ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗಣ್ಣಿಗೆ ವಚನದ ಬೆಳಕು

Last Updated 8 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ,
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ,
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ.

ಈ ಬಸವಣ್ಣವರ ವಚನದಲ್ಲಿ ಎಲ್ಲಾ ಅಂಗಗಳೂ ಸರಿ ಇದ್ದರೂ ಅದು ಇಲ್ಲದಂತೆ ಮಾಡು ಎಂದು ಭಗವಂತನಲ್ಲಿ ಭಕ್ತ ಕೇಳಿಕೊಳ್ಳುತ್ತಾನೆ. ಸರಿಯಾದ ಮಾರ್ಗದಲ್ಲಿ ನಮ್ಮನ್ನು ನಡೆಸು ಎಂಬುದು ಇದರ ಆಶಯ. ಆದರೆ ಅಜಾಗರೂಕತೆಯಿಂದ ನಡೆಯುವ ಕಾಲು ದಿಕ್ಕು ತಪ್ಪಿಸಬಹುದು. ಕಾಣಬಾರದ್ದನ್ನು ಕಂಡು ಮನಸ್ಸು ಚಂಚಲಗೊಳ್ಳಬಹುದು. ಕೇಳಬಾರದ್ದನ್ನು ಕೇಳಿ ನಮ್ಮನ್ನು ಗೊಂದಲಕ್ಕೀಡಾಗಬಹುದು. ಅನ್ಯ ವಿಷಯದತ್ತ ಭಕ್ತರನ್ನು ಸೆಳೆಯದಂತೆ ನೋಡಿಕೊಳ್ಳಬೇಕೆಂಬುದೇ ಈ ವಚನದ ಸಾರ.

ಇಂಥ ನೂರೆಂಟು ಮೌಲಿಕ ವಚನಗಳು ಹಾಗೂ ಅವುಗಳ ವ್ಯಾಖ್ಯಾನವನ್ನೊಳಗೊಂಡ ಗ್ರಂಥ ನೀಡಲು ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನದ ಧಾರವಾಡದ ಶಾಖೆ ಸಿದ್ಧತೆ ನಡೆಸಿದೆ. ಆದರೆ, ಇದು ಕೇವಲ ಅಂಧರಿಗೆ. ಬ್ರೈಲ್ ಲಿಪಿಯಲ್ಲಿರುವ ಈ ಗ್ರಂಥವು ಇದೇ 12ರಂದು ವಿಜಯಪುರದಲ್ಲಿ ನಡೆಯಲಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಮಾವೇಶದಲ್ಲಿ ಬಿಡುಗಡೆಯಾಗಲಿದೆ.

‘ಒಳಗಣ್ಣಿಗೊಂದು ಬೆಳಕು’ ಎಂಬ ಹೆಸರಿನ ಈ ಗ್ರಂಥದಲ್ಲಿ ವಿವಿಧ ಬಗೆಯ ವಿಚಾರಗಳನ್ನು ಸಾರುವ 108 ವಚನಗಳನ್ನು ರಾಮಚಂದ್ರ ಧೋಂಗಡೆ ಅವರು ಸಂಪಾದಿಸಿದ್ದಾರೆ. ವಚನ ಸಾಹಿತ್ಯದಲ್ಲಿ ಅಪಾರ ಆಸ್ಥೆ ಹೊಂದಿದ್ದ ಇವರು ಸರ್ವಸಮಾನತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ವಚನಗಳ ಅಧ್ಯಯನ ನಡೆಸಿದ್ದಾರೆ.

30 ವರ್ಷಗಳ ಕಾಲ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ದುಡಿದ ರಾಮಚಂದ್ರ ನಿವೃತ್ತಿಯ ಬಳಿಕ ಸಮಾಜಮುಖಿ ಕೆಲಸಗಳತ್ತ ಹಾಗೂ ಅಂಗವಿಕಲರ ಕ್ಷೇಮಾಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡರು. ಬೆಂಗಳೂರಿನ ಸಹನಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಅಂಧರಿಗಾಗಿ ಇದೇ ಸಂಸ್ಥೆಯ ಧಾರವಾಡ ಶಾಖೆಯಲ್ಲಿ ಬ್ರೈಲ್‌ ಲಿಪಿಯ ಮೂಲಕ ಪಠ್ಯಪುಸ್ತಕಗಳ ಮುದ್ರಣ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಶಾಖೆಯ ಕಚೇರಿಯಲ್ಲಿರುವ ವ್ಯವಸ್ಥಾಪಕ ನಂದಕುಮಾರ್‌ ಸೇರಿದಂತೆ ಇರುವ ಬಹುತೇಕ ಸಿಬ್ಬಂದಿ ಅಂಗವಿಕಲರೇ ಆಗಿದ್ದಾರೆ. ಪಠ್ಯಪುಸ್ತಕ, ಕಥೆ, ವಚನಗಳು, ಆರೋಗ್ಯ ಸಂಬಂಧಿ ಲೇಖನಗಳನ್ನು ಇವರು ಬ್ರೈಲ್‌ನಲ್ಲಿ ಮುದ್ರಿಸಿ ನೀಡುತ್ತಿದ್ದಾರೆ.

ಹಾಗೆ ನೋಡಿದರೆ ಮೈಸೂರಿನಲ್ಲಿರುವ ಸರ್ಕಾರಿ ಮುದ್ರಣಾಲಯ ಹೊರತುಪಡಿಸಿದರೆ ಸಹನಾ ಸಂಸ್ಥೆಯ ಬೆಂಗಳೂರು, ಮೈಸೂರು ಹಾಗೂ ಧಾರವಾಡ ಶಾಖೆಗಳಲ್ಲಿ ಮಾತ್ರ ಬ್ರೈಲ್‌ ಮುದ್ರಣ ಯಂತ್ರಗಳಿವೆ. ಇನ್ನೂ ಕೆಲವೆಡೆ ಎಂಬೋಸಿಂಗ್‌ ತಂತ್ರಜ್ಞಾನದಲ್ಲಿ ಮುದ್ರಣವಾಗುತ್ತಿದ್ದರೂ ಅದರ ಪ್ರಮಾಣ ಕಡಿಮೆ.

ಬ್ರೈಲ್‌ ಲಿಪಿಯಲ್ಲಿರುವ ಈ ವಚನಗಳ ಗ್ರಂಥವನ್ನು ಆರು ಭಾಗಗಳಾಗಿ ವಿಂಗಡಿಸಿದ್ದಾರೆ. 1. ಪರಮಾತ್ಮನ ಸ್ವರೂಪ, 2. ಜ್ಞಾನ–ಪೂಜೆ–ಸದ್ಭಕ್ತಿ, 3.ನಿರಹಂಕಾರ, ವಿನಯ, ಆತ್ಮವಿಶ್ವಾಸ, ಪರಿಶುದ್ಧ ನಡೆನುಡಿ, ಅಂತರಂಗ ಶುದ್ಧಿ, ಮನದ ಮರ್ಕಟತನ, ಸಮರ್ಪಣಾ ಭಾವ, ಸಮರಸ, 4. ಕುಲ–ಶೀಲ, 5. ಕರ್ಮಟತನ, ಡಂಭಾಚಾರ, ವಿಡಂಬನೆ, 6. ಆತ್ಮನಿವೇದನೆ, ಅನುಭಾವ ಎಂಬ ಶೀರ್ಷಿಕೆಯ ಅಡಿಯಲ್ಲಿ ಅವುಗಳಿಗೆ ಅನುಗುಣವಾಗುವಂಥ ವಚನಗಳನ್ನು ಆಯ್ದು ಪ್ರಕಟಿಸಿದ್ದಾರೆ.

‘ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಬಳಿ ಈ ಯೋಜನೆಯ ಕುರಿತು ಪ್ರಸ್ತಾಪಿಸಿದಾಗ ಅವರು ಸ್ವತಃ ಆಸಕ್ತಿ ವಹಿಸಿದರು. ಇದನ್ನು ಸವಾಲಾಗಿ ಸ್ವೀಕರಿಸಿ ಮುಂದುವರಿಸಲು ಸಲಹೆ ನೀಡಿ ಪ್ರೋತ್ಸಾಹಿಸಿದರು. ವಚನಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ವಚನಶಾಸ್ತ್ರ ಗ್ರಂಥ ಈ ಯೋಜನೆಗೆ ಸಹಕಾರಿಯಾಯಿತು. ಆಯ್ಕೆ ನಂತರ ಇದರ ಮುದ್ರಣದ್ದೇ ದೊಡ್ಡ ಸವಾಲಾಗಿತ್ತು. ಏಕೆಂದರೆ ಬ್ರೈಲ್‌ ಲಿಪಿಯಲ್ಲಿ ಒಂದು ಪುಸ್ತಕ ಅಚ್ಚುಮಾಡಲು ₨ 3 ಸಾವಿರ ಖರ್ಚು ಬರುತ್ತದೆ. ಆದರೆ, ಕೆಲ ಮಠಾಧೀಶರು ಹಾಗೂ ದಾನಿಗಳು ಇದಕ್ಕೆ ನೆರವು ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ’ ಎಂದು ತಮ್ಮ ಕೆಲಸದ ಬಗ್ಗೆ ವಿವರಿಸುತ್ತಾರೆ ರಾಮಚಂದ್ರ ಧೋಂಗಡೆ.

‘ಅಂಧರಿಗೆ ಧ್ವನಿ ಮೂಲಕ ಇಂದು ಸಾಹಿತ್ಯವನ್ನು ನೀಡಲಾಗುತ್ತಿದೆ. ಆದರೆ, ಬ್ರೈಲ್‌ನ ಆರು ಅಕ್ಷರದ ಮೂಲಕ ಜಗತ್ತಿನ 63 ಭಾಷೆಗಳಲ್ಲಿ ಹೇಳಬಹುದಾದ ಪರಿಣಾಮಕಾರಿ ಲಿಪಿಯಲ್ಲಿ ಇದನ್ನು ಪ್ರಕಟಿಸಬೇಕೆಂಬುದು ನಮ್ಮ ಮಹದಾಸೆ. ಜತೆಗೆ ಕೇಳುವುದಕ್ಕಿಂತ ಓದುವುದರ ಮೂಲಕ ಮನಸ್ಸಿನ ಹಾಗೂ ಜ್ಞಾನದ ವಿಸ್ತಾರ ಹೆಚ್ಚಾಗಲಿದೆ. ಹೀಗಾಗಿ ಈ 108 ವಚನಗಳು ಹಾಗೂ ಅವುಗಳ ವಿವರಣೆಯನ್ನು ಇಲ್ಲಿ ಮುದ್ರಿಸಲಾಗಿದೆ. ಓದುವವರಿಗೆ ಅವರವರ ಗ್ರಹಿಕೆಯ ಫಲವಾಗಿ ನಿರ್ಮಲ ಜ್ಞಾನದ ಬೆಳಕನ್ನು ಬೀರಲಿದೆ ಎಂಬ ವಿಶ್ವಾಸವಿದೆ. ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಕಲಿಯುತ್ತಿರುವ ಅಂಧರಿಗೆ ಈ ವಚನಗಳಿಗೆ ಉತ್ತಮ ಸಂಗೀತ ಸಂಯೋಜಿಸಲು ಇದರಿಂದ ಅನುಕೂಲವಾಗಲಿದೆ’ ಎಂಬುದು ಅವರ ಆಶಯ.

‘ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ಬ್ರೈಲ್‌ ಲಿಪಿಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಆದರೆ ಕಾಲೇಜು ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ಪುಸ್ತಕಗಳನ್ನು ಪ್ರಕಟಿಸುತ್ತಿಲ್ಲ. ಆದರೆ, ಸಹನಾ ಸಂಸ್ಥೆಯಿಂದ ಉಚಿತವಾಗಿ ಇಂಥ ಪಠ್ಯ ಪುಸ್ತಕಗಳನ್ನು ನೀಡಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ನೋಂದಾಯಿತ ಅಂಧರ ಸಂಖ್ಯೆ 500 ಇದೆ. ಇಲ್ಲಿ ನೀಡಲಾಗುತ್ತಿರುವ ಪಠ್ಯಪುಸ್ತಕ ಹಾಗೂ ಮಾಹಿತಿ ಪುಸ್ತಕಗಳನ್ನೇ ಓದಿ ಕೆಲ ವಿದ್ಯಾರ್ಥಿಗಳು ಪಿ.ಎಚ್‌ಡಿ, ಸಂಶೋಧನೆಗಳನ್ನು ಸಹ ಮಾಡುತ್ತಿದ್ದಾರೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT