ಬೆಂಗಳೂರು: ಚಿನ್ನದ ಗಟ್ಟಿ ಸಾಗಿಸುತ್ತಿದ್ದ ಆರೋಪದ ಮೇಲೆ ವಿಮಾನ ನಿಲ್ದಾಣದ ಸಿಬ್ಬಂದಿ ಸೇರಿದಂತೆ ಇಬ್ಬರನ್ನು ಬಂಧಿಸಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಕಸ್ಟಮ್ಸ್ ಅಧಿಕಾರಿಗಳು, ₹1.04 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ಮೂಲದ ವಿಮಾನ ನಿಲ್ದಾಣ ಸಿಬ್ಬಂದಿ ಅಜೀಶ್ ಮತ್ತು ಲತೀಫ್ ಬಂಧಿತರು. ಲತೀಫ್, ಬುಧವಾರ ರಾತ್ರಿ ಎಮಿರೇಟ್ಸ್ ಏರ್ವೇಸ್ (ಇಕೆ 568) ವಿಮಾನದ ಮೂಲಕ ದುಬೈನಿಂದ ಬಂದಿಳಿದಿದ್ದ. ನಂತರ ಏರೊ ಬ್ರಿಡ್ಜ್ ಮೂಲಕ ಇಳಿಯುತ್ತಿದ್ದಾಗ 4ಚಿನ್ನದ ಗಟ್ಟಿ ಇದ್ದ ಚೀಲವನ್ನು ಅಜೀಶ್ಗೆ ನೀಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಅಜೀಶ್ ಮೇಲೆ ಅನುಮಾನ ಬಂದಿದ್ದರಿಂದ ಆತನನ್ನು ಲೋಹ ಶೋಧಕದ ಮೂಲಕ ತಪಾಸಣೆ ನಡೆಸಿದಾಗ ಆತನ ಬಳಿ ಚಿನ್ನದ ಗಟ್ಟಿ ಇರುವುದು ಪತ್ತೆಯಾಯಿತು. ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2015ರಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನದ ಗಟ್ಟಿ ಸಾಗಣೆ ಮಾಡುತ್ತಿದ್ದ ಅರೋಪದ ಮೇಲೆ 106 ಮಂದಿಯನ್ನು ಬಂಧಿಸಲಾಗಿದ್ದು, ₹ 25.16 ಕೋಟಿ ಮೌಲ್ಯದ 95 ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.