ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ನಮ್ಮ ಮೂಲ ಜನಪದ ಹಾಡುಗಳ ಕೇಳುಗರ ಸಂಖ್ಯೆ ಸಂಪೂರ್ಣವಾಗಿ ಕಳೆದುಹೋಗುತ್ತಿದೆ’ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ವಿಷಾದಿಸಿದರು.
ಕೃಷಿ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಲೇಖಕ ಕೋಟಿಗಾನಹಳ್ಳಿ ರಾಮಯ್ಯ ಅವರ ‘ಹೆಜ್ಜೆ ಮಾತಾಡು’ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್. ಶಿವಣ್ಣ ಮಾತನಾಡಿ, ‘ಕೃಷಿಗೂ ಮತ್ತು ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದೆ. ಇತ್ತೀಚೆಗೆ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಸಾಹಿತಿಗಳು ರೈತರಲ್ಲಿ ಅರಿವು ಮೂಡಿಸಬೇಕಾಗಿದೆ. ಈ ದಿಸೆಯಲ್ಲಿ ಈ ಪುಸ್ತಕದಲ್ಲಿರುವ ಹಾಡುಗಳು ಬೆಳಕು ಚೆಲ್ಲಲಿವೆ’ ಎಂದು ಆಶಿಸಿದರು.
ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ಇಂದಿನ ಶಿಕ್ಷಣ ಕೇವಲ ಮಾರುಕಟ್ಟೆ ಆಧಾರಿತ ಕೊಳ್ಳುಬಾಕ ಸಂಸ್ಕೃತಿ ಕಲಿಸುತ್ತದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲವಾಗುವ ಪಾಠಗಳನ್ನು ಪಠ್ಯಗಳಲ್ಲಿ ತುರುಕಲಾ ಗುತ್ತಿದೆ. ಬದಲಾಗಿರುವ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ ನಮ್ಮ ನೆಲ, ಜಲ ಮತ್ತು ಸಂಸ್ಕೃತಿಯಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು’ ಎಂದು ತಿಳಿಸಿದರು.