ನವದೆಹಲಿ (ಪಿಟಿಐ): ಉದ್ಯೋಗಿಗಳ ಭವಿಷ್ಯ ನಿಧಿಗೆ ಮಾಲೀಕರ ದೇಣಿಗೆ ಸಂಗ್ರಹಿಸಲು ಖಾಸಗಿ ಬ್ಯಾಂಕ್ಗಳಿಗೆ ಅವಕಾಶ ಮಾಡಿಕೊಡುವ ಪ್ರಸ್ತಾವ
ವನ್ನು ‘ಇಪಿಎಫ್ಒ’ದ ಸಲಹಾ ಸಮಿತಿ ತಿರಸ್ಕರಿಸಿದೆ.
ಐಸಿಐಸಿಐ, ಎಕ್ಸಿಸ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ಗಳು ಮಾಲೀಕರಿಂದ ‘ಪಿಎಫ್’ ದೇಣಿಗೆ ಸಂಗ್ರಹಿಸಲು ಅವಕಾಶ ಮಾಡಿಕೊಡುವ ಪ್ರಸ್ತಾವವನ್ನು ಹಣಕಾಸು, ಲೆಕ್ಕಪತ್ರ ಮತ್ತು ಹೂಡಿಕೆ ಸಮಿತಿಯು ತಿರಸ್ಕರಿಸಿದೆ ಎಂದು ‘ಇಪಿಎಫ್ಒ’ ಟ್ರಸ್ಟಿಯಾಗಿರುವ ಭಾರತೀಯ ಮಜ್ದೂರ್ ಸಂಘದ ಮಹಾರಾಷ್ಟ್ರದ ಪ್ರಧಾನ ಕಾರ್ಯದರ್ಶಿ ಪಿ. ಜೆ. ಬನಸೂರೆ ಅವರು ಬುಧವಾರ ತಿಳಿಸಿದ್ದಾರೆ.
ಈ ಸಮಿತಿಯ ಶಿಫಾರಸುಗಳನ್ನು , ಜುಲೈ 7 ರಂದು ನಡೆಯಲಿರುವ ಇಪಿಎಫ್ಒ ಧರ್ಮದರ್ಶಿಗಳ ಕೇಂದ್ರೀಯ ಮಂಡಳಿಯ (ಸಿಬಿಟಿ) ಸಭೆಯಲ್ಲಿ ಮಂಡಿಸಲಾಗುತ್ತಿದೆ. ಸಾಮಾನ್ಯವಾಗಿ ಸಮಿತಿಯ ಶಿಫಾರಸನ್ನು ‘ಸಿಬಿಟಿ’ ಅಂಗೀಕರಿಸುತ್ತದೆ. ಸದ್ಯಕ್ಕೆ, ಭಾರತೀಯ ಸ್ಟೇಟ್ ಬ್ಯಾಂಕ್ ‘ಇಪಿಎಫ್ಒ’ ಪರವಾಗಿ ಮಾಲೀಕರಿಂದ ದೇಣಿಗೆ ಸಂಗ್ರಹಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಇತರ ಬ್ಯಾಂಕ್ಗಳಿಗೂ ಈ ಅವಕಾಶ ವಿಸ್ತರಿಸುವ ಪ್ರಯತ್ನ ಪ್ರಗತಿಯಲ್ಲಿ ಇದೆ.