ಬೆಂಗಳೂರು: ಬ್ಯಾಟರಾಯನಪುರ ಸಮೀಪದ ಹೊಸಬಡಾವಣೆಯಲ್ಲಿ ಮಂಗಳವಾರ ರಾತ್ರಿ ಪಾನಮತ್ತ ಸ್ನೇಹಿತರ ನಡುವೆ ಹಣಕಾಸಿನ ವಿಚಾರಕ್ಕೆ ಆರಂಭವಾದ ಜಗಳ, ಒಬ್ಬಾತನ ಕೊಲೆಯಲ್ಲಿ ಅಂತ್ಯ ಕಂಡಿದೆ.
ಹೊಸಬಡಾವಣೆ ನಿವಾಸಿ ಸುನೀಲ್ ಅಲಿಯಾಸ್ ಕೆಂಪೇಗೌಡ (26) ಕೊಲೆಯಾದವರು. ಈ ಸಂಬಂಧ ಚೇತನ್ (22) ಹಾಗೂ 16 ವರ್ಷದ ಬಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮೂವರೂ ಸ್ನೇಹಿತರಾಗಿದ್ದು, ರಾತ್ರಿ ಹೊಸ ಬಡಾವಣೆಯ ಬಾರ್ವೊಂದರಲ್ಲಿ ಪಾನಮತ್ತರಾಗಿದ್ದಾರೆ. ಈ ವೇಳೆ ಹಣಕಾಸಿನ ವಿಚಾರವಾಗಿ ಪರಸ್ಪರರ ನಡುವೆ ಗಲಾಟೆಯಾಗಿದೆ.
ಆಗ ಆರೋಪಿಗಳು, ಸುನೀಲ್ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅವರಿಬ್ಬರನ್ನೂ ರಾತ್ರಿಯೇ ವಶಕ್ಕೆ ಪಡೆಯಲಾಗಿದೆ. ಸುನೀಲ್ ಅವರು, ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಬ್ಯಾಟರಾಯನಪುರ ಪೊಲೀಸರು ತಿಳಿಸಿದರು.
ಇನ್ನೊಂದು ಪ್ರಕರಣ: ಕಳೆದ ತಿಂಗಳು ಜೆ.ಸಿ.ನಗರದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಐಸ್ಕ್ರೀಂ ಅಂಗಡಿ ಮಾಲೀಕ ಯೋಗೇಶ್ ಅಂಗಡೆ (58) ಅವರು ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಜೆ.ಸಿ.ನಗರ ನಿವಾಸಿಯಾದ ಯೋಗೇಶ್, ಜೂನ್ 27ರಂದು ವಹಿವಾಟು ಮುಗಿಸಿಕೊಂಡು ರಾತ್ರಿ 11.30ಕ್ಕೆ ಮನೆಗೆ ಮರಳುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳು, ಮಚ್ಚು–ಲಾಂಗುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರ ಗಾಯಗೊಂಡ ಅವರು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.