<p>1<br /> ಗೆಳೆಯಾ, ಪ್ರತಿಯೊಂದು ಕವಿತೆಯೂ ಪರಮಪದ<br /> ಸೋಪಾನ. ಓದುಗನಿಗಿರಬೇಕು ಮೈತುಂಬ ಕಣ್ಣು;<br /> ಕಾಲು; ಕೈಯಿ. ಧುತ್ತೆಂದೇರಿ ಮೇಲಕ್ಕೆ, ಹೆಡೆಮೆಟ್ಟಿ<br /> ಜರ್ರನೆ ಜಾರಿ, ಕ್ರಮಿಸಬೇಕು ಮೀರಿದೇರಿಳಿವ ದಾರಿ.<br /> ಆಯಾಸವಾದಾಗ ನಿಲ್ಲಬೇಕು. ತಪ್ಪು ನಡೆಗಿಂತ ನಿಲು<br /> ಗಡೆ ವಾಸಿ. ಅಲ್ಲಲ್ಲಿ ಜಾರದಂತೆ ಮೇಲೇರಿ, ಇನ್ನೇನು<br /> ಕಡೆ ಹಾಯಬೇಕು, ಸಡನ್ನಾಗಿ ಧಡಕ್ಕನೆ ಮೊದಲ ಮೆಟ್ಟಿಲ<br /> ಮೇಲೇ ಕಾಲು. ಮತ್ತೆ ಶುರುಹಚ್ಚಬೇಕು ಓನಾಮದಿಂದ.<br /> ಹತ್ತುವಾಗ ಮೆಟ್ಟಿಲ ಮೇಲೇ ಇದ್ದರೆ ಕಣ್ಣು ಕೊನೆಗೆ<br /> ದಕ್ಕುವುದು ಏಣಿ ಮಾತ್ರ. ಸೋಪಾನ ದಾರಿ; ಆಕಾಶ<br /> ನಮ್ಮ ಗುರಿ. ನರ್ತಕಿಯ ನತ್ತಂತೆ ಅಗಾಗ ನಕ್ಷತ್ರ.<br /> ನಕ್ಷತ್ರ ಬೆಳಕಿನಾಕರವಲ್ಲ; ಆಕಾರ. ಪಟ್ಟಿಯಲ್ಲುಂಟು<br /> ಹಗಲಲ್ಲುರಿವ ಸೂರ್ಯ, ಇರುಳ ತೂಕಡಿಕೆ ಚಂದ್ರ.<br /> ಮಾತಿಗೆ ಹೇಸುವ ನಟ್ಟಿರುಳ ಲಾಟೀನಿನ ನಿಶ್ಶಬ್ದ ನಾಲಗೆ.<br /> <br /> 2<br /> ನಮ್ಮೂರ ಹನುಮಂತ ರಾಮಭಕ್ತನಲ್ಲ; ರಾವಣವೈರಿಯೂ ಅಲ್ಲ;<br /> ಕಡಲಹಾರಿದ ಕಲಿಯಲ್ಲ; ಪರ್ವತವೆತ್ತಿತಂದ ಗಗನಗಾಮಿಯಲ್ಲ;<br /> ಕೇವಲ ಒಬ್ಬ ಪೈಲ್ವಾನ. ಜಟ್ಟಿಗರಾಯ ಎಂದೇ ಇಲ್ಲಿ ಅವನ<br /> ನಾಮಧೇಯ. ಯಾವುದೋ ಗರಡಿಯ ಯಾವನೋ ಜಟ್ಟಿಯೊಂದಿಗೆ<br /> ಕುಸ್ತಿಹಿಡಿಯುವುದಷ್ಟೇ ಅವನ ಪರಮಧ್ಯೇಯ. ಹೀಗೆ ನಮ್ಮ ಜಟ್ಟಿ<br /> ರಾಮಾಯಣದ ಗಡಿ ದಾಟಿ ನಮ್ಮ ಹಳ್ಳಿಗೆ ಬಂದು ನೆಲೆಸಿದ್ದಾನೆ!<br /> ವೀರಗಾಸೆ. ಬರಿಮೈ. ಕುತ್ತಿಗೆಗೆ ಹತ್ತ ಕಟ್ಟಿದ ತಾಯತ. ತೊಡೆ<br /> ಚಪ್ಪರಿಸುವ ಬಲಗೈ. ಜುಟ್ಟ ಕಟ್ಟುತ್ತಿರುವ ಎಡಗೈ. ಮುರುಟುಗಿವಿ.<br /> ಈ ಅಖಾಡ ಸ್ಥಿತ ಹನುಮಂತ ತಕ್ಕ ಜೋಡಿಗಾಗಿ ಕಾಯುತ್ತಿರುವ<br /> ನತದೃಷ್ಟ ಏಕಾಂಗಿ. ಎಂಥ ಪಡಪೋಶಿ ಬಂದರೂ ಕುಸ್ತಿ ಹಿಡಿಯಲು ಸೈ<br /> ಎಂದು ಬಿಸುಸುಯ್ಯುತ್ತಾನೆ. ದೇವರೇ ಜಟ್ಟಿಯೊಬ್ಬನ ಕಳಿಸಪ್ಪಾ ಅಂತ<br /> ಪ್ರತಿನಿತ್ಯ ಗೋಗರೆಯುತ್ತಾನೆ. ಬಟಾಬಯಲು. ಎದುರಾಳಿಯ<br /> ಸುಳಿವಿಲ್ಲ. ಯಾಕವನ ಕಣ್ಣು ಕೆಂಪು? ತನ್ನನ್ನು ಹೀಗೆ ಕೆತ್ತಿಟ್ಟಿದ್ದಕ್ಕ?<br /> ಅಥವಾ ತನ್ನ ಸುಸ್ಥಿತಿಯಿಂದ ಒಂದು ದುರ್ಗತಿಗಾದರೂ ದಾಟಲಾಗದ್ದಕ್ಕ?<br /> <br /> <br /> 3<br /> ಗಾಳಿಯೂ ನೀರೂ ಕೂಡಿ ಮಾಡಿದ ಪದಾರ್ಥ ಅಲೆ. ಬೆಟ್ಟವೂ<br /> ಕಡಲೂ ಸೇರಿ ಸೃಜಿಸಿದ್ದು ಮಹಾನದಿ. ಕತ್ತಲೂ ಬೆಳಕು ಮೇಳೈ<br /> ಸಿ ನಿರ್ಮಿಸಿದ್ದು ನಕ್ಷತ್ರ. ಮಾತು ಮನಸ್ಸಿನ ಅಖಂಡಿತ ಮಿಲನ<br /> ದ ಫಲ ಸಾಹಿತ್ಯ. ಕೊಟ್ಟದ್ದು ತಂದೆ ಪಡೆದದ್ದು ತಾಯಿ. ಪ್ರತಿ<br /> ಯೊಂದು ಕೂಸೂ ಒಂದು ಉಭಯಕವಿ ನಿರ್ಮಾಣ. ಹಿಂದಿನಿಂದ<br /> ಬಂದದ್ದು ಇಂದನ್ನು ಕೂಡಿ ಪಡೆದ ಪಾಡು. ಒಂದಾಗಲಿಕ್ಕಾದರೂ<br /> ಎರಡು ಬೇಕೇ ಬೇಕು. ಖಾಲಿ ಹಾಳೆಯ ಮೇಲೆ ಪೆನ್ನಿಗದೆಂಥ ಅ<br /> ಸ್ಖಲಿತ ಪ್ರೀತಿ. ಬಯಲಿನ ಮೇಲೆ ಸಹಿಗೀಚಿದ ನದಿಗೆ ಅದೆಂಥ<br /> ಅನುಬಂಧ. ಪ್ರತಿಯೊಂದು ಪುಷ್ಪಪಾತ್ರೆಯ ತುಂಬ ನಿರ್ವ್ಯಾಜ<br /> ಬೆಳಕು. ಅಗಸ್ತ್ಯನ ಬೊಗಸೆಯಲ್ಲಿ ಮಿಡುಕಾಡುವ ನಿರ್ಗುಣ ನೀರ<br /> ಲಿಂಗ. ಓಹೋ ಪುಲ್ಲಿಂಗವೇ ಆಹಾ ಸ್ತ್ರೀಲಿಂಗವೇ ನಿಮ್ಮ ಮಿಲನವಿಲ್ಲ<br /> ದಾದೀತೇ ಈ ಜಗತ್ತೆಂಬ ಮಹದ್ರಂಗ. ಭೂಮಿಯಲ್ಲೂರಿದ ಪ್ರತಿ<br /> ಯೊಂದು ಮಳೆಯ ಬೀಜಕ್ಕೂ ನನ್ನ ಶಿರಸಾಷ್ಟಾಂಗ ವಂದನೆ.<br /> ಬಾನಗರ್ಭವನ್ನು ನಕ್ಷತ್ರಬೀಜ ಕಚ್ಚದೆ ಸೂರ್ಯ ಹುಟ್ಟಿದನೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>1<br /> ಗೆಳೆಯಾ, ಪ್ರತಿಯೊಂದು ಕವಿತೆಯೂ ಪರಮಪದ<br /> ಸೋಪಾನ. ಓದುಗನಿಗಿರಬೇಕು ಮೈತುಂಬ ಕಣ್ಣು;<br /> ಕಾಲು; ಕೈಯಿ. ಧುತ್ತೆಂದೇರಿ ಮೇಲಕ್ಕೆ, ಹೆಡೆಮೆಟ್ಟಿ<br /> ಜರ್ರನೆ ಜಾರಿ, ಕ್ರಮಿಸಬೇಕು ಮೀರಿದೇರಿಳಿವ ದಾರಿ.<br /> ಆಯಾಸವಾದಾಗ ನಿಲ್ಲಬೇಕು. ತಪ್ಪು ನಡೆಗಿಂತ ನಿಲು<br /> ಗಡೆ ವಾಸಿ. ಅಲ್ಲಲ್ಲಿ ಜಾರದಂತೆ ಮೇಲೇರಿ, ಇನ್ನೇನು<br /> ಕಡೆ ಹಾಯಬೇಕು, ಸಡನ್ನಾಗಿ ಧಡಕ್ಕನೆ ಮೊದಲ ಮೆಟ್ಟಿಲ<br /> ಮೇಲೇ ಕಾಲು. ಮತ್ತೆ ಶುರುಹಚ್ಚಬೇಕು ಓನಾಮದಿಂದ.<br /> ಹತ್ತುವಾಗ ಮೆಟ್ಟಿಲ ಮೇಲೇ ಇದ್ದರೆ ಕಣ್ಣು ಕೊನೆಗೆ<br /> ದಕ್ಕುವುದು ಏಣಿ ಮಾತ್ರ. ಸೋಪಾನ ದಾರಿ; ಆಕಾಶ<br /> ನಮ್ಮ ಗುರಿ. ನರ್ತಕಿಯ ನತ್ತಂತೆ ಅಗಾಗ ನಕ್ಷತ್ರ.<br /> ನಕ್ಷತ್ರ ಬೆಳಕಿನಾಕರವಲ್ಲ; ಆಕಾರ. ಪಟ್ಟಿಯಲ್ಲುಂಟು<br /> ಹಗಲಲ್ಲುರಿವ ಸೂರ್ಯ, ಇರುಳ ತೂಕಡಿಕೆ ಚಂದ್ರ.<br /> ಮಾತಿಗೆ ಹೇಸುವ ನಟ್ಟಿರುಳ ಲಾಟೀನಿನ ನಿಶ್ಶಬ್ದ ನಾಲಗೆ.<br /> <br /> 2<br /> ನಮ್ಮೂರ ಹನುಮಂತ ರಾಮಭಕ್ತನಲ್ಲ; ರಾವಣವೈರಿಯೂ ಅಲ್ಲ;<br /> ಕಡಲಹಾರಿದ ಕಲಿಯಲ್ಲ; ಪರ್ವತವೆತ್ತಿತಂದ ಗಗನಗಾಮಿಯಲ್ಲ;<br /> ಕೇವಲ ಒಬ್ಬ ಪೈಲ್ವಾನ. ಜಟ್ಟಿಗರಾಯ ಎಂದೇ ಇಲ್ಲಿ ಅವನ<br /> ನಾಮಧೇಯ. ಯಾವುದೋ ಗರಡಿಯ ಯಾವನೋ ಜಟ್ಟಿಯೊಂದಿಗೆ<br /> ಕುಸ್ತಿಹಿಡಿಯುವುದಷ್ಟೇ ಅವನ ಪರಮಧ್ಯೇಯ. ಹೀಗೆ ನಮ್ಮ ಜಟ್ಟಿ<br /> ರಾಮಾಯಣದ ಗಡಿ ದಾಟಿ ನಮ್ಮ ಹಳ್ಳಿಗೆ ಬಂದು ನೆಲೆಸಿದ್ದಾನೆ!<br /> ವೀರಗಾಸೆ. ಬರಿಮೈ. ಕುತ್ತಿಗೆಗೆ ಹತ್ತ ಕಟ್ಟಿದ ತಾಯತ. ತೊಡೆ<br /> ಚಪ್ಪರಿಸುವ ಬಲಗೈ. ಜುಟ್ಟ ಕಟ್ಟುತ್ತಿರುವ ಎಡಗೈ. ಮುರುಟುಗಿವಿ.<br /> ಈ ಅಖಾಡ ಸ್ಥಿತ ಹನುಮಂತ ತಕ್ಕ ಜೋಡಿಗಾಗಿ ಕಾಯುತ್ತಿರುವ<br /> ನತದೃಷ್ಟ ಏಕಾಂಗಿ. ಎಂಥ ಪಡಪೋಶಿ ಬಂದರೂ ಕುಸ್ತಿ ಹಿಡಿಯಲು ಸೈ<br /> ಎಂದು ಬಿಸುಸುಯ್ಯುತ್ತಾನೆ. ದೇವರೇ ಜಟ್ಟಿಯೊಬ್ಬನ ಕಳಿಸಪ್ಪಾ ಅಂತ<br /> ಪ್ರತಿನಿತ್ಯ ಗೋಗರೆಯುತ್ತಾನೆ. ಬಟಾಬಯಲು. ಎದುರಾಳಿಯ<br /> ಸುಳಿವಿಲ್ಲ. ಯಾಕವನ ಕಣ್ಣು ಕೆಂಪು? ತನ್ನನ್ನು ಹೀಗೆ ಕೆತ್ತಿಟ್ಟಿದ್ದಕ್ಕ?<br /> ಅಥವಾ ತನ್ನ ಸುಸ್ಥಿತಿಯಿಂದ ಒಂದು ದುರ್ಗತಿಗಾದರೂ ದಾಟಲಾಗದ್ದಕ್ಕ?<br /> <br /> <br /> 3<br /> ಗಾಳಿಯೂ ನೀರೂ ಕೂಡಿ ಮಾಡಿದ ಪದಾರ್ಥ ಅಲೆ. ಬೆಟ್ಟವೂ<br /> ಕಡಲೂ ಸೇರಿ ಸೃಜಿಸಿದ್ದು ಮಹಾನದಿ. ಕತ್ತಲೂ ಬೆಳಕು ಮೇಳೈ<br /> ಸಿ ನಿರ್ಮಿಸಿದ್ದು ನಕ್ಷತ್ರ. ಮಾತು ಮನಸ್ಸಿನ ಅಖಂಡಿತ ಮಿಲನ<br /> ದ ಫಲ ಸಾಹಿತ್ಯ. ಕೊಟ್ಟದ್ದು ತಂದೆ ಪಡೆದದ್ದು ತಾಯಿ. ಪ್ರತಿ<br /> ಯೊಂದು ಕೂಸೂ ಒಂದು ಉಭಯಕವಿ ನಿರ್ಮಾಣ. ಹಿಂದಿನಿಂದ<br /> ಬಂದದ್ದು ಇಂದನ್ನು ಕೂಡಿ ಪಡೆದ ಪಾಡು. ಒಂದಾಗಲಿಕ್ಕಾದರೂ<br /> ಎರಡು ಬೇಕೇ ಬೇಕು. ಖಾಲಿ ಹಾಳೆಯ ಮೇಲೆ ಪೆನ್ನಿಗದೆಂಥ ಅ<br /> ಸ್ಖಲಿತ ಪ್ರೀತಿ. ಬಯಲಿನ ಮೇಲೆ ಸಹಿಗೀಚಿದ ನದಿಗೆ ಅದೆಂಥ<br /> ಅನುಬಂಧ. ಪ್ರತಿಯೊಂದು ಪುಷ್ಪಪಾತ್ರೆಯ ತುಂಬ ನಿರ್ವ್ಯಾಜ<br /> ಬೆಳಕು. ಅಗಸ್ತ್ಯನ ಬೊಗಸೆಯಲ್ಲಿ ಮಿಡುಕಾಡುವ ನಿರ್ಗುಣ ನೀರ<br /> ಲಿಂಗ. ಓಹೋ ಪುಲ್ಲಿಂಗವೇ ಆಹಾ ಸ್ತ್ರೀಲಿಂಗವೇ ನಿಮ್ಮ ಮಿಲನವಿಲ್ಲ<br /> ದಾದೀತೇ ಈ ಜಗತ್ತೆಂಬ ಮಹದ್ರಂಗ. ಭೂಮಿಯಲ್ಲೂರಿದ ಪ್ರತಿ<br /> ಯೊಂದು ಮಳೆಯ ಬೀಜಕ್ಕೂ ನನ್ನ ಶಿರಸಾಷ್ಟಾಂಗ ವಂದನೆ.<br /> ಬಾನಗರ್ಭವನ್ನು ನಕ್ಷತ್ರಬೀಜ ಕಚ್ಚದೆ ಸೂರ್ಯ ಹುಟ್ಟಿದನೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>