ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಚ್ಚಿದಾನಂದನ್‌ಗೆ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’

Last Updated 29 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ತೀರ್ಥಹಳ್ಳಿಯ ಕುಪ್ಪಳಿಯಲ್ಲಿ ಭಾನುವಾರ ರಾಷ್ಟ್ರಕವಿ ಕುವೆಂಪು ಅವರ 109ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಲೆಯಾಳಂನ ಸಾಹಿತಿ ಕೆ.ಸಚ್ಚಿದಾನಂದನ್‌ ಅವರಿಗೆ ಪ್ರಪ್ರಥಮ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಮಾಡಲಾಯಿತು.

ವಿಧಾನ ಪರಿಷತ್ತು ಸಭಾಪತಿ ಡಿ.ಎಚ್‌.­ಶಂಕರಮೂರ್ತಿ, ಪ್ರಾಥಮಿಕ ಮತ್ತು ಪ್ರೌಢ­ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಕುಪ್ಪ­ಳಿಯ ಶತಮಾನೋತ್ಸವ ಭವನದಲ್ಲಿ ಹಮ್ಮಿ­­ಕೊಂಡಿದ್ದ ಸಮಾರಂಭದಲ್ಲಿ ಕೆ.ಸಚ್ಚಿದಾನಂದನ್‌ ಅವರಿಗೆ ₨5 ಲಕ್ಷ ನಗದು, ಸ್ಮರಣಿಕೆ ನೀಡಿ, ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ.ಸಚ್ಚಿದಾ­ನಂದನ್‌, ಜಾಗತೀಕರಣದಿಂದ ಇಂಗ್ಲಿಷ್ ಯಜ­ಮಾನ್ಯ ಭಾಷೆಯಾಗಿ ನಮ್ಮ ಸಂಸ್ಕೃತಿ­ಯನ್ನು ವಿಸ್ಮೃ­ತಿಗೆ ತಳ್ಳುತ್ತಿರುವುದರಿಂದ ಪ್ರಸ್ತುತ ಮಾತೃಭಾಷೆಯಲ್ಲೇ ಸಾಹಿತ್ಯ ರಚಿಸಬೇ­ಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.

ಮಾತೃಭಾಷೆ ಉಳಿಸಿಕೊಳ್ಳುವ ಹೋರಾಟ ಮನುಷ್ಯನ ಘನತೆ ಉಳಿಸಿಕೊಳ್ಳುವ ಹೋರಾ­ಟವೂ ಆಗಿದೆ ಎಂದು ಅಭಿಪ್ರಾಯಪಟ್ಟ ಅವರು, ತಾನು ಪ್ರಜ್ಞಾಪೂರಕವಾಗಿಯೇ ಮಾಲ­ಯಾಳಂ­ನಲ್ಲಿ ಕಾವ್ಯ ರಚಿಸುತ್ತಾ ಬಂದಿದ್ದು, ಅದನ್ನು ಬಿಟ್ಟು ಬೇರೆ ಭಾಷೆ­ಯಲ್ಲಿ ಉತ್ತಮ­ವಾಗಿ ಬರೆಯ­ಬಲ್ಲೆ ಎಂದು ಎಂದಿಗೂ ಅನಿಸಿಲ್ಲ ಎಂದರು.

ತಾನು ಮಾತೃಭಾಷೆಯಲ್ಲಿ ಕವಿತೆ ಬರೆದರೂ, ಅವು ಬೇರೆಲ್ಲಾ ಭಾಷೆಗಳಿಗೆ ಅನುವಾ­ದ­ಗೊ­ಳ್ಳುತ್ತಿದ್ದು, ಅಲ್ಲಿನ ಜನ ಸ್ಪಂದಿಸುತ್ತಿ­ರುವುದನ್ನು ನೋಡಿದರೆ ಕಾವ್ಯಶಕ್ತಿ ಮೇಲಿನ ನನ್ನ ನಂಬಿಕೆಗಳು ಇನ್ನಷ್ಟು ಬಲಗೊಂಡಿವೆ ಎಂದು ವಿಶ್ಲೇಷಿಸಿದರು.

ಎರಡು ತಲೆಮಾರನ್ನು ಪ್ರಭಾವಿಸಿದ ಕುವೆಂಪು ಅವರ ವಿಚಾರವಾದಿ ಮೌಲ್ಯಗಳು ಇಡೀ ವಿಶ್ವಕ್ಕೆ ಮಾದರಿ ಎಂದು ಅಭಿಪ್ರಾಯಪಟ್ಟ ಅವರು, ನನ್ನ ಕವಿತೆಯ ಆಶಯ, ಈ ಕಾಡು, ನೆಲ, ಜಲ ಎಲ್ಲ­ರಿಗೂ ಸೇರಿದ್ದು, ಇದರ ಮೇಲೆ ಎಲ್ಲರಿಗೂ ಹಕ್ಕಿದೆ ಎಂಬುದು. ನ್ಯಾಯ, ಸಮಾನತೆ, ದನಿ ಇಲ್ಲ­ದವರಿಗೆ ದನಿಯಾಗುವುದು ಕೂಡ ಕವಿಯ ನಿಜವಾದ ಕಾಳಜಿಯಾಗ­ಬೇಕಾಗಿದೆ ಎಂದರು.

ಸುಮಾರು 60 ಜನ ವಿದ್ವಾಂಸರು ವಾಚನ ಮತ್ತು ವ್ಯಾಖ್ಯಾನ ಮಾಡಿದ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’  ಮಹಾಕಾವ್ಯದ 75 ಗಂಟೆಗಳ ಅವ­ಧಿಯ 4 ಡಿವಿಡಿ ಬಿಡುಗಡೆ ಮಾಡಲಾಯಿತು.  ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಕುವೆಂಪು ಪ್ರಶಸ್ತಿ ದಾನಿ ಸರೋಜಾ ಎಂ.ಚಂದ್ರಶೇಖರ್, ರಾಜ್ಯ ಸರ್ಕಾರದ ಅಡ್ವೋಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಉಪಸ್ಥಿತರಿ­ದ್ದರು. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಂ.ಪ.ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಕಡಿದಾಳು ಪ್ರಕಾಶ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT