ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಸರ್ಕಾರಿ ಸ್ವಾಮ್ಯದ ಹೆಲಿಕಾಪ್ಟರ್ ಸಂಸ್ಥೆ ಪವನ್ ಹಂಸ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವನ್ನು (ಎಎಐ) ಷೇರುಪೇಟೆಯಲ್ಲಿ ನೋಂದಾಯಿಸುವ ಬಗ್ಗೆ ತಮ್ಮ ಆಲೋಚನೆ ಹಂಚಿಕೊಂಡಿದ್ದರು. ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನೂ ಖಾಸಗೀಕರಣಗೊಳಿಸುವ ಬಗ್ಗೆ ಸಣ್ಣ ಸುಳಿವನ್ನು ಆಗ ಅವರು ನೀಡಿದ್ದರು. ‘ಕಾಲ ಬದಲಾಗಿದೆ’ ಎಂದಿದ್ದ ಅವರು ಸ್ಪಷ್ಟ ನಿರ್ಧಾರವನ್ನೇನೂ ಪ್ರಕಟಿಸಲಿಲ್ಲ. ಇದಕ್ಕೆ ಯಾವ ಪ್ರತಿಕ್ರಿಯೆ ಬರಬಹುದು ಎನ್ನುವುದನ್ನು ತಿಳಿಯಲು ಬಹುಶಃ ಸಚಿವರು ಈ ರೀತಿ ಮಾತನಾಡಿರಬಹುದು.
ಕೆಲ ವರ್ಷಗಳ ಹಿಂದೆ ಏರ್ ಇಂಡಿಯಾವನ್ನು ಇಂಡಿಯನ್ ಏರ್ಲೈನ್ ಜತೆ ವಿಲೀನಗೊಳಿಸಿದ ನಂತರ, ನಷ್ಟಪೀಡಿತ ಏರ್ ಇಂಡಿಯಾದ (ಎ.ಐ.) ಬಗ್ಗೆ ಪ್ರತಿದಿನವೂ ಒಂದಲ್ಲ ಒಂದು ಕೆಟ್ಟ ಸುದ್ದಿ ಕೇಳಿ ಬರುತ್ತಲೇ ಇದೆ. ಸರ್ಕಾರವು ತಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಲೇಬೇಕೆಂದು ಪಟ್ಟು ಹಿಡಿದು ಪೈಲಟ್ಗಳು ಮುಷ್ಕರ ನಡೆಸುತ್ತಾರೆ, ವಿಮಾನಗಳ ಹಾರಾಟ ರದ್ದತಿಯಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ.
ಪ್ರಮುಖ ಮಾರ್ಗಗಳಲ್ಲಿ ಹಾರಾಟ ಮುಂದುವರಿಸಲು ಇತರ ವಿಮಾನಗಳ ಹಾರಾಟಕ್ಕೆ ಕತ್ತರಿ ಹಾಕುವುದು, ಆಡಳಿತ ಮಂಡಳಿಗೆ ಭಾರಿ ಪ್ರಮಾಣದಲ್ಲಿ ಉಚಿತ ಕೊಡುಗೆಗಳ ಘೋಷಣೆ, ಹೊಸ ವಿಮಾನಗಳ ಖರೀದಿಗೆ ಸಂಬಂಧಿಸಿದ ವಿವಾದಗಳು ಮತ್ತು ಸಿಬಿಐ ತನಿಖೆ, ಮಹಾಲೇಖಪಾಲರ ಛೀಮಾರಿ ಮುಂತಾದವು ಏರ್ ಇಂಡಿಯಾದ ಕೊನೆ ಮೊದಲಿಲ್ಲದ ಸಂಕಷ್ಟಗಳ ಸರಮಾಲೆಯಲ್ಲಿ ಇವೆ.
ವಿಲೀನ ಪ್ರಕ್ರಿಯೆಯು ಉದ್ದೇಶಿತ ಫಲ ನೀಡಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಂಡರೂ, ಸರ್ಕಾರ ಮಾತ್ರ ತೋರಿಕೆಯ ಬದಲಾವಣೆಗೆ ಪ್ರಯತ್ನಿಸುತ್ತಲೇ ಇದೆ. ನಮ್ಮ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಕ್ಯಾನ್ಸರ್ ದೂರ ಮಾಡಲು ಗಂಭೀರ ಪ್ರಯತ್ನವನ್ನೇ ಮಾಡುತ್ತಿಲ್ಲ.
ಪೂರ್ಣ ಪ್ರಮಾಣದ ವಿಮಾನಯಾನ ಸಂಸ್ಥೆಗಳಾದ ಸಿಂಗಪುರ ಏರ್ಲೈನ್ಸ್ ಮತ್ತು ದ ಎಮಿರೇಟ್ಸ್ ಮಾತ್ರ ಸದ್ಯಕ್ಕೆ ವಿಶ್ವದಲ್ಲಿ ಲಾಭದಾಯಕವಾಗಿ ಮುನ್ನಡೆದಿದ್ದು, ದಕ್ಷತೆಗೂ ಹೆಸರುವಾಸಿಯಾಗಿವೆ. ಇವೆರಡೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿದ್ದರೂ, ಆಡಳಿತ ನಿರ್ವಹಣೆ ಮಾತ್ರ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಈ ಎರಡೂ ದೇಶಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೂ ಇಲ್ಲ. ನಾವು ಹುರುಪಿನ, ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಮತ್ತು ಕೆಲವೊಮ್ಮೆ ಗೊಂದಲಕ್ಕೂ ಕಾರಣವಾಗುವ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ್ದೇವೆ. ಈ ವ್ಯವಸ್ಥೆ ಪರಿಪೂರ್ಣವಲ್ಲದಿದ್ದರೂ, ಸರ್ವಾಧಿಕಾರ ವ್ಯವಸ್ಥೆಗೆ ಹೋಲಿಸಿದರೆ ಇದೇ ಉತ್ತಮವಾಗಿದೆ.
ಕೆಲ ವಾಸ್ತವಾಂಶಗಳೂ ಏರ್ ಇಂಡಿಯಾದ ಸಂಕಷ್ಟದ ಸ್ಥಿತಿಗೆ ಕನ್ನಡಿ ಹಿಡಿಯುತ್ತವೆ. ಈ ವಿಮಾನಯಾನ ಸಂಸ್ಥೆ ₨ 40 ಸಾವಿರ ಕೋಟಿಗಳ ಸಾಲದ ಸುಳಿಯಲ್ಲಿ ಸಿಲುಕಿದೆ. ಇಷ್ಟು ಮೊತ್ತದ ಬಂಡವಾಳದಿಂದ ಯಾರೇ ಆಗಲಿ 100 ವಿಮಾನ ಯಾನ ಸಂಸ್ಥೆಗಳನ್ನು ಸ್ಥಾಪಿಸಬಹುದು. ಟಾಟಾ ಸಂಸ್ಥೆ ಜತೆಗಿನ ಜಂಟಿ ಯೋಜನೆಯಲ್ಲಿ ಏರ್ ಏಷ್ಯಾದ ಪಾಲು ಬಂಡವಾಳವು 50 ದಶಲಕ್ಷ ಡಾಲರ್ಗಳಿಗಿಂತ (ಅಂದಾಜು ₨ 300 ಕೋಟಿ) ಕಡಿಮೆ ಇದೆ. ಏರ್ ಇಂಡಿಯಾದಲ್ಲಿ ಸಿಬ್ಬಂದಿ ಸಂಖ್ಯೆಯೂ ಗರಿಷ್ಠ ಪ್ರಮಾಣದಲ್ಲಿ ಇದೆ. ಇಂಡಿಗೊ ಸಂಸ್ಥೆಯಲ್ಲಿ ಪ್ರತಿಯೊಂದು ವಿಮಾನಕ್ಕೆ 70 ಸಿಬ್ಬಂದಿ ಇದ್ದರೆ, ಏರ್ ಇಂಡಿಯಾದಲ್ಲಿ 475 ಸಿಬ್ಬಂದಿ ಇರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ.
ನಿರ್ವಹಣೆಯಲ್ಲಿನ ನಿರ್ಲಕ್ಷ್ಯ, ಬಿಡಿಭಾಗಗಳ ಅಲಭ್ಯತೆ ಮತ್ತಿತರ ಕಾರಣಗಳಿಂದ ಏರ್ ಇಂಡಿಯಾದ ಶೇ 30ರಷ್ಟು ವಿಮಾನಗಳ ಹಾರಾಟ ರದ್ದಾಗಿರುತ್ತದೆ. ಸಂಸ್ಥೆಯ ಕಾರ್ಮಿಕ ಸಂಘಟನೆಯಲ್ಲಿಯೂ ಹಲವಾರು ಬಣಗಳಿವೆ. ಇನ್ನೊಂದೆಡೆ ಈ ಸಿಬ್ಬಂದಿಗೆ ಸೂಕ್ತ ನಾಯಕತ್ವವೂ ಇಲ್ಲ. ವಿಮಾನಯಾನ ಸಂಸ್ಥೆಯ ದಕ್ಷತೆ ಅಳೆಯುವ ಜಾಗತಿಕ ಮಾನದಂಡವಾಗಿರುವ– ಲಭ್ಯ ಇರುವ ಪ್ರತಿ ಸೀಟಿನ ಕಿಲೋಮೀಟರ್ ವೆಚ್ಚದ (ಸಿಎಎಎಸ್ಕೆ) ಪ್ರಕಾರ, ಏರ್ ಇಂಡಿಯಾದ ವೆಚ್ಚವು ಇಂಡಿಗೋದ ನಾಲ್ಕು ಪಟ್ಟು ಮತ್ತು ಏರ್ ಏಷ್ಯಾದ ಐದು ಪಟ್ಟು ಹೆಚ್ಚಿಗೆ ಇದೆ.
ಇದು ವಿಶ್ವದಲ್ಲಿಯೇ ಗರಿಷ್ಠ ಮಟ್ಟದಲ್ಲಿ ಇದೆ. ರಾಜಕೀಯ ಪ್ರಭಾವದಿಂದ ನೇಮಕಗೊಂಡಿರುವ ಅನನುಭವಿ ಅಧಿಕಾರಶಾಹಿಯೇ ಎ.ಐ. ಆಡಳಿತವನ್ನು ನಿರ್ವಹಿಸುತ್ತಿದ್ದು, ಅದಕ್ಕೆ ಸ್ವಾಯತ್ತತೆಯಾಗಲಿ, ವಿಶ್ವಾಸಾರ್ಹತೆಯಾಗಲಿ ಇಲ್ಲ. ಹೀಗಾಗಿ ಸಂಸ್ಥೆಗೆ ಲಾಭದಾಯಕವಾಗಿ ಮುನ್ನಡೆಯುವ ದೂರದೃಷ್ಟಿಯೇ ಇಲ್ಲದಂತಾಗಿದೆ.
ಕೇಂದ್ರ ಸರ್ಕಾರದ ರಾಜಕೀಯ ಹಸ್ತಕ್ಷೇಪವು ಏಐಯನ್ನು ಹಾಳುಗೆಡವಿದೆ. ಇಂತಹ ಪ್ರವೃತ್ತಿ ಸದ್ಯಕ್ಕೆ ಬದಲಾಗುವ ಸಾಧ್ಯತೆಗಳೂ ಇಲ್ಲ. ಈ ವಾಸ್ತವತೆಯನ್ನು ನಾವೆಲ್ಲ ಎದುರಿಸಬೇಕಾಗಿದೆ. ಸರ್ಕಾರಿ ಸ್ವಾಮ್ಯದ ಎಲ್ಲ ಉದ್ದಿಮೆ ಸಂಸ್ಥೆಗಳಂತೆ ಎ.ಐ. ದಲ್ಲಿಯೂ ಯಾವುದೇ ಹಂತದಲ್ಲಿಯೂ ಉತ್ತರದಾಯಿತ್ವವಾಗಲಿ ಅಥವಾ ದಿವಾಳಿ ಏಳುವ ಭೀತಿಯಾಗಲಿ ಕಾಣುತ್ತಿಲ್ಲ.
ಕಿಂಗ್ ಫಿಷರ್ ಏರ್ಲೈನ್ಸ್ನ ಸ್ವತಂತ್ರ ನಿರ್ದೇಶಕರನ್ನು ಬ್ಯಾಂಕ್ಗಳು ಬೆನ್ನತ್ತಿ ಅವರನ್ನು ‘ಉದ್ದೇಶಪೂರ್ವಕ ಸುಸ್ತಿದಾರರು’ ಎಂದು ಘೋಷಿಸಿವೆ. ಅದೇ ನಿಯಮವನ್ನು ಎರಡು ದಶಕಗಳ ಅವಧಿಯಲ್ಲಿನ ಏರ್ ಇಂಡಿಯಾದ ಎಲ್ಲ ನಿರ್ದೇಶಕರಿಗೂ ಅನ್ವಯಿಸಿ ವಿಚಾರಣೆಗೆ ಗುರಿಪಡಿಸಬೇಕಾಗಿದೆ.
ಅಂತಿಮವಾಗಿ ಸರ್ಕಾರವೇ ಮಣಿದು, ಪರಿಹಾರ ಘೋಷಿಸುತ್ತದೆ ಎನ್ನುವ ದೃಢ ನಂಬಿಕೆಯು ಎ.ಐ. ಆಡಳಿತ ಮಂಡಳಿಗೆ ಮತ್ತು ಪ್ರತಿಯೊಬ್ಬ ನೌಕರನಿಗೆ ಇದೆ. ಪ್ರತಿಯೊಬ್ಬರ ಪಾಲಿಗೆ, ಎ.ಐ., ‘ಪವಿತ್ರ ಹಸು’ ಆಗಿ ಪರಿಣಮಿಸಿದೆ.
ಈ ಬಿಕ್ಕಟ್ಟಿನಿಂದ ಪಾರಾಗಲು ದಾರಿಯೇ ಇಲ್ಲವೇ? ಎನ್ನುವ ಪ್ರಶ್ನೆಗೆ ಇದೆ ಎಂದೇ ಉತ್ತರಿಸಬೇಕಾಗುತ್ತದೆ. ರಾಜಕೀಯ ಜಾಣ್ಮೆ ಮತ್ತು ಇಚ್ಛಾಶಕ್ತಿ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಇದೆ. ಎರಡು ದಶಕಗಳ ಹಿಂದೆ ಬ್ರಿಟಿಷ್ ಏರ್ವೇಸ್ ಮತ್ತು ಲುಫ್ತಾನ್ಸಾ ವಿಮಾನಯಾನ ಸಂಸ್ಥೆಗಳು ದಿವಾಳಿ ಏಳುವ ಹಂತ ತಲುಪಿದ್ದರಿಂದ ಅವುಗಳನ್ನು ಖಾಸಗೀಕರಣಗೊಳಿಸಲಾಯಿತು. ಎ.ಐ. ಇನ್ನೂ ಆ ಹಂತಕ್ಕೆ ತಲುಪಿಲ್ಲ. ಸಂಸ್ಥೆಯ ಬಳಿ ಭಾರಿ ಪ್ರಮಾಣದಲ್ಲಿ ಭೂಮಿ, ವ್ಯಾಪಕ ಸಂಪರ್ಕ ಜಾಲ ಇದೆ. ಜನಪ್ರಿಯ ಬ್ರ್ಯಾಂಡ್ನ ಬೆಂಬಲ ಇದೆ. ಇದನ್ನು ಮೂರು ಪ್ರತ್ಯೇಕ ಸಂಸ್ಥೆಗಳಾಗಿ ವಿಂಗಡಿಸಿ ಲಾಭದಾಯಕವಾಗಿ ಮುನ್ನಡೆಸಲು ಸಾಧ್ಯವಿದೆ.
ದೇಶದಾದ್ಯಂತ ಎ.ಐ. ಒಡೆತನದಲ್ಲಿ ಇರುವ ಭೂಮಿ ಮತ್ತು ಕಟ್ಟಡಗಳಿಗೆ ಪ್ರತ್ಯೇಕ ಸಂಸ್ಥೆ ಸ್ಥಾಪಿಸಿ ಅವುಗಳನ್ನು ಮಾರಾಟ ಮಾಡಬೇಕು. ಇದರಿಂದ ಬರುವ ಹಣವನ್ನು ಹೆಚ್ಚುವರಿ ಸಿಬ್ಬಂದಿಯ ಸ್ವಯಂನಿವೃತ್ತಿ ಯೋಜನೆಗೆ ಬಳಸಿಕೊಳ್ಳಬೇಕು. ‘ಸುವರ್ಣ ಹಸ್ತಲಾಘವ’ ಯೋಜನೆಯಡಿ ನಿವೃತ್ತರಿಗೆ ಪರಿಹಾರ ಒದಗಿಸಿದ ನಂತರವೂ ಸಾಕಷ್ಟು ಹಣ ಉಳಿಯುವ ಸಾಧ್ಯತೆ ಇದೆ.
ಮುಂಬೈ ಸೇರಿದಂತೆ ದೇಶದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಎ.ಐ. ಬಳಿ ಸಾಕಷ್ಟು ಭೂಮಿ ಇದೆ. ಒಂದು ವೇಳೆ ಹಣದ ಕೊರತೆ ಬಿದ್ದರೂ ಸರ್ಕಾರ ಅದನ್ನು ಭರ್ತಿ ಮಾಡಿಕೊಡಬಹುದು. ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಹೋಲಿಸಿದರೆ ವರ್ಷಕ್ಕೆ ಸಾವಿರಾರು ಕೋಟಿಗಳನ್ನು ಕಳೆದುಕೊಳ್ಳುವ ಬದಲಿಗೆ ಭೂಮಿ ಮಾರಾಟ ಮಾಡಿ ನಷ್ಟದ ಕೂಪದಿಂದ ಹೊರ ಬರುವುದೇ ಉತ್ತಮ ಎನಿಸುತ್ತದೆ.
ಭೂಮಿ ಮಾರಾಟ ಮಾಡಿ ಬರುವ ಹಣದಲ್ಲಿ ಹೆಚ್ಚುವರಿ ಸಿಬ್ಬಂದಿಯ ಸ್ವಯಂ ನಿವೃತ್ತಿಗೆ ವೆಚ್ಚ ಮಾಡಿದ ನಂತರ, ಕಡಿಮೆ ಸಿಬ್ಬಂದಿ ಮತ್ತು ಸಂಸ್ಥೆ ನಡೆಸಲು ಸಾಕಾಗುವಷ್ಟು ಸಂಪತ್ತು ಕಾಯ್ದುಕೊಂಡು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗಲಿದೆ. ಆನಂತರ ಎ.ಐ. ಅನ್ನು ಅಧಿಕ ಬೆಲೆಗೆ ಖಾಸಗಿಗೆ ಮಾರಾಟ ಮಾಡಬಹುದು. ಯಾವುದೇ ಹೂಡಿಕೆದಾರರಿಗೆ ಎ.ಐ.ಖರೀದಿಸುವುದು ತುಂಬ ಲಾಭದಾಯಕವಾಗಿರಲಿದೆ. ಸರ್ಕಾರವು ಶೇ 49 ಅಥವಾ ಶೇ 51ರಷ್ಟು ಪಾಲು ಬಂಡವಾಳ ಇಟ್ಟುಕೊಳ್ಳಬಹುದು. ಕೆಲ ಕಾಲದ ನಂತರ ಆ ಪಾಲನ್ನೂ ಬಿಟ್ಟುಕೊಟ್ಟು ಸಂಸ್ಥೆಯನ್ನು ಷೇರುಪೇಟೆಯಲ್ಲಿ ವಹಿವಾಟು ನಡೆಸಲು ಅವಕಾಶ ಕಲ್ಪಿಸಿಕೊಡಬಹುದು.
ಎ.ಐ. ಬಳಿ ಎಂಜಿನಿಯರಿಂಗ್ ಪರಿಣತರ ದೊಡ್ಡ ತಂಡವೇ ಇದೆ. ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತಿತರ ತಾಂತ್ರಿಕ ಅಗತ್ಯಗಳಿಗಾಗಿ ಏರ್ ಇಂಡಿಯಾ ಎಂಆರ್ (ಸಂಪೂರ್ಣ ದುರಸ್ತಿ) ಸಂಸ್ಥೆಯನ್ನೇ ಸ್ಥಾಪಿಸಬಹುದು. ಲುಫ್ತಾನ್ಸಾ ಏರ್ ಲೈನ್ಸ್ನಿಂದ, ಲುಫ್ತಾನ್ಸಾ ಟೆಕ್ನಿಕ್ ಅನ್ನು ಬೇರ್ಪಡಿಸಿ ಖಾಸಗೀಕರಣಗೊಳಿಸಿದಂತೆ ಇದನ್ನೂ ಖಾಸಗಿಗೆ ಮಾರಾಟ ಮಾಡಬಹುದು.
ಈ ಖಾಸಗೀಕರಣ ಪ್ರಕ್ರಿಯೆಯನ್ನು ಜಾಣತನದಿಂದ ಕಾರ್ಯಗತಗೊಳಿಸಿದರೆ ಎ.ಐ. ನಷ್ಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗುವುದರ ಜತೆಗೆ, ವಾರ್ಷಿಕ ವರಮಾನದ ಲೆಕ್ಕದಲ್ಲಿ ಸರ್ಕಾರದ ಬೊಕ್ಕಸಕ್ಕೂ ಲಾಭ ಹರಿದು ಬರಲಿದೆ. ಮಾರುತಿ ಸುಜುಕಿ ಪ್ರಕರಣದಲ್ಲಿ ಇದು ಸಾಬೀತಾಗಿದೆ.
ಜಪಾನಿನ ಸುಜುಕಿ ಸಂಸ್ಥೆಗೆ ಮಾರುತಿ ಸಂಸ್ಥೆಯನ್ನು ಹಂತಹಂತವಾಗಿ ಮಾರಾಟ ಮಾಡಿದ್ದರಿಂದ ಸರ್ಕಾರಕ್ಕೂ ಲಾಭವಾಗಿತ್ತು. ಎ.ಐ. ವಿಚಾರದಲ್ಲಿ ಹೀಗೆ ಮಾಡಲು ಸಾಧ್ಯವಾಗದಿದ್ದರೆ, ನಷ್ಟದ ಪ್ರಮಾಣಕ್ಕೆ ಕಡಿವಾಣ ಹಾಕಲು ಸಾಧ್ಯವಾಗುವುದೇ ಇಲ್ಲ. ಎ.ಐ. ಯನ್ನು ಉದ್ದಕ್ಕೂ ದೋಷಪೂರಿತವಾಗಿಯೇ ನಿರ್ವಹಿಸಿಕೊಂಡು ಬರಲಾಗಿದೆ. ಖಾಸಗಿಯವರ ತೀವ್ರ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲಾಗದಂತೆ ಇದನ್ನು ದುರ್ಬಲಗೊಳಿಸಲಾಗಿದೆ.
ಕೇಂದ್ರ ಸರ್ಕಾರವು ಎ.ಐ. ಬಿಕ್ಕಟ್ಟು ಪರಿಹರಿಸುವ ಆಚೆಗೂ ಇತರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ದೇಶಿ ವಿಮಾನಯಾನ ರಂಗಕ್ಕೆ ಹುರುಪು ತುಂಬಲು ದೀರ್ಘಾವಧಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ವಿಮಾನಯಾನ ರಂಗದ ಎಲ್ಲ ಭಾಗಿದಾರರಾದ ಸರಕು ಸಾಗಣೆ, ಸಂಪೂರ್ಣ ದುರಸ್ತಿ, ಬಿಡಿಭಾಗಗಳ ತಯಾರಿಕೆ ಮತ್ತಿತರ ಉದ್ದಿಮೆಗಳಿಗೆ ಪೂರಕವಾಗುವಂತಹ ವಾತಾವರಣ ನಿರ್ಮಿಸಬೇಕಾಗಿದೆ. ಇಲ್ಲಿ ಎ.ಐ., ಜೆಟ್ ಏರ್ವೇಸ್ ಅಥವಾ ಖಾಸಗಿ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳಿಗೆ ಮಾತ್ರ ಅನುಕೂಲವಾಗುವಂತಹ ನೀತಿ ಅಳವಡಿಸಿಕೊಳ್ಳ ಬಾರದಷ್ಟೆ.
ಸದ್ಯಕ್ಕೆ ಶೇ 3ರಷ್ಟು ಭಾರತೀಯರು ಮಾತ್ರ ವಿಮಾನಯಾನ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಅಂದಾಜು 6 ಕೋಟಿಯಷ್ಟು ಜನರು ದೇಶಿ ವಿಮಾನಯಾನ ಸೇವೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆಯನ್ನು ಶೇ 25ರಷ್ಟು ಹೆಚ್ಚಿಸಲು ಯಾವ ನೀತಿ ಅನುಸರಿಸಬೇಕು ಮತ್ತು ಎಂತಹ ಉತ್ತೇಜನ ನೀಡಬೇಕು ಎನ್ನುವುದರ ಕುರಿತೂ ಸರ್ಕಾರ ಸ್ಪಷ್ಟ ನಿಲುವು ತಳೆಯಬೇಕು.
ಭಾರತವನ್ನು ಅಂತರರಾಷ್ಟ್ರೀಯ ವಿಮಾನಯಾನದ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು, ಸಿಂಗಪುರ ಮತ್ತು ಹಾಂಕಾಂಗ್ ಮಾದರಿಯಲ್ಲಿ ವಿಮಾನ ನಿಲ್ದಾಣಗಳ ವಿನ್ಯಾಸ, ಸರಕು ಸಾಗಣೆ, ವಿಮಾನಗಳ ಸಂಪೂರ್ಣ ದುರಸ್ತಿ ಸೌಲಭ್ಯ ಮತ್ತಿತರ ವಿಷಯಗಳ ಬಗ್ಗೆಯೂ ಸರ್ಕಾರ ಸ್ಪಷ್ಟ ಧೋರಣೆ ತಳೆಯಬೇಕು.
ನಮ್ಮ ತಾಂತ್ರಿಕ ಪರಿಣತಿಯ ಮಾನವ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲ ಮತ್ತು ಆರ್ಥಿಕ ವೃದ್ಧಿಯ ಪ್ರಯೋಜನಗಳನ್ನು ಪಡೆಯುವ ನಿಟ್ಟಿನಲ್ಲಿ ವಿಮಾನಯಾನ ರಂಗವನ್ನು ಪ್ರಮುಖ ಮೂಲಸೌಕರ್ಯವೆಂದು ಪರಿಗಣಿಸುವ ಬಗ್ಗೆಯೂ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರಬೇಕಾಗಿದೆ.
ವಿಮಾನಯಾನ ಸಂಸ್ಥೆಯ (ಎ.ಐ.) ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿಯೇ ಮುಖ್ಯ ಎನ್ನುವ ಸತ್ಯವನ್ನು ಕೇಂದ್ರ ಸರ್ಕಾರ ಮನಗಾಣಬೇಕು. ಎ.ಐ. ಕೂಡ ಒಂದು ಉದ್ದಿಮೆ ಸಂಸ್ಥೆಯಾಗಿದ್ದು, ಕಾರ್ಮಿಕ ಸಂಘಟನೆಗಳು ಮತ್ತು ಕೆಲವೇ ಕೆಲ ರಣೋತ್ಸಾಹಿ ಉದ್ಯೋಗಿಗಳಿಗೆ ಅದನ್ನು ಒತ್ತೆ ಇಡುವುದು ಸರಿಯಲ್ಲ. ಸರ್ಕಾರವು ನಾಗರಿಕ ವಿಮಾನಯಾನ ವಹಿವಾಟಿನಿಂದ ತಕ್ಷಣ ದೂರ ಸರಿಯಬೇಕಾಗಿದೆ. ಅಂತಹ ನಿರ್ಧಾರಕ್ಕೆ ಬರಲು ಇದು ಸಕಾಲವೂ ಹೌದು.
ಷೇರುಪೇಟೆಯ ವಹಿವಾಟು ದಿನದಿಂದ ದಿನಕ್ಕೆ ಹೊಸ ದಾಖಲೆ ಬರೆಯುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ಬಂಡವಾಳ ಹೂಡಿಕೆದಾರರಲ್ಲಿ ವಿಶ್ವಾಸವೂ ಹೆಚ್ಚಿದೆ. ಎಲ್ಲೆಡೆ ಉತ್ಸಾಹದ ವಾತಾವರಣ ಇದೆ. ಖಾಸಗೀಕರಣಗೊಳಿಸುವುದರಿಂದ ತಮಗೂ ಸಾಕಷ್ಟು ಪ್ರಯೋಜನಗಳು ಲಭಿಸಲಿವೆ ಎನ್ನುವುದು ಎ.ಐ. ಸಿಬ್ಬಂದಿಯ ಅರಿವಿಗೆ ಬಂದಿದೆ. ಜನರು ತಮ್ಮ ಬಗ್ಗೆ ಅಸಮಾಧಾನ ತಾಳಿರುವುದು ಮತ್ತು ವಿಮಾನದಲ್ಲಿ ಉಚಿತ ಊಟ ನೀಡುವ ದಿನಗಳು ಕೊನೆಗೊಂಡಿರುವುದು ಅವರಿಗೂ ಮನವರಿಕೆಯಾಗಿದೆ.
ಯಾರಿಗೂ ಅನ್ಯಾಯವಾಗದಂತೆ ಮತ್ತು ಪಾರದರ್ಶಕವಾಗಿ ಖಾಸಗೀಕರಣಗೊಳಿಸಿದರೆ ಅದನ್ನು ತಾವು ಸ್ವಾಗತಿಸುವುದಾಗಿ ಅನೇಕರು ಈಗಾಗಲೇ ಹೇಳಿಕೊಂಡಿದ್ದಾರೆ. ಶೇಕ್ಸ್ಪಿಯರ್ ಹೇಳಿರುವಂತೆ, ‘ಕೇಂದ್ರ ಸರ್ಕಾರವು ಡೋಲಾಯಮಾನ ಧೋರಣೆ ಕೈಬಿಟ್ಟು ಬದಲಾವಣೆಯ ಅಲೆಗಳನ್ನು ತನ್ನ ಪ್ರವಾಹದಲ್ಲಿ ಸೆಳೆದುಕೊಳ್ಳಬೇಕಾಗಿದೆ...’
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.