ಮೊಯ್ಲಿ ಕಾವೇರಿ ನೀರನ್ನು ಬಯಲು ಸೀಮೆಗೆ ಹರಿಸಲಾಗುವುದು ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದರು.
ರೈತ ಸಂಘ ರಾಜ್ಯ ಉಪಾಧ್ಯಕ್ಷ ಚಂದ್ರತೃಜಸ್ವಿ ಮಾತನಾಡಿ, ಎತ್ತಿನ ಹೊಳೆ ಯೋಜನೆಗಿಂತ ಶಾಶ್ವತ ಸಮಗ್ರ ಯೋಜನೆ ಬಯಲು ಸೀಮೆಗೆ ಅವಶ್ಯಕತೆ ಇದೆ ಮೊಯ್ಲಿಯವರು ಚಿಕ್ಕಬಳ್ಳಾಪುರ ಮುದ್ದೇನಹಳ್ಳಿ ಬಳಿ ಶಂಕು ಸ್ಥಾಪನೆ ಮಾಡುವ ಬದಲು ಎತ್ತಿನಹೊಳೆಯ ಕಾಮಗಾರಿ ಆರಂಭದ ಸ್ಥಳದಲ್ಲೆ ಮಾಡಲಿ ಎಂದರು. ಜನವರಿ 28ರಂದು ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ಪ್ರತಿಭಟನೆಗೆ ಪಕ್ಷಾತೀತವಾಗಿ ಭಾಗವಹಿಸುತ್ತಿದ್ದೆವೆ ಎಂದರು.
ರಾಜ್ಯ ರೈತ ಸಂಘ ಉಪಾಧ್ಯಕ್ಷ ವೆಂಕಟನಾರಾಯಣಪ್ಪ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಪ್ರಾಂತ ರೈತ ಸಂಘ ತಾಲ್ಲೂಕು ಅಧ್ಯಕ್ಷ ವೀರಣ್ಣ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್, ಹೊಸಕೋಟೆ ತಾಲ್ಲೂಕು ರೈತ ಸಂಘ ಅಧ್ಯಕ್ಷ ಕೆಂಚೇಗೌಡ ಮತ್ತು ಸತೀಶ್, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಆರ್.ಎನ್.ಕೃಷ್ಣಮೂರ್ತಿ, ರೈತ ಮುಖಂಡ ಗೋಪಾಲಸ್ವಾಮಿ, ಸುಬ್ಬಣ್ಣ ಉಪಸ್ಥಿತರಿದ್ದರು.