ನವದೆಹಲಿ (ಪಿಟಿಐ): ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ನಲ್ಲಿ ನೆರವು ಕೋರಿ ಬಿತ್ತರಿಸಲಾದ ಸಂದೇಶದ ಮೂಲಕ ಶ್ರೀನಗರದ ಜಲಾವೃತ ಬಹುಮಹಡಿ ಕಟ್ಟಡದಲ್ಲಿ ಸಿಲುಕಿದ್ದ 9 ತಿಂಗಳ ತುಂಬು ಗರ್ಭಿಣಿ ಹಾಗೂ 20 ಜನರ ಜೀವ ಉಳಿಸಿದ ಕುತೂಹಲಕಾರಿ ಘಟನೆ ನಡೆದಿದೆ.
12ರಿಂದ 13 ಅಡಿ ಪ್ರವಾಹ ನೀರಿನಿಂದ ಸುತ್ತುವರಿದ ಶ್ರೀನಗರದ ಜವಾಹರ ನಗರದ ಫಾರೂಕ್ ಕಾಲೊನಿಯ ಬಹುಮಹಡಿ ಕಟ್ಟಡದ ಮೂರನೇ ಅಂತಸ್ತಿನಲ್ಲಿ ತುಂಬು ಗರ್ಭಿಣಿಯೊಬ್ಬಳು ಸಿಲುಕಿದ ವಿಷಯವನ್ನು ಆಕೆಯ ಸಹೋದರಿ ಫೇಸ್ಬುಕ್ ಮೂಲಕ ತಿಳಿಸಿದಳು.
ಸಂದೇಶ ನೋಡಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆಯ ಯೋಧರು ಗರ್ಭಿಣಿ, ಎರಡು ಚಿಕ್ಕಮಕ್ಕಳು ಮತ್ತು 20 ಜನರನ್ನು ರಕ್ಷಿಸಿದ್ದಾರೆ. ‘ಫೇಸ್ಬುಕ್, ವಾಟ್ಸ್ಆ್ಯಪ್ ಮೂಲಕ ನಮಗೆ ವಿಷಯ ತಿಳಿಸಿದ ಮಹಿಳೆ ಮಂಗಳವಾರ ಬೆಳಿಗ್ಗೆ ಕೃತಜ್ಞತೆ ಸಂದೇಶ ಕಳಿಸಿದ್ದಾಳೆ’ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.