ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮರೆಯಾಗಿದ್ದ ಸಸ್ಯಸಂಕುಲ ಪತ್ತೆ

Last Updated 4 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 125 ವರ್ಷ­ಗಳ ಹಿಂದೆಯೇ ನಶಿಸಿ ಹೋಗಿದೆ ಎಂದು ಭಾವಿಸಲಾಗಿದ್ದ ‘ಮಧುಕಾ ಬೌರ್ಡಿ­ಲ್ಲೊನಿ’ ಮತ್ತು ‘ಮಧುಕಾ ಇನ್‌ಸಿ­ಗ್ನಿಸ್‌’ ಔಷಧೀಯ ವೃಕ್ಷಗಳನ್ನು ಅರಣ್ಯ ಇಲಾಖೆ ಪತ್ತೆ ಮಾಡಿದೆ. ಮೊದಲನೆ ಪ್ರಭೇದ ಹೊನ್ನಾವರ ತಾಲ್ಲೂಕಿನಲ್ಲಿ ಪತ್ತೆ­ಯಾದರೆ, ಎರಡನೆ ಪ್ರಭೇದ ಕುಮಾ­ರ­ಧಾರಾ ನದಿ ಕಣಿವೆಯಲ್ಲಿ ಕಂಡುಬಂದಿದೆ.

ಅರಣ್ಯ ಸಚಿವ ಬಿ.ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರದ ಆಡಳಿತ ಮಂಡಳಿ ಸಭೆ ನಡೆಯಿತು. ಪ್ರಾಧಿ­ಕಾರದ ಮುಖ್ಯ ಕಾರ್ಯನಿರ್ವಹ­ಣಾ­­ಧಿ­ಕಾರಿ ಡಾ.ಯು.ವಿ.ಸಿಂಗ್‌ ಅವರು, ಮಧುಕಾ ಪ್ರಭೇದದ ಸಸ್ಯಸಂಕುಲ ಪತ್ತೆ­ಯಾ­ಗಿರುವ ವಿಷಯಸಭೆಗೆ ತಿಳಿಸಿದರು.

‘ಮಧುಕಾ ಬೌರ್ಡಿಲ್ಲೊನಿ’ ಮತ್ತು ‘ಮಧುಕಾ ಇನ್‌ಸಿಗ್ನಿಸ್‌’ಗಳು ಪಶ್ಚಿಮ ಘಟ್ಟದಲ್ಲಿ ಮಾತ್ರ ಬೆಳೆಯುತ್ತವೆ. ಈ ಎರಡೂ ಪ್ರಭೇದಗಳು ದೇಶದಲ್ಲಿ ನಶಿಸಿಹೋಗಿವೆ ಎಂದು ಇಂಟರ್‌­ನ್ಯಾಷ­ನಲ್‌ ಯೂನಿಯನ್‌ ಫಾರ್‌ ಕನ್ಸರ್ವೇ­ಷನ್‌ ಆಫ್‌ ನೇಚರ್‌ (ಐಯುಸಿಎನ್‌) 125 ವರ್ಷಗಳ ಹಿಂದೆ ವರದಿ ಮಾಡಿತ್ತು. ಈ ಸಸ್ಯ ಸಂಕುಲ ದೇಶದಲ್ಲಿ ಉಳಿದಿಲ್ಲ ಎಂದೇ ತಿಳಿಯಲಾಗಿತ್ತು. ಆದರೆ, ವಿವಿಧ ಮೂಲಗಳಿಂದ ದೊರೆತ ಮಾಹಿತಿ ಆಧರಿಸಿ ಎರಡೂ ಪ್ರಭೇದದ ಕೆಲವು ವೃಕ್ಷ ಮತ್ತು ಸಸಿಗಳನ್ನು ಪತ್ತೆ ಮಾಡ­ಲಾಗಿದೆ ಎಂದು ಮಾಹಿತಿ ನೀಡಿದರು.

ಸಾಮಾನ್ಯವಾಗಿ ಕಾಣಸಿಗುವ ಹಿಪ್ಪೆ­ಮರ (ಮಧುಕಾ ಲಾಂಗಿ­ಫೋಲಿಯಾ) ಕೂಡ ಈ ಸಸ್ಯಗಳ ಜಾತಿಗೆ ಸೇರುತ್ತದೆ. ಆದರೆ, ‘ಮಧುಕಾ ಬೌರ್ಡಿಲ್ಲೊನಿ’ ಮತ್ತು ‘ಮಧುಕಾ ಇನ್‌ಸಿಗ್ನಿಸ್‌’  ಹೆಚ್ಚು ಔಷಧೀಯ ಗುಣ­ಗಳುಳ್ಳ ಸಸ್ಯಗಳು. ಚರ್ಮರೋಗ, ಮಧು­ಮೇಹ ನಿಯಂ­ತ್ರಣ, ಗಾಯಗ­ಳನ್ನು ಗುಣಪಡಿಸುವು­ದಕ್ಕೆ ಈ ಸಸ್ಯಗ­ಳಿಂದ ಔಷಧಿ ತಯಾರಿ­ಸ­ಬಹುದು.

ಮಧುಕಾ ಬೌರ್ಡಿಲ್ಲೊ­ನಿಯ ಬೀಜಗ­ಳಿಂದ ತಯಾರಿಸಿದ ಎಣ್ಣೆ­ಯನ್ನು ಬಳಸಿ­ದರೆ ತಲೆಗೂದಲು ದಟ್ಟ­ವಾಗಿ ಬೆಳೆ­ಯು­ತ್ತದೆ ಎಂದು ವಿವರಿಸಿದರು.

13 ಮರ, ಸಸಿ ಪತ್ತೆ: ಹೊನ್ನಾವರದ ಹಿರೇ­ಗುತ್ತಿ ಅರಣ್ಯ ವಲಯದ ಕುಂಟಿ­ಗನಿ ಮತ್ತು ಮಣಿಗದ್ದೆ ಅರಣ್ಯಗಳಲ್ಲಿ ಮಧುಕಾ ಬೌರ್ಡಿಲ್ಲೊನಿ ಪ್ರಭೇದದ ಎರಡು ಮರಗಳಿವೆ ಎಂಬ ಮಾಹಿತಿ­ಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಗಳು ನೀಡಿದ್ದವು. ಈ ಮಾಹಿತಿ ಆಧರಿಸಿ ಅಲ್ಲಿನ ಅರಣ್ಯದಲ್ಲಿ ಶೋಧ ನಡೆಸಲಾಯಿತು. ಆಗ ಒಟ್ಟು 13 ಮರ ಮತ್ತು ಸಸಿಗಳು ಪತ್ತೆಯಾಗಿವೆ ಎಂದು ಯು.ವಿ.ಸಿಂಗ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳೀಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮರಗಳನ್ನು ಗುರುತಿಸಿದ್ದಾರೆ. ಅವುಗಳ ಬೀಜಗಳನ್ನೂ ಸಂಗ್ರಹಿಸಿ ತಂದಿದ್ದಾರೆ. ಈ ಮರಗಳು ಮತ್ತು ಸಸಿಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ನದಿ ಕಣಿವೆಯಲ್ಲಿ ಶೋಧ: ಮಧುಕಾ ಇನ್‌ಸಿಗ್ನಿಸ್‌ ಜಾತಿ ಸಸ್ಯ ಕೂಡ ದೇಶದಲ್ಲಿ ಸಂಪೂರ್ಣ ನಾಶವಾಗಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ, ಈ ಜಾತಿಯ ಎರಡು ಸಸ್ಯಗಳು ಕೇರಳದ ಕಾಸರಗೋಡು ಜಿಲ್ಲೆಯ ಅರಣ್ಯದಲ್ಲಿ ಕಳೆದ ವರ್ಷ ಪತ್ತೆಯಾಗಿದ್ದವು. ರಾಜ್ಯದ ಕುಮಾರಧಾರ ನದಿ ಕಣಿವೆಯ ಅರಣ್ಯದಲ್ಲಿ ಮಧುಕಾ ಇನ್‌ಸಿಗ್ನಿಸ್‌ ವೃಕ್ಷಗಳಿವೆ ಎಂಬ ಮಾಹಿತಿ ಲಭ್ಯ ವಾಗಿತ್ತು. ಅದನ್ನು ಆಧರಿಸಿ ಸ್ಥಳಕ್ಕೆ ಹೋದಾಗ, ಕೆಲವು ಮರಗಳು ಪತ್ತೆಯಾಗಿವೆ ಎಂದರು.

33 ಪ್ರಭೇದಗಳ ಸಮೀಕ್ಷೆ: ರಾಜ್ಯದಲ್ಲಿ ಅಳಿವಿನ ಅಂಚು ತಲುಪಿರುವ 33 ಪ್ರಮುಖ ಔಷಧೀಯ ಸಸ್ಯ, ವೃಕ್ಷ ಮತ್ತು ಬಳ್ಳಿಗಳ ಕುರಿತು ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿದೆ. ಅವು ಯಾವ ಪ್ರದೇಶದಲ್ಲಿ ಇವೆ ಎಂಬುದನ್ನು ಪತ್ತೆ ಮಾಡಲಾಗುವುದು. ನಂತರ ಈ ಅತ್ಯಮೂಲ್ಯ ಮೂಲಿಕೆ ಪ್ರಭೇದಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT