ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಗೂರಿನ ಸುಂದರಿಯರು!

Last Updated 23 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕಿರಗೂರಿಗೆ ಮತ್ತಷ್ಟು ಕಳೆ ಬಂದಿದೆ. ಗಾಂಧಿನಗರದ ‘ಗಯ್ಯಾಳಿ’ ಸುಂದರಿಯರು ಕಿರಗೂರಿನತ್ತ ಹೊರಡಲು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೂ ಮೊದಲೇ ಅವರನ್ನು ಕಿರಗೂರು ಆವರಿಸಿಕೊಂಡಿದೆ. ಅತ್ತ ಕಿರಗೂರಿನ ಗದ್ದೆ ಬಯಲಿನ ಬಿರುಗಾಳಿಯೂ ಈ ಸುದ್ದಿ ಕೇಳಿ ತಣ್ಣಗಾಗಿರಬಹುದು. ಗರಗಸದ ಹರಿತಕ್ಕೆ ಜಗ್ಗದ ಹೆಬ್ಬಲಸಿನ ಮರ ಅಲುಗಾಡಿರಬಹುದು.

ದಾನಮ್ಮ, ನಾಗಮ್ಮ, ಈರಿ, ಕಾಳಿ, ಸುಬ್ಬಮ್ಮ – ಹೀಗೆ ಎಲ್ಲಾ ಗಯ್ಯಾಳಿಗಳನ್ನೂ ಸ್ವಾಗತಿಸಲು ಕಿರಗೂರು ಕಾತರದಿಂದ ಕಾದಿದೆ. ಅವರೊಟ್ಟಿಗೆ ಶಂಕ್ರಪ್ಪ, ಭೈರಪ್ಪ, ಕರಿಯ, ಮಾರ ಮುಂತಾದವರೂ ಕಿರಗೂರೆಂಬೋ ಕೌತುಕಮಯ ಹಳ್ಳಿಯತ್ತ ಹೆಜ್ಜೆ ಹಾಕಲು ಸಿದ್ಧರಾಗಿದ್ದಾರೆ.

‘ಆಲ್ ಗಯ್ಯಾಳೀಸ್ ಇನ್ ಬೋರ್ಡ್’ ಎಂದು ನಗುತ್ತಾರೆ ಸುಮನಾ. ಸಿನಿಮಾಕ್ಕೆ ಆಯ್ಕೆಯಾಗುತ್ತಿದ್ದಂತೆಯೇ ಪ್ರತಿಯೊಬ್ಬ ಕಲಾವಿದರೂ ತಮ್ಮ ಪಾತ್ರದೊಳಗೆ ಪ್ರವೇಶಿಸುವ ಪ್ರಯತ್ನಕ್ಕಿಳಿದಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಕಥೆಯೊಂದು ಸಿನಿಮಾ ರೂಪ ತಾಳುತ್ತಿದೆ ಎನ್ನುವುದರ ಜತೆಗೆ ಈ ಸಣ್ಣ ಕಥೆಯನ್ನು ಸಿನಿಮಾಕ್ಕೆ ಹೇಗೆ ಒಗ್ಗಿಸುತ್ತಾರೆ ಎಂಬ ಕುತೂಹಲವೂ ಮೂಡಿದೆ. ಈ ಸವಾಲಿನ ಮೂಟೆಯನ್ನು ಹೊತ್ತ ನಿರ್ದೇಶಕಿ ಸುಮನಾ ಕಿತ್ತೂರು ಈಗಲೇ ತುಸು ಭಾರ ಕಡಿಮೆ ಯಾದ ನಿರಾಳತೆಯಲ್ಲಿದ್ದಾರೆ.

ಅದಕ್ಕೆ ಕಾರಣವಾಗಿರುವುದು ಕಲಾವಿದರ ಬಳಗ, ಮತ್ತು ಅವರ ತುಡಿತ. ಸಂಭಾಷಣೆಯ ಶೈಲಿ, ಉಡುಪು, ದೇಹಭಾಷೆ, ಹಳ್ಳಿ

ಹೆಣ್ಣುಮಕ್ಕಳು ಮಾಡುವ ಕೆಲಸಗಳನ್ನು ಅರಿತುಕೊಳ್ಳುವ ಉತ್ಸುಕತೆ ‘ಗಯ್ಯಾಳಿ’ ಗಳಾಗುತ್ತಿ ರುವ ಶ್ವೇತಾ ಶ್ರೀವಾಸ್ತವ್, ಸುಕೃತಾ ವಾಗ್ಳೆ, ಮಾನಸಾ ಜೋಶಿ, ಸೋನುಗೌಡ, ಕಾರುಣ್ಯ ರಾಮ್ ಮುಂತಾದ ಬೆಡಗಿಯರದ್ದು. ಅವರೆಲ್ಲರಿಗೂ ಹಿರಿಯಕ್ಕನಂತೆ ರಂಗಭೂಮಿ ಕಲಾವಿದೆ ಭಾಗೀರತಿ ಬಾಯಿ ಕದಂ ಇದ್ದಾರೆ.

ಶಾಂತಾ ಆಚಾರ್ಯ, ಹನುಮಕ್ಕ, ಕಿಶೋರ್, ಸುಂದರ್, ಶರತ್ ಲೋಹಿತಾಶ್ವ, ಅಚ್ಯುತಕುಮಾರ್ ಅವರಂತಹ ಕಲಾವಿದರೊಂದಿಗೆ ಸಂಪತ್‌ಕುಮಾರ್‌ ಮತ್ತು ಚಕ್ರಪಾಣಿ ಎಂಬ ರಂಗಭೂಮಿಯ ಹೊಸ ಪ್ರತಿಭೆಗಳು ಸಿನಿಮಾರಂಗಕ್ಕೆ ಕಾಲಿರಿಸುತ್ತಿದ್ದಾರೆ, ‘ಕಿರಗೂರಿನ ಗಯ್ಯಾಳಿಗಳು’ ತಂಡದಲ್ಲಿರುವ ಪ್ರತಿ ಕಲಾವಿದರೂ ರಂಗಭೂಮಿ ಹಿನ್ನೆಲೆಯವರು. ಜತೆಗೆ ಹಳ್ಳಿಗಾಡಿನ ಪರಿಸರ ತಕ್ಕಮಟ್ಟಿನ ಪರಿಚಯವನ್ನೂ ಉಳ್ಳವರು.

ಹೀಗಾಗಿ ಸುಮನಾ ಕಿತ್ತೂರು, ಈ ಚಿತ್ರದ ಪಾತ್ರಗಳ ಸಿದ್ಧತೆಗಾಗಿ ಯಾವುದೇ ಕಾರ್ಯಗಾರ ಮಾಡುವ ಪ್ರಯತ್ನಕ್ಕೆ ಮುಂದಾಗಿಲ್ಲ. ‘ಈ ಕಲಾವಿದರೆಲ್ಲರೂ ಪ್ರಬುದ್ಧರು. ಅವರಿಗೆ ಅವರವರ ಪಾತ್ರಗಳ ಆಶಯ, ಮನಸ್ಥಿತಿಗಳನ್ನು ವಿವರಿಸಿದ್ದೇನೆ ಅಷ್ಟೇ. ಉಳಿದಂತೆ ಅವರನ್ನು ಸ್ವತಂತ್ರವಾಗಿ ಬಿಟ್ಟಿದ್ದೇನೆ. ತಮ್ಮ ಪಾತ್ರಕ್ಕೆ ಏನು ಬೇಕೋ ಅದರ ತಯಾರಿಯನ್ನು ಅವರೇ ಮಾಡಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಸುಮನಾ.

ತಮ್ಮ ಮೂಗಿನ ಮೇಲೆ ಅಪಾರ ಪ್ರೀತಿ ಇರಿಸಿಕೊಂಡ ವರು ಶ್ವೇತಾ ಶ್ರೀವಾಸ್ತವ್. ದಾನಮ್ಮನ ಪಾತ್ರಕ್ಕೆ ಆಯ್ಕೆಯಾದ ಕೂಡಲೇ ಅವರು ಕೇಳಿದ್ದು, ‘ದಾನಮ್ಮ ಮೂಗುನತ್ತು ಹಾಕಿ ಕೊಳ್ಳುತ್ತಾಳೆ ಅಲ್ಲವಾ?’. ‘ಹೌದು ಹಾಕಿಕೊಳ್ಳುತ್ತಾಳೆ’ ಎಂದು ಉತ್ತರಿಸಿದ್ದ ಸುಮನಾ, ಮೂಗಿಗೆ ಸಿಕ್ಕಿಸಿಕೊಳ್ಳುವಂತಹ ನತ್ತನ್ನು ಹಾಕಿಕೊಳ್ಳುತ್ತಾರೆ ಎಂದು ಭಾವಿಸಿದ್ದರು. ‘ಸರ್‌ಪ್ರೈಸ್‌’ ಎನ್ನು ವಂತೆ ಮೂಗು ಚುಚ್ಚಿಸಿಕೊಂಡ ಫೋಟೊ ಕಳುಹಿಸಿದರು ಶ್ವೇತಾ.

‘ನಮ್ಮಜ್ಜಿ ಹೀಗೇ ಸೀರೆ ಉಡುತ್ತಿದ್ದರು. ಹೀಗೆ ಕಾಲ್ಕಡಗ ಹಾಕಿಕೊಳ್ಳುತ್ತಿದ್ದರು. ನಾನೂ ಹೀಗೆಯೇ ಮಾಡುತ್ತೇನೆ’ ಎಂದು ಹಟತೊಟ್ಟು ಪಾತ್ರಕ್ಕೆ ಸಿದ್ಧವಾಗುತ್ತಿದ್ದಾರೆ ಸುಕೃತಾ. ಮೊಬೈಲ್‌ನಲ್ಲಿ ಎಸ್‌ಎಂಎಸ್‌ ಕಳುಹಿಸುವಾಗ ‘ಹಾಯ್‌’, ‘ಫೈನ್‌’ ಎನ್ನುತ್ತಿದ್ದ ಸುಕೃತಾ, ಈಗ ‘ನಾ ಚೆನ್ನಾಗಿದ್ದೇನೆ ಕಣವ್ವಾ. ಕೆಲ್ಸದಗಿದೀನಿ ಆಮೇಲ್ ಮಾಡ್ತೀನಿ’ ಎಂದು ಉತ್ತರಿಸುತ್ತಾರೆ.

ಗಯ್ಯಾಳಿಗಳ ಬೈಗುಳಗಳನ್ನು ಕಲಿಯಲು ಸುಕೃತಾ ‘ಬೈಗುಳ’ ಎಂಬ ಪುಸ್ತಕವನ್ನೇ ಖರೀದಿಸಿ, ಅದರಲ್ಲಿನ ಬೈಗುಳಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದಾರೆ! ಪಾತ್ರದ ಬಗ್ಗೆ ಹೇಳಿದಾಗ ಸೋನು ಗೌಡ ಅದಕ್ಕೆ ತಕ್ಕಂತೆಯೇ ಸಿದ್ಧವಾಗಿ ಸುಮನಾ ಅವರೆದುರು ಹಾಜರಾಗಿದ್ದರು. ‘ಎಲ್ಲರೂ ಶೇ 100ರಷ್ಟು ತಾವೇ ಎಲ್ಲದರಲ್ಲಿಯೂ ತೊಡಗಿಸಿಕೊಳ್ಳುತ್ತಿರುವಾಗ ಒಬ್ಬ ನಿರ್ದೇಶಕರಿಗೆ ಇನ್ನೇನು ಬೇಕು.

ಈ ಪ್ರತಿಭೆಗಳನ್ನೆಲ್ಲಾ ತೆರೆಯ ಮೇಲೆ ನೋಡುವುದೇ ಒಂದು ಸಂಭ್ರಮ’ ಎಂಬ ನೆಮ್ಮದಿಯ ಮಾತನ್ನಾಡುತ್ತಾರೆ ಸುಮನಾ. ಅವರ ಪ್ರಕಾರ ಇಲ್ಲಿನ ಪ್ರತಿ ಗಯ್ಯಾಳಿಗಳೂ ಒಬ್ಬೊಬ್ಬ ಹೀರೊಗಳು! ಕಿರಗೂರಿನ ಪ್ರಜೆಗಳೆಲ್ಲರೂ ‘ಕಿರಗೂರಿನ ಮಂದಿ’ ಎಂಬ ವಾಟ್ಸಾಪ್‌ ಗ್ರೂಪ್‌ನಲ್ಲಿ ಒಂದಾಗಿದ್ದಾರೆ. ಸದ್ಯಕ್ಕೆ ಈ ಗುಂಪೇ ಅವರ ಕಲಿಕಾ ಕೇಂದ್ರ. 

ಕಾದಂಬರಿಯಲ್ಲ, ಕಥೆ 
‘ತುಂಬಾ ಮಂದಿ ‘ಕಿರಗೂರಿನ ಗಯ್ಯಾಳಿಗಳು’ ಪುಸ್ತಕವನ್ನು ಕಾದಂಬರಿ ಎಂದುಕೊಂಡಿದ್ದಾರೆ. ಕಾದಂಬರಿಯನ್ನು ಸಿನಿಮಾ ಮಾಡುವುದು ಕಷ್ಟವೇ ಎಂಬ ಪ್ರಶ್ನೆಗಳೂ ಕೇಳಿಬಂದಿದೆ. ಆದರೆ ಇದು ಕಾದಂಬರಿಯಲ್ಲ. 10 ನಿಮಿಷದ ಸಿನಿಮಾ ಆಗಬಲ್ಲ ಕಥೆಯಷ್ಟೇ. ಅದನ್ನು ತೇಜಸ್ವಿ ಅವರ ಆಶಯಕ್ಕೆ ಧಕ್ಕೆ ಉಂಟಾಗದಂತೆ ಎರಡು ಗಂಟೆಯ ಸಿನಿಮಾಕ್ಕೆ ಒಗ್ಗಿಸಲಾಗಿದೆ. ಇಲ್ಲಿನ ಪಾತ್ರಗಳೂ ವಿಸ್ತಾರಗೊಂಡಿವೆ. ಅದರ ಹಿಂದೆ ಸಾಕಷ್ಟು ಪರಿಶ್ರಮವಿದೆ’ ಎಂದು ಸ್ಪಷ್ಟಪಡಿಸುತ್ತಾರೆ ಸುಮನಾ.

ವ್ಯಾಕರಣ ಕಲಿಕೆ
‘ಪಾತ್ರದ ಸ್ವರೂಪದ ಬಗ್ಗೆ ಸುಮನಾ ಕಿತ್ತೂರು ವಿವರಿಸಿದ್ದಾರೆ. ಭೇಟಿ ಮಾಡಿದಾಗಲೆಲ್ಲಾ ಹೇಗೆ ಇರಬೇಕೆಂದು ವಿವರಿಸುತ್ತಾರೆ. ಫೋನ್‌ನಲ್ಲಿಯೂ ಇನ್‌ಪುಟ್ ನೀಡುತ್ತಾರೆ. ದಿನವೂ ಇನ್‌ಪುಟ್ ಡಿಟೈಲ್ಸ್ ಬಗ್ಗೆ ಹೇಳುತ್ತಾರೆ. ಯಾವುದೇ ವರ್ಕ್‌ಶಾಪ್ ಬೇಡ. ಹಾಗೆ ಮಾಡಿದರೆ ಫ್ರೆಶ್‌ನೆಸ್ ಹೋಗುತ್ತದೆ. ಕ್ಯಾಮೆರಾ ಮುಂದೆಯೇ ಎಲ್ಲವೂ ಹೊರಬರಲಿ ಎಂದು ಸುಮನಾ ಬಯಸಿದ್ದಾರೆ. ಕಿರಗೂರು ಎಂದಾಕ್ಷಣ ಗಯ್ಯಾಳಿಗಳು ಮನಸಿಗೆ ಬರುತ್ತಾರೆ.

ಆ ರೀತಿ ಏನನ್ನೂ ತಲೆಯಲ್ಲಿ ಇಟ್ಟುಕೊಳ್ಳಬೇಡ. ಇಟ್ಟುಕೊಂಡಷ್ಟೂ ಮುಂದೆ ಏನಾಗುತ್ತದೆ ಎಂದು ಯೋಚನೆ ಬರುತ್ತದೆ. ಬ್ಲಾಂಕ್ ಆಗಿ ಇರಬೇಕು ಎಂದು ಸುಮನಾ ಹೇಳಿದ್ದಾರೆ. ಈಗ ನನ್ನದು ಭಾಷೆ ತಿದ್ದಿಕೊಳ್ಳುವ ಸಾಹಸ. ಭಾಷೆಯನ್ನು ಶುದ್ಧಗೊಳಿಸಿಕೊಳ್ಳುವ, ವ್ಯಾಕರಣ ಸುಧಾರಿಸಿಕೊಳ್ಳುವ ಸಲುವಾಗಿ ದಿನವೂ ಪತ್ರಿಕೆ, ಮ್ಯಾಗಜೀನ್‌ಗಳನ್ನು ಓದುತ್ತಿದ್ದೇನೆ’ ಎನ್ನುತ್ತಾರೆ ಸೋನು ಗೌಡ.

ಗಯ್ಯಾಳಿ ಲುಕ್
‘ಸಿನಿಮಾ ಶುರುವಾಗುವವರೆಗೂ ಬ್ಯೂಟಿ ಪಾರ್ಲರ್‌ಗೆ ಹೋಗುವಂತಿಲ್ಲ. ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸಬೇಕಿದೆ. ಹಳ್ಳಿಯ ಪಾತ್ರ ಹೊಸತಲ್ಲ. ಆದರೆ ಈಗ ಗಯ್ಯಾಳಿ ಲುಕ್ ಕಾಣಿಸಿಕೊಳ್ಳಲು ತಯಾರಿ ನಡೆಸಿದ್ದೇನೆ. ವಿಶೇಷವೆಂದರೆ ‘ಬಹುಪರಾಕ್’ನಲ್ಲಿ ನನ್ನ ಮಗಳಾಗಿ ಸುಕೃತಾ ನಟಿಸಿದ್ದರು. ಈಗ ಅದಕ್ಕೆ ವಿರುದ್ಧವಾದ ಪಾತ್ರ. ನಾನು ಮತ್ತು ಸುಕೃತಾ ಆಗಾಗ ತಾಲೀಮು‌ನಡೆಸುತ್ತಿದ್ದೇವೆ’ ಎನ್ನುತ್ತಾರೆ ಮಾನಸಾ ಜೋಶಿ.

‘ಕಾಳಿ’ ಪರಕಾಯ ಪ್ರವೇಶ
ತುಂಬಾ ಪ್ರಬುದ್ಧ  ಪಾತ್ರವಾಗಿರುವು ದರಿಂದ ಅದರ ಸ್ವರೂಪಕ್ಕೆ ತಕ್ಕಂತೆ ೫ ಕಿಲೋ ತೂಕ ಹೆಚ್ಚಿಸಿಕೊಂಡಿದ್ದೇನೆ. ನನ್ನದು ಉಡುಪಿ

ಮೂಲ ಆಗಿರುವುದರಿಂದ ಬಯಲು ಸೀಮೆಯ ಸ್ಲ್ಯಾಂಗ್ ಸ್ವಲ್ಪ ಕಷ್ಟ. ಚಿತ್ರದುರ್ಗದಲ್ಲಿ ಓದಿದ್ದರಿಂದ ಅಲ್ಲಿನ ಸ್ಲ್ಯಾಂಗ್ ಬರುತ್ತದೆ, ಅದನ್ನೇ ಎಲ್ಲರೊಟ್ಟಿಗೆ ಮಾತನಾಡುತ್ತಿದ್ದೇನೆ. ಒಂದು ತಿಂಗಳಿನಿಂದ ಪಾರ್ಲರ್‌ಗೆ ಹೋಗುತ್ತಿಲ್ಲ. ಕ್ಯಾಮೆರಾ ಅಂತೂ ಫೇಸ್ ಮಾಡುತ್ತಿಲ್ಲ.

ಮುಖ, ಕಣ್ಣು, ಕೂದಲು ಯಾವುದಕ್ಕೂ ಟ್ರೀಟ್‌ಮೆಂಟ್‌ ಮಾಡುತ್ತಿಲ್ಲ. ಮುಖ್ಯವಾಗಿ ಹಳ್ಳಿಯ ದೇಹಭಾಷೆ ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಮಾನಸಿಕವಾಗಿಯೂ ಹಳ್ಳಿ ಹುಡುಗಿಯಂತೆ ಯೋಚಿಸಬೇಕು. ನಾನು ಬಿಳಿ ಜಾಸ್ತಿ ಆಗಿರುವುದರಿಂದ ಸ್ವಲ್ಪ ಕಪ್ಪಾಗುತ್ತಿದ್ದೇನೆ. ಮಿಗಿಲಾಗಿ ನಾನೀಗಲೇ ‘ಕಾಳಿ’ಯಾಗಿದ್ದೇನೆ. ಮನೆಯಲ್ಲಿಯೂ ಎಲ್ಲರೂ ನನ್ನನ್ನು ಕಾಳಿ ಎಂದೇ ಕರೆಯುತ್ತಿದ್ದಾರೆ.

ಎಲ್ಲರೂ ಖ್ಯಾತ ಕಲಾವಿದರೇ ಇರುವುದರಿಂದ ಅವರಿಗೆ ಸರಿಸಮವಾಗಿ, ಕಥೆಯ ಪಾತ್ರ ದುರ್ಬಲವಾಗದಂತೆ ಸಮತೋಲನ ಸಾಧಿಸಬೇಕಾದ ಸವಾಲು ನನ್ನ ಮುಂದಿದೆ. ಅದು ಸ್ವಾಭಾವಿಕವಾಗಿ ಬರಬೇಕು. ನನ್ನನ್ನು ನಾನು ಮರೆಯಬೇಕು. ಈಗಾಗಲೇ ಶೇ 50ರಷ್ಟು ಆ ಪಾತ್ರದ ಒಳಹೊಕ್ಕಿದ್ದೇನೆ. ಇದೆಲ್ಲವೂ ಸಾಧ್ಯವಾಗುತ್ತಿರುವುದು ಸುಮನಾ ಅವರಿಂದ. ನಿಮ್ಮಿಂದ ಈ ಪಾತ್ರ ಸಾಧ್ಯ ಎಂಬ ಆತ್ಮವಿಶ್ವಾಸ ತುಂಬಿಸಿದವರು ಅವರು’ ಎನ್ನುತ್ತಾರೆ ಸುಕೃತಾ ವಾಗ್ಳೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT