ಇತ್ತೀಚಿನ ಎರಡು ವಿದ್ಯಮಾನಗಳು ವಿಚಾರವಂತರಲ್ಲಿ ಬೆರಗು ಮೂಡಿಸಿವೆ. ಒಂದು, ಜಯಲಲಿತಾ ಅವರು ಕಾನೂನು ಚೌಕಟ್ಟಿನಲ್ಲಿ ತಪ್ಪಿತಸ್ಥರಾದರೂ ತಮಿಳುನಾಡಿನ ಅಮ್ಮನ ಅಸಂಖ್ಯಾತ ಅಭಿಮಾನಿಗಳು ನಡೆದುಕೊಂಡ ರೀತಿ.
ಎರಡನೆಯದು ನಾಡಿನ ದಕ್ಷ ಅಧಿಕಾರಿ ರಶ್ಮಿ ಮಹೇಶ್ ಅವರ ಮೇಲೆ ಹಲ್ಲೆಗೆ ಪರೋಕ್ಷ ಕಾರಣವಾದ ಕಾನೂನು ಸುವ್ಯವಸ್ಥೆಯ ಪಾಲುದಾರರಾದ ಪೊಲೀಸ್ ಅಧಿಕಾರಿಗಳು ನಡೆದುಕೊಂಡ ರೀತಿ.
ಜಯಲಲಿತಾ ಅವರು ಏನೇ ಹಗರಣಗಳಲ್ಲಿ ಸಿಲುಕಿರಲಿ, ಅಧಿಕಾರಕ್ಕೆ ಬಂದಾಕ್ಷಣ ವಿನೂತನ ಯೋಜನೆ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಸಾಕು ಮಗನ ಮದುವೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದರ ಮೂಲಕ ಬಯಲಿಗೆ ಬಂದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಕೊನೆಗೆ ನ್ಯಾಯಾಲಯದ ಎದುರು ಬಯಲಾಗಿದೆ. ಇದರಿಂದ ಕಾನೂನಿನ ಮೇಲೆ ನಂಬುಗೆಯೂ, ವಿಶ್ವಾಸವೂ ಹೆಚ್ಚಿದೆ.
ರಶ್ಮಿ ಅವರು ದೊಡ್ಡ ಮೊತ್ತ ಒಳಗೊಂಡ ಹಗರಣದ ವರದಿಯನ್ನು ಸರ್ಕಾರಕ್ಕೆ ನೀಡಿದ್ದರೂ ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲವೇನೊ ಎಂಬ ಶಂಕೆ ಉಂಟಾಗಿದೆ. ಇದರಿಂದ, ಭ್ರಷ್ಟಾಚಾರ ತಡೆ ಪ್ರಯತ್ನಗಳ ಬಗೆಗಿನ ನಂಬುಗೆ ಸ್ವಲ್ಪ ಕಡಿಮೆ ಆಗಿದೆ. ಒಬ್ಬ ದಕ್ಷ ಅಧಿಕಾರಿ ಮೇಲೆ ಹಲ್ಲೆ ನಡೆದಾಗ ಅದನ್ನು ಖಂಡಿಸುವ ಸಮಷ್ಟಿ ಪ್ರಜ್ಞೆಯ ಕೊರತೆ ಇದೆ ಎಂದೂ ಅನಿಸುತ್ತದೆ.