ಗಣೇಶನಿಗೂ ಸಡಗರಕ್ಕೂ ಅವಿನಾಭಾವ ಸಂಬಂಧ. ಗಣೇಶ ಮೂರ್ತಿಯ ಕೂರಿಸುವುದು, ಕೂರಿಸಲಿಕ್ಕಾಗಿ ಚಂದಾ ಎತ್ತುವುದು, ಗಣಪನ ವಿಸರ್ಜನೆಯ ಮೆರವಣಿಗೆ, ಪೆಂಡಾಲಿನಲ್ಲಿನ ಆರ್ಕೆಸ್ಟ್ರಾ, ನೈವೇದ್ಯದ ಮೋದಕ, ಗಣೇಶನ ಹೆಸರಲ್ಲಿ ಒಗ್ಗಟ್ಟಿನ ಪ್ರದರ್ಶನ– ಹೀಗೆ, ‘ಗಣೇಶನ ಹಬ್ಬ’ದೊಂದಿಗೆ ತಳಕು ಹಾಕಿಕೊಂಡ ಎಲ್ಲ ಚಟುವಟಿಕೆಗಳಲ್ಲೂ ಸಡಗರವೇ ತುಂಬಿದೆ. ಆದರೆ, ಸಡಗರದ ಪರದೆಯನ್ನು ಕೊಂಚ ಸರಿಸಿನೋಡಿದರೆ, ಅಲ್ಲಿ ಮನುಷ್ಯಲೋಕದ ಹಲವು ಮುಖಗಳು ಕಾಣಿಸುತ್ತವೆ. ಗಣೇಶನ ಮೂರ್ತಿ ರೂಪುಗೊಂಡ ಮಣ್ಣಿನೊಂದಿಗೆ ಶ್ರಮಿಕನ ಬೆವರು ಬೆರೆತಿದೆ. ಮೂರ್ತಿಯ ಅಂಕುಡೊಂಕಿನಲ್ಲಿ ಕಲಾವಿದನ ಕೈಚಳಕದ ಚಹರೆಗಳಿವೆ. ಮೂರ್ತಿಯ ರಂಗಿನಲ್ಲಿ ಕುಶಲಕರ್ಮಿಯ ಬಣ್ಣದ ಕಲ್ಪನೆಗಳೊಂದಿಗೆ ಕೆಮ್ಮು, ತುರಿಕೆಗಳೂ ಇರಬಹುದು. ಅಂಗಡಿಯಿಂದ ಪೆಂಡಾಲಿಗೆ ಮೂರ್ತಿ ಬರುವಲ್ಲಿ ಹಲವು ಮಧ್ಯವರ್ತಿಗಳಿದ್ದಾರೆ. ಆದರೆ, ಹಬ್ಬದ ಸಂದರ್ಭದಲ್ಲಿ ಇದೆಲ್ಲ ಭಾವಲೋಕ ಹಿನ್ನೆಲೆಗೆ ಸರಿದು, ಸಂಭ್ರಮವಷ್ಟೇ ಮುನ್ನೆಲೆಯಲ್ಲಿ ಕಾಣಿಸುತ್ತದೆ. ಭಕ್ತಿ ಮತ್ತು ಸಂಭ್ರಮದ ಹೊತ್ತು ನಮ್ಮ ವಿವೇಕವೂ ಎಚ್ಚರವಾಗಿದ್ದಲ್ಲಿ ಹಬ್ಬದ ಆಚರಣೆಯ ಸಾಧ್ಯತೆಗಳು ಹೆಚ್ಚಬಹುದು.