ಬೆಂಗಳೂರು: ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕರ್ನಾಟಕದಲ್ಲಿ ಸಂಸ್ಕೃತ ಭಾಷೆಯನ್ನು ಕಂಪ್ಯೂಟರ್ಗೆ ಅಳವಡಿಸುವ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕು’ ಎಂದು ಅಂತರರಾಷ್ಟ್ರೀಯ ಸಂಸ್ಕೃತ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ವಿ. ಕುಟುಂಬ ಶಾಸ್ತ್ರಿ ಹೇಳಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವದಲ್ಲಿ ಬುಧವಾರ ಮಾತನಾಡಿದರು.
ಇನ್ಫೊಸಿಸ್ ದತ್ತಿ ನಿಧಿ: ಗ್ರಾಮೀಣ ಪ್ರದೇಶದ ಸಂಸ್ಕೃತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ₹20 ಲಕ್ಷ ಮೊತ್ತದ ದತ್ತಿನಿಧಿ ಸ್ಥಾಪಿಸಿದ್ದಾರೆ ಎಂದು ಕುಲಪತಿ ಪದ್ಮಾ ಶೇಖರ್ ಪ್ರಕಟಿಸಿದರು.
ಕುರ್ಚಿ ಬಿಡದ ಕುಲಪತಿ: ಘಟಿಕೋತ್ಸವ ಆರಂಭಕ್ಕೆ ಅನುಮತಿ ನೀಡಲು ರಾಜ್ಯಪಾಲ ವಜುಭಾಯ್ ವಾಲಾ ಅವರು ಎದ್ದು ನಿಂತರೂ ಕುಲಪತಿ ಪ್ರೊ. ಪದ್ಮಾ ಶೇಖರ್ ಕುರ್ಚಿ ಬಿಟ್ಟು ಕದಲಲಿಲ್ಲ. ರಾಜ್ಯಪಾಲರ ಭದ್ರತಾ ಸಿಬ್ಬಂದಿ ಎಚ್ಚರಿಸಿದ ನಂತರ ಎದ್ದು ನಿಂತು ಅನುಮತಿ ಪಡೆದರು.
ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ, ಕುಲಸಚಿವ ಪ್ರೊ. ವೈ.ಎಸ್. ಸಿದ್ದೇಗೌಡ ಉಪಸ್ಥಿತರಿದ್ದರು.
ಕೆ.ಎಸ್.ಎಲ್ ಸ್ವಾಮಿಗೆ ಮರಣೋತ್ತರ ಡಾಕ್ಟರೇಟ್: ಸಂಸ್ಕೃತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಕೆ.ಎಸ್.ಎಲ್ ಸ್ವಾಮಿ (ರವಿ), ಬನ್ನಂಜೆ ಗೋವಿಂದಾಚಾರ್ಯ ಮತ್ತು ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿತ್ತು. ಕೆ.ಎಸ್.ಎಲ್ ಸ್ವಾಮಿ ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ಪದವಿಯನ್ನು ಪತ್ನಿ ಬಿ.ವಿ. ರಾಧಾ ಸ್ವೀಕರಿಸಿದರು.
ಚಿನ್ನದ ಪದಕ : ಸಂಸ್ಕೃತ ಎಂ.ಎ ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ವಿವರ: ವೆಂಕಟೇಶ ಎನ್. ಕುಲಕರ್ಣಿ–ಅಲಂಕಾರ ಶಾಸ್ತ್ರ. ರಾಮಚಂದ್ರ ಎನ್.ಯು –ವ್ಯಾಕರಣ ಶಾಸ್ತ್ರ. ಸಂಗೀತಾ ಗಣೇಶ ಹೆಗಡೆ–ಅದ್ವೈತ ವೇದಾಂತ ಶಾಸ್ತ್ರ. ಬಿ. ಶಿವಕುಮಾರ ಗುಪ್ತಾ– ದ್ವೈತ ವೇದಾಂತ ಶಾಸ್ತ್ರ. ನಾಗೇಂದ್ರಮೂರ್ತಿ ಎಸ್.ವಿ –ವೇದಾಂತ ಶಾಸ್ತ್ರ. ಸಂತೋಷ್ ಕುಮಾರ ಬಾಯರಿ–ಜ್ಯೋತಿಷ ಶಾಸ್ತ್ರ. ಎಸ್. ಶ್ಯಾಮಸುಂದರ–ಋಗ್ವೇದ, ಎ. ಸತೀಶ–ಕೃಷ್ಣ ಯಜುರ್ವೇದ, ನಾಗರಾಜ ಭಟ್–ಸಾಮವೇದ.