ಬೆಂಗಳೂರು: ಚಲಿಸುತ್ತಿದ್ದ ಕ್ರೇನ್ ವಾಹನಕ್ಕೆ ಸಿಲುಕಿ ಗುತ್ತಿಗೆ ಕಾರ್ಮಿಕ ಬಿಹಾರ ಮೂಲದ ರಂಜಿತ್ (26) ಎಂಬುವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲಹಂಕದ ರೈಲುಗಾಲಿ ಕಾರ್ಖಾನೆಯಲ್ಲಿ ಶನಿವಾರ ನಡೆದಿದೆ.
ರಂಜಿತ್ ಅವರು ಕಾರ್ಖಾನೆಯ ಪಿ.ಸಿ ಬೇ ವಿಭಾಗದಲ್ಲಿ ಕಳೆದ 6 ತಿಂಗಳಿಂದ ಗ್ಯಾಸ್ ಕಟಿಂಗ್ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 1 ಗಂಟೆಯಲ್ಲಿ ರಂಜಿತ್ ಸೇರಿ ಮೂವರು ಕಾರ್ಮಿಕರು ಉದ್ದವಾದ ರೈಲ್ವೆ ಹಳಿಗಳನ್ನು ಕ್ರೇನ್ ವಾಹನದ ಮೂಲಕ ಸಾಗಿಸುತ್ತಿದ್ದರು. ಈ ವೇಳೆ ರಂಜಿತ್ ಆಯತಪ್ಪಿ ಬಿದ್ದು ಕ್ರೇನ್ಗೆ ಸಿಲುಕಿದ್ದಾರೆ. ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದು, ಬಿಹಾರದಲ್ಲಿ ನೆಲೆಸಿದ್ದಾರೆ.