ಉಡುಪಿ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಮೂಲ ಶಿಕ್ಷಣ ನೀಡಲು ಆರಂಭಿಸಿದ್ದ ಮಾಹಿತಿ ಮತ್ತು ಗಣಕ ತರಬೇತಿ (ಐಸಿಟಿ) ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಶೈಕ್ಷಣಿಕ ವರ್ಷದಿಂದ ಸ್ಥಗಿತಗೊಳಿಸಿದೆ.
ರಾಜ್ಯದ 708 ಸರ್ಕಾರಿ ಕಾಲೇಜುಗಳಲ್ಲಿ 2009–10ರಲ್ಲಿ ಐಸಿಟಿ ಆರಂಭವಾಗಿತ್ತು. ಪ್ರತಿ ವರ್ಷ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ಕಂಪ್ಯೂಟರ್ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನದ ತರಬೇತಿ ಪಡೆಯುತ್ತಿದ್ದರು.
ಖಾಸಗಿ ಕಂಪೆನಿಯೊಂದಕ್ಕೆ ಈ ಕಾರ್ಯಕ್ರಮ ಜಾರಿಗೊಳಿಸುವ ಜವಾಬ್ದಾರಿ ನೀಡಲಾಗಿತ್ತು. ಐದು ನೂರು ವಿದ್ಯಾರ್ಥಿಗಳು ಇರುವ ಕಾಲೇಜಿಗೆ 10 ಕಂಪ್ಯೂಟರ್, ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗಿತ್ತು. ಕಂಪೆನಿಯೇ ಕಂಪ್ಯೂಟರ್ ಶಿಕ್ಷಕರನ್ನು ನೇಮಕ ಮಾಡಿತ್ತು. ಗುತ್ತಿಗೆ ಅವಧಿ ಮುಗಿದಿರುವ ಕಾರಣ ಐಸಿಟಿ ಕಾರ್ಯಕ್ರಮ ನಿಲ್ಲಿಸಿರುವುದರಿಂದ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣ ವಂಚಿತರಾಗಿದ್ದಾರೆ.
ಕಾಲೇಜುಗಳಿಗೆ ಒದಗಿಸಿರುವ ಸುಮಾರು 7 ಸಾವಿರ ಕಂಪ್ಯೂಟರ್, ಪ್ರಿಂಟರ್ಗಳು ಮತ್ತಿತರ ಸಾಮಗ್ರಿಗಳು ದೂಳು ಹಿಡಿಯುತ್ತಿವೆ.
ಖಾಸಗಿ ಕಾಲೇಜುಗಳ ದುಬಾರಿ ಶುಲ್ಕ ಭರಿಸಲಾಗದ ಗ್ರಾಮೀಣ ಪ್ರದೇಶದ ಬಡ ಮತ್ತು ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಗೆ ಸೇರುತ್ತಾರೆ. ಶುಲ್ಕ ಪಾವತಿಸಿ ಖಾಸಗಿಯಾಗಿ ಕಂಪ್ಯೂಟರ್ ಶಿಕ್ಷಣ ಪಡೆಯುವಷ್ಟು ಆರ್ಥಿಕಶಕ್ತಿ ಇವರಲ್ಲಿ ಇರುವುದಿಲ್ಲ. ಆದ್ದರಿಂದ ಐಸಿಟಿ ಯೋಜನೆ ಬಡ ವಿದ್ಯಾರ್ಥಿಗಳಿಗೆ ವರದಾನವಾಗಿತ್ತು.
ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ಅವಧಿಯ (ಪೀರಿಯಡ್) ಕಂಪ್ಯೂಟರ್ ಶಿಕ್ಷಣ ಮತ್ತು ಎರಡು ಅವಧಿಯ ಕಂಪ್ಯೂಟರ್ ಸಂಬಂಧಿ ವಿಷಯದ ತರಬೇತಿ ನೀಡಲಾಗುತ್ತಿತ್ತು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಅವಧಿ ಕಂಪ್ಯೂಟರ್ ಮತ್ತು ಮೂರು ಅವಧಿಯ ಕಂಪ್ಯೂಟರ್ಗೆ ಸಂಬಂಧಿಸಿದ ತರಬೇತಿ ತರಗತಿ ನಡೆಸಲಾಗುತ್ತಿತ್ತು.
ಪಿಯುಸಿ ನಂತರ ವಿದ್ಯಾಭ್ಯಾಸ ಮುಂದುವರೆಸಲಾಗದ ವಿದ್ಯಾರ್ಥಿಗಳು ಖಾಸಗಿ ಕಂಪೆನಿಯಲ್ಲಿ ಕೆಲಸ ಪಡೆಯಲು ಅಥವಾ ಸ್ವಂತ ಉದ್ಯೋಗ ಮಾಡಲು ಇದರಿಂದ ಅನುಕೂಲವಾಗುತ್ತಿತ್ತು. ಆಸಕ್ತಿ, ಸಾಮರ್ಥ್ಯ ಇರುವ ವಿದ್ಯಾರ್ಥಿಗಳು ಬೇಡಿಕೆ ಇರುವ ಕಂಪ್ಯೂಟರ್ ಕೋರ್ಸ್ಗಳನ್ನು ಪೂರೈಸಿ ಉತ್ತಮ ಉದ್ಯೋಗ ಪಡೆಯಲೂ ಸಹಕಾರಿಯಾಗಿತ್ತು.
‘ಯೋಜನೆ ಜಾರಿಗೊಳಿಸಲು ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. 2013–14ನೇ ಸಾಲಿಗೆ ಗುತ್ತಿಗೆ ಅವಧಿ ಮುಗಿದಿದೆ. ಯೋಜನೆ ಮುಂದುವರಿಸಲು ಮತ್ತೆ ಸರ್ಕಾರದ ಒಪ್ಪಿಗೆ ಬೇಕು. ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸುವಂತೆ ಸೂಚನೆ ಬಂದಿದೆ. ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆ. ಆ ನಂತರ ಸರ್ಕಾರದ ಸೂಚನೆಯಂತೆ ಮುಂದುವರಿಯಲಾಗುತ್ತದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಸಕ್ತ ಸಾಲಿನ ಪಿಯುಸಿ ತರಗತಿಗಳು ಜೂನ್ನಲ್ಲಿಯೇ ಆರಂಭವಾಗಿವೆ. ಕ್ರಿಯಾಯೋಜನೆ ರೂಪಿಸಿ ಅದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿ ಮತ್ತೆ ಐಸಿಟಿ ಜಾರಿಯಾಗುವ ವೇಳೆಗೆ ಈ ವರ್ಷದ ತರಗತಿಗಳು ಮುಗಿದಿರುತ್ತವೆ ಎಂದು ಪಿಯುಸಿ ಕಾಲೇಜಿನ ಕೆಲವು ಉಪನ್ಯಾಸಕರು ಅಭಿಪ್ರಾಯ ಪಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.