ನವದೆಹಲಿ (ಪಿಟಿಐ): ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರಿಗೆ ನೀಡಲಾಗಿರುವ ಮಧ್ಯಂತರ ಜಾಮೀನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ನಲ್ಲಿ ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸ್ ನಡುವೆ ವಾಕ್ಸಮರ ನಡೆದಿದೆ. ರಾಜ್ಯವನ್ನು ಯಾರು ಪ್ರತಿನಿಧಿಸಬೇಕು ಎಂಬುದು ಈ ಸಂಘರ್ಷಕ್ಕೆ ಕಾರಣ.
ನ್ಯಾಯಮೂರ್ತಿ ಪಿ.ಎಸ್. ತೇಜಿ ಅವರ ಪೀಠದಲ್ಲಿ ವಿಚಾರಣೆ ನಡೆಯಿತು. ಪ್ರಕರಣದಲ್ಲಿ ದೆಹಲಿ ಪೊಲೀಸ್ ಇಲಾಖೆಯು ವಕೀಲರಾದ ಶೈಲೇಂದ್ರ ಬಬ್ಬರ್ ಮತ್ತು ಅನಿಲ್ ಸೋನಿ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ಗಳಾಗಿ ನೇಮಿಸಿತ್ತು. ಇದಕ್ಕೆ ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ ಆಕ್ಷೇಪ ವ್ಯಕ್ತಪಡಿಸಿದರು.
ಪೊಲೀಸರನ್ನು ಪ್ರತಿನಿಧಿಸಲು ಲೆ. ಗವರ್ನರ್ ತಮ್ಮನ್ನು ನೇಮಿಸಿದ್ದಾರೆ ಎಂದು ಬಬ್ಬರ್ ನ್ಯಾಯಾಲಯಕ್ಕೆ ತಿಳಿಸಿದರು. ಕನ್ಹಯ್ಯಾ ಅವರು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬ ಬಗ್ಗೆ ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಎರಡೂ ಕಡೆಯ ವಕೀಲರಿಗೆ ನ್ಯಾಯಮೂರ್ತಿ ಅವರು ತಿಳಿಸಿದರು.
‘ನಿಮಗೆ ಏನು ಹೇಳಬೇಕೊ ಅದೆಲ್ಲವನ್ನೂ ಪ್ರತಿಕ್ರಿಯೆಯಲ್ಲಿ ತಿಳಿಸಿ. ನಮಗೆ ಎಲ್ಲವೂ ಸ್ಪಷ್ಟವಾಗಿ ಬೇಕು’ ಎಂದು ನ್ಯಾಯಮೂರ್ತಿ ಹೇಳಿದರು. ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಲಾಗಿದೆ.