ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈವಾರದಲ್ಲಿ ನಾದಲೋಕವೇ ಸೃಷ್ಟಿ

ಗುರುಪೂಜಾ ಮಹೋತ್ಸವ, ಸಂಗೀತೋತ್ಸವಕ್ಕೆ ಅರ್ಥಪೂರ್ಣ ಚಾಲನೆ
Last Updated 30 ಜುಲೈ 2015, 9:58 IST
ಅಕ್ಷರ ಗಾತ್ರ

ಚಿಂತಾಮಣಿ: ರಾಜ್ಯದ ಪ್ರಸಿದ್ಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರ ಕೈವಾರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಮೂರು ದಿನ ನಡೆಯುವ ಗುರುಪೂಜಾ ಮಹೋತ್ಸವ ಹಾಗೂ ಸಂಗೀತೋತ್ಸವ ಬುಧವಾರ ಅದ್ದೂರಿಯಾಗಿ ಆರಂಭವಾಯಿತು.

ಯೋಗಿನಾರೇಯಣ ಯತೀಂದ್ರರ ಮಠದಲ್ಲಿ ಸೂರ್ಯೋದಯದಿಂದಲೇ ಸಂಗೀತದ ಲಹರಿ ಮೊಳಗುತ್ತಿತ್ತು. ಬೆಳಿಗ್ಗೆ 6 ಗಂಟೆಯಿಂದ ವಿವಿಧ ವಿದ್ವಾಂಸರಿಂದ ನಾದಸ್ವರ ಸೇವೆ ಸಮರ್ಪಣೆಯಾಯಿತು. ಯತೀಂದ್ರರ ಉತ್ಸವ ಮೂರ್ತಿಯನ್ನು ಸರ್ವಾಲಂಕೃತ ಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಶಾಸ್ತ್ರೋಕ್ತ ಮೆರವಣಿಗೆಯಲ್ಲಿ ಸಂಗೀತ ಸಭಾಂಗಣಕ್ಕೆ ಕರೆತರಲಾಯಿತು. ವಿಶೇಷವಾಗಿ ನಿರ್ಮಿಸಿದ್ದ ಅಲಂಕೃತ ವೇದಿಕೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯಾಯಿತು.

ದೇವಾಲಯದ ಮಾದರಿಯಲ್ಲಿ ಭವ್ಯ ಒಳಾಂಗಣ ವಿನ್ಯಾಸವನ್ನು ಸಭಾ ಭವನದಲ್ಲಿ ಅಳವಡಿಸಲಾಗಿದೆ. ಯತೀಂದ್ರರ ಎದುರಾಗಿ ನಿರ್ಮಿಸಿರುವ ಅಮರನಾರೇಯಣಸ್ವಾಮಿ ವೇದಿಕೆಯಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಂ ಮತ್ತು ತಂಡದವರು ಯತೀಂದ್ರರ ಕೀರ್ತನೆಗಳನ್ನು ಹಾಡುವುದರ ಮೂಲಕ ವಿದ್ಯುಕ್ತವಾಗಿ ಗುರುಪೂಜಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಮಹೋತ್ಸವದ ಅಧಿಕೃತ ಚಾಲನೆ ನಂತರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಸ್ಥಳೀಯ ವಿದ್ವಾಂಸರು ಸಂಗೀತದ ರಸದೌತಣ ನೀಡಿದರು. ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಭೀಮಲಿಂಗೇಶ್ವರ  ವೇದಿಕೆಯಲ್ಲಿ ಎರಡು ತಂಡಗಳಿಗೆ ಅವಕಾಶವಿದ್ದು, ಒಂದು ತಂಡ ಹಾಡುತ್ತಿದ್ದರೆ ಮತ್ತೊಂದು ತಂಡ ಸಿದ್ಧತೆಯಲ್ಲಿ ನಿರತವಾಗಿರುತ್ತಿತ್ತು. ಒಂದೊಂದು ತಂಡಕ್ಕೆ 20 ನಿಮಿಷ ಕಾಲಾವಕಾಶ ಒದಗಿಸಲಾಗಿತ್ತು. ದಿನವಿಡೀ ನಿರಂತರಾಗಿ ನಡೆದ ಸಂಗೀತ ಕಚೇರಿ ನಾದಲೋಕವನ್ನೇ ಸೃಷ್ಟಿ ಮಾಡಿದ್ದವು.

ಮಧ್ಯಾಹ್ನ ಎನ್‌.ಆರ್‌.ಜ್ಞಾನಮೂರ್ತಿ, ಎಸ್‌.ಶಾರ್ವರೀ ಶ್ರೀಧರ್‌, ಯುವರಾಣಿ ಭಾಗವತಾರಿಣಿ, ಟಿ.ಎಲ್‌.ಆನಂದ್‌, ಸುಷ್ಮಿತಾ, ಜಿ.ಎಸ್.ಶ್ವೇತಾಶ್ರೀರಮಗುಪ್ತ, ಬಸವರಾಜಾಚಾರ್, ಲೀಲಾ ಲಕ್ಷ್ಮಿನಾರಾಯಣ್‌, ಶ್ಯಾಮಲಾ ಶ್ರೀನಿವಾಸ್‌, ಮಂಜುಳಾ ಜಗದೀಶ್‌, ಬೆಂಗಳೂರಿನ ಆಶಾಕಿರಣ್ ಕಲಾ ತಂಡ, ಡಾ.ಶ್ರೀನಿವಾಸ್ , ಹಂಸಧ್ವನಿ ಶ್ರೀನಿವಾಸ್‌, ಪಲ್ಲವಿ ಪ್ರಸನ್ನತಂಡ, ಮುರಳಿ–ಬೆಂಗಳೂರು, ಕಿಕ್ಕೇರಿ ಕೃಷ್ಣಮೂರ್ತಿ, ತಿರುಪತಿಯ ಬಿ.ರಘುನಾಥ್‌  ಮತ್ತಿತರರ ಗಾಯನ ಸಂಗೀತಪ್ರಿಯರ ಮನರಂಜಿಸಿತು.

ಕೈವಾರದ ಬೀದಿ–ಬೀದಿಗಳಲ್ಲೂ ಸಂಗೀತದ ನೀನಾದ ಕೇಳಿಬರುತ್ತಿತ್ತು. ಸಂಗೀತದ ಹಬ್ಬಕ್ಕೆ ಜನರು ಪ್ರವಾಹದಂತೆ ಹರಿದು ಬರುತ್ತಿದ್ದರು. ಯೋಗಿನಾರೇಯಣ ಮಠದ ಆವರಣದಲ್ಲಿ ಸಂಗೀತದ ಜತೆಗ ಫಂಡರೀಭಜನೆ, ಕೋಲಾಟ, ಕೀರ್ತನೆಗಳು ಮತ್ತು ತತ್ವಪದಗಳ ಗಾಯನದ ಕಂಪುನ್ನು ಭಕ್ತರು ಹಾಗೂ  ಸಾರ್ವಜನಿಕರು ಸವಿದರು.  ಟ್ರಸ್ಟ್‌ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಆರ್‌.ಪಿ.ಎಂ.ಶ್ರೀನಿವಾಸಲು, ಅನಂತಕೇಶವಾಚಾರ್‌, ತಿಪ್ಪೇನಹಳ್ಳಿ ರಾಘವೇಂದ್ರ, ಚಿಂತಾಮಣಿ ಲಕ್ಷ್ಮಣ್‌, ಡಾ.ಸತ್ಯನಾರಾಯಣ್‌, ಬಾಲಕೃಷ್ಣ ಭಾಗವತರ್, ಎಸ್.ಜಿ.ಹನುಮಂತರಾಯಪ್ಪ, ಕೆ.ಎನ್‌.ಗೋವಿಂದಪ್ಪ, ಬೆಳ್ಳೂಟಿ ಸತ್ಯನಾರಾಯಣ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT