ಬೆಂಗಳೂರು: ‘ಪ್ರಧಾನಮಂತ್ರಿ ಜನ-ಧನ ಯೋಜನೆ’ಯಡಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದು ಲಕ್ಷ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.
ನಗರ ಜಿಲ್ಲಾ ಪಂಚಾಯ್ತಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಕೆನರಾ ಬ್ಯಾಂಕ್ ಆಶ್ರಯದಲ್ಲಿ ನಗರದ ಶಿಕ್ಷಕರ ಸದನದಲ್ಲಿ ಗುರುವಾರ ನಡೆದ ‘ಪ್ರಧಾನಮಂತ್ರಿ ಜನ ಧನ ಯೋಜನೆ’ಯ ಉದ್ಘಾಟನಾ ಸಮಾರಂಭದಲ್ಲಿ ಕೆನರಾ ಬ್ಯಾಂಕ್ ಡಿಜಿಎಂ ರವೀಂದ್ರ ಭಂಡಾರಿ ಈ ವಿಷಯ ತಿಳಿಸಿದರು.
‘ನಗರ ಜಿಲ್ಲೆಯಲ್ಲಿ 660 ಹಳ್ಳಿಗಳು ಇವೆ. ಜಿಲ್ಲೆಯ ಜನಸಂಖ್ಯೆ 96 ಲಕ್ಷ. 48 ಬ್ಯಾಂಕ್ಗಳ ಒಟ್ಟು 2007 ಶಾಖೆಗಳು ಇವೆ. 23.93 ಲಕ್ಷ ಕುಟುಂಬಗಳ ಪೈಕಿ 16 ಲಕ್ಷ ಕುಟುಂಬಗಳು ಬ್ಯಾಂಕ್ ಖಾತೆ ಹೊಂದಿವೆ. ಆಗಸ್ಟ್ 16ರಂದು ನಗರ ಜಿಲ್ಲೆಯಲ್ಲಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಒಂದು ಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಅಭಿಯಾನ 2015ರ ಆಗಸ್ಟ್ ತಿಂಗಳ ವರೆಗೆ ಮುಂದುವರಿಯಲಿದೆ’ ಎಂದು ಅವರು ವಿವರಿಸಿದರು.
ಹೆಬ್ಬಾಳ ಶಾಸಕ ಜಗದೀಶ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧಿಕಾರಿ ವಿ.ಶಂಕರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಗುರುದತ್ ಕೆ.ಎಸ್. ಮತ್ತಿತರರು ಉಪಸ್ಥಿತರಿದ್ದರು.