ಗುವಾಹಟಿ (ಪಿಟಿಐ/ ಐಎಎನ್ಎಸ್): ಭಾರತದ ಕೆಲವು ಯುವಕರು ಐಎಸ್ ಉಗ್ರ ಸಂಘಟನೆಯತ್ತ ಆಕರ್ಷಿತರಾಗುತ್ತಿರುವುದಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತೀವ್ರ ಆತಂಕ ವ್ಯಕ್ತಪಡಿಸಿದರು.
ಶನಿವಾರ ಇಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಉನ್ನತ ಪೊಲೀಸ್ ಅಧಿಕಾರಿಗಳ ೪೯ನೇ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬೆಳವಣಿಗೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಎಂದರು.
ಐಎಸ್ ಸಂಘಟನೆ ಸಿರಿಯಾ ಹಾಗೂ ಇರಾಕ್ನಲ್ಲಿ ಹುಟ್ಟಿಕೊಂಡರೂ, ಭಾರತ ಉಪಖಂಡಕ್ಕೂ ಈ ಪಿಡುಗು ವ್ಯಾಪಿಸುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಸಿರಿಯಾದಲ್ಲಿ ಐಎಸ್ ಉಗ್ರರ ಪರ ಹೋರಾಡುವಾಗ ‘ಮೃತಪಟ್ಟಿದ್ದ’ ಎನ್ನುವ ವದಂತಿಗೆ ಕಾರಣನಾಗಿದ್ದ ಮುಂಬೈ ಯುವಕ ಆರೀಫ್
ಜಗತ್ತಿನಲ್ಲಿ ಅನೇಕ ಭಯೋತ್ಪಾದಕ ಸಂಘಟನೆಗಳು ಇರಬಹುದು. ಆದರೆ ಅವು ಭಾರತಕ್ಕೆ ಕಾಲಿಡಲು ನಾವು ಅವಕಾಶ ಮಾಡಿಕೊಡುವುದಿಲ್ಲ –ರಾಜನಾಥ್ ಸಿಂಗ್ |
ಮಜೀದ್ ವಾಪಸ್ ಬಂದ ಬೆನ್ನಲ್ಲಿಯೇ ಐಎಸ್ ಭಯೋತ್ಪಾದನೆಯ ಬಗ್ಗೆ ಮಾತನಾಡಿದ ಅವರು, ‘ಇದನ್ನು ನಾವು ಸವಾಲಾಗಿ ಸ್ವೀಕರಿಸುತ್ತೇವೆ’ ಎಂದು ಘೋಷಿಸಿದರು.
‘ಕಿರುಕುಳ ನೀಡುವ ಉದ್ದೇಶದಿಂದ ಆರೀಫ್ನನ್ನು ಬಂಧಿಸಿಲ್ಲ. ಇಂಥ ಎಲ್ಲ ಘಟನೆಗಳನ್ನು ಸವಿಸ್ತಾರವಾಗಿ ವಿಚಾರಣೆಗೊಳಪಡಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.
ಪಾಕ್ ಕುಂಟುನೆಪ: -ಪಾಕ್ ಕೃಪಾ ಪೋಷಿತ ಭಯೋತ್ಪಾದನೆಯು ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ ರಾಜನಾಥ್, ನೆರೆದೇಶವು ‘ವಿವಿಧ ತಂತ್ರ’ಗಳ ಮೂಲಕ ಭಾರತಕ್ಕೆ ಕೇಡು ಬಗೆಯುವ ತನ್ನ ಪ್ರಯತ್ನ ಬಿಟ್ಟಿಲ್ಲ ಎಂದು ವಿಷಾದಿಸಿದರು.
‘ಭಾರತದಲ್ಲಿ ನಡೆಯುವ ವಿಧ್ವಂಸಕ ಚಟುವಟಿಕೆಗೂ ತನಗೂ ಸಂಬಂಧವೇ ಇಲ್ಲ. ಇದು ಹೊರಗಿನವರ ಕೃತ್ಯ ಎನ್ನುವ ಕುಂಟುನೆಪ ಹೇಳುವುದನ್ನು ಪಾಕಿಸ್ತಾನ ಬಿಟ್ಟಿಲ್ಲ. ಹಾಗಾದರೆ ಐಎಸ್ಐ ಪಾಕಿಸ್ತಾನಕ್ಕೆ ಸಂಬಂಧಿಸಿಲ್ಲವೇ’ ಎಂದು ಪ್ರಶ್ನಿಸಿದರು.
‘ಜಮ್ಮು–ಕಾಶ್ಮೀರ ವಿಧಾನಸಭೆಗೆ ಇತ್ತೀಚೆಗೆ ನಡೆದ ಮೊದಲ ಹಂತದ ಮತದಾನದಲ್ಲಿ ದಾಖಲೆ ಪ್ರಮಾಣದಲ್ಲಿ ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. ರಾಜಕೀಯ ಸಭೆಗಳಲ್ಲಿಯಂತೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಬೆಳವಣಿಗೆಯು ರಾಜ್ಯದ ವಸ್ತುಸ್ಥಿತಿಯ ಬಗ್ಗೆ ಭಯೋತ್ಪಾದಕ ಸಂಘಟನೆಗಳಿಗೆ ಸ್ಪಷ್ಟ ಸಂದೇಶ ರವಾನಿಸಿದೆ’ ಎಂದು ನುಡಿದರು.
ಪಶ್ಚಿಮ ಬಂಗಾಳದ ಬರ್ದ್ವಾನ್ನಲ್ಲಿ ಅಕ್ಟೋಬರ್ ೨ರಂದು ಜಮಾತ್–ಉಲ್–ಮುಜಾಹಿದ್ದಿನ್ ಬಾಂಗ್ಲಾದೇಶ್ (ಜೆಎಂಬಿ) ಸಂಘಟನೆ ನಡೆಸಿದೆ ಎನ್ನಲಾದ ಸ್ಫೋಟವನ್ನು ಉಲ್ಲೇಖಿಸಿ, ವಿದೇಶಿ ಶಕ್ತಿಗಳು ತಮ್ಮ ಪಾತಕ ಕೃತ್ಯಗಳಿಗೆ ಭಾರತದ ನೆಲವನ್ನು ಬಳಸಿಕೊಳ್ಳುತ್ತಿವೆ ಎನ್ನುವುದು ಇದರಿಂದ ಸಾಬೀತಾಗಿದೆ ಎಂದು ಹೇಳಿದರು.
‘ಭಾರತದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳಬಹುದು ಎಂದು ವಿದೇಶಿ ಭಯೋತ್ಪಾದಕರು ಭಾವಿಸಿದ್ದಾರೆ. ಆದರೆ ಭಾರತದ ಮುಸ್ಲಿಮರು ದೇಶದ ಭದ್ರತೆ ಹಾಗೂ ಸಾರ್ವಭೌಮತ್ವಕ್ಕೆ ಹೋರಾಡಲು ಸದಾ ಸಿದ್ಧ’ ಎಂದು ಸಿಂಗ್ ಶ್ಲಾಘಿಸಿದರು.
ನಮನ: ಕರ್ತವ್ಯದಲ್ಲಿದ್ದಾಗ ಜೀವ ಕಳೆದುಕೊಂಡ ಎಲ್ಲ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿ ದೆಹಲಿಯಲ್ಲಿ ಪೊಲೀಸ್ ಸ್ಮಾರಕ ನಿರ್ಮಾಣಕ್ಕೆ ₨ ೫೦ ಕೋಟಿ ಮಂಜೂರು ಮಾಡಿದರು.
ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹೊರಗಡೆ ಇದೇ ಪ್ರಥಮ ಬಾರಿಗೆ ನಡೆದ ಸಭೆಯಲ್ಲಿ ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿಗಳು, ಅರೆಸೇನಾ ಪಡೆ ಮುಖ್ಯಸ್ಥರು ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಈ ಸಮಾವೇಶದಲ್ಲಿ ಮಾತನಾಡುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.