ತುಮಕೂರು: ಡಾ.ಶರ್ಮಾ ಕುಲಪತಿ ಅವಧಿಯಲ್ಲಿ ತಮಗೆ ಬೇಕಾದವರಿಗೆ ಗೌರವ ಡಾಕ್ಟರೇಟ್, ಡಿ.ಲಿಟ್, ಡಿ.ಎಸ್ಸಿ ಪದವಿ ನೀಡಿದ್ದಾರೆ.
ರಾಜ್ಯದ ಯಾವ ವಿಶ್ವವಿದ್ಯಾಲಯವೂ ಕೊಡದಷ್ಟು ಸಂಖ್ಯೆಯಲ್ಲಿ ಗೌರವ ಡಾಕ್ಟರೇಟ್ ನೀಡಲಾಗಿದೆ. ಇದನ್ನೂ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರುವ ಶರ್ಮಾ ಅವರು ತಮ್ಮ ಸಮುದಾಯದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೀಡಿದ್ದಾರೆ.
ಶರ್ಮಾ ಅವಧಿಯಲ್ಲಿ (ಮೇ 3, 2009ರಿಂದ ಮೇ 3, 2013) ಒಟ್ಟು ನಾಲ್ಕು ಘಟಿಕೋತ್ಸವ ನಡೆದಿವೆ. ಮೊದಲನೆಯದರಲ್ಲಿ ಹೊಟೇಲ್ ಉದ್ಯಮಿ ಸದಾನಂದ ಮಯ್ಯ, ಟಿ.ಎ.ದಾಸಪ್ಪ, ಯಾದಲಂ ಎನ್.ಗಂಗಾಧರ ಶೆಟ್ಟಿ, ಶತಾವಧಾನಿ ಆರ್.ಗಣೇಶ್, ಸಂತೋಷ್ ಹೆಗ್ಡೆ, ಇನ್ಫೋಸಿಸ್ನ ಸುಧಾಮೂರ್ತಿ, ಕೆ.ರಾಧಾಕೃಷ್ಣನ್ ಅವರಿಗೆ ಡಿ.ಲಿಟ್, ಡಿ.ಎಸ್ಸಿ ಪದವಿ ನೀಡಲಾಗಿದೆ.
ಎರಡನೇ ಘಟಿಕೋತ್ಸವದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಲಕ್ಷ್ಮಣ್ ದಾಸ್, ದಲ್ವೀರ್ ಭಂಡಾರಿ, ವಿ.ಕೆ.ಸಾರಸ್ವತ್, ಸೀತಾರಾಂ ಜಿಂದಾಲ್, ನೀಲೋಫರ್ ಆದಿಲ್ ಖಾಜ್ಮಿ ಅವರಿಗೆ ಡಿ.ಲಿಟ್, ಡಿ.ಎಸ್ಸಿ ಪದವಿ ಕೊಡಲಾಗಿದೆ.
ಮೂರನೇ ಘಟಿಕೋತ್ಸವದಲ್ಲಿ ಇದು ಎರಡು ಪಟ್ಟು ಹೆಚ್ಚಾಗಿದೆ. ಗಣ್ಯರಾದ ರಿಚರ್ಡ್ ಆರ್.ಅರ್ನ್ಸ್ಟ್, ಸಿ.ಎನ್.ಆರ್.ರಾವ್, ಆಂಥೋಣಿ ಕೆ.ಚೀತಮ್, ಆರ್.ಎಂ.ಬ್ಯಾಥ್ಯೂ, ವಿದ್ವಾನ್ ಎಂ.ಚಂದ್ರಶೇಖರನ್, ಮುಮ್ತಾಜ್ ಅಹಮದ್ ಖಾನ್, ಜಯಂತ್ ಕಾಯ್ಕಿಣಿ, ಲಾಲ್ಗುಡಿ ಜಯರಾಮನ್, ಪಾವಗಡ ಪ್ರಕಾಶ್ ರಾವ್, ಆಚಾರ್ಯ ಬುದ್ಧರಕ್ಕಿತ ಭಂತೇಜಿ, ವೀರೇಶಾನಂದ ಸರಸ್ವತಿ, ಬಾಬು ಕೃಷ್ಣಮೂರ್ತಿ– ಹೀಗೆ ಒಟ್ಟು 12 ಜನರಿಗೆ ಡಿ.ಲಿಟ್, ಡಿ.ಎಸ್ಸಿ ಪದವಿ ನೀಡಲಾಗಿದೆ. ಇದೇ ಘಟಿಕೋತ್ಸವದಲ್ಲಿ ಪ್ರಬಂಧ ಸಲ್ಲಿಸಿ ಡಿ.ಲಿಟ್, ಡಿ.ಎಸ್ಸಿ ಪದವಿ ಸ್ವೀಕರಿಸಬಹುದೆಂಬ ವಿಶ್ವವಿದ್ಯಾಲಯದ ತೀರ್ಮಾನದ ಮೇರೆಗೆ ಎಸ್.ಕೆ.ಮೂರ್ತಿ, ಎಂ.ಪಿ.ಶ್ಯಾಮ್, ಶ್ರೀಪಾದ ತಮ್ಮಯ್ಯ ಭಟ್ಟ ಅವರಿಗೆ ಪದವಿ ನೀಡಲಾಗಿದೆ.
ನಾಲ್ಕನೇ ಘಟಿಕೋತ್ಸವದಲ್ಲಿ ಒಟ್ಟು 25 ಜನರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಸಾಮಾನ್ಯವಾಗಿ ಯಾವ ವಿ.ವಿ.ಯೂ ತನ್ನ ಕ್ಯಾಂಪಸ್ನಿಂದ ಹೊರಗಡೆ ಘಟಿಕೋತ್ಸವ ನಡೆಸುವುದಿಲ್ಲ. ಆದರೆ 4ನೇ ಘಟಿಕೋತ್ಸವವನ್ನು ರಾಜಭವನದ ಗ್ಲಾಸ್ ಹೌಸ್ನಲ್ಲಿ ನಡೆಸುವ ಮೂಲಕ ಹೊಸ ಸಂಪ್ರದಾಯ ಹುಟ್ಟುಹಾಕಲಾಯಿತು. 25 ಮಂದಿಗೆ ಗೌರವ ಡಾಕ್ಟರೇಟ್ ನೀಡುವುದಕ್ಕೆ ಶೈಕ್ಷಣಿಕ ವಲಯದಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಘಟಿಕೋತ್ಸವ ಸಮಾರಂಭವನ್ನೇ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು.
ರುಡಾಲ್ಫ್ ಮಾರ್ಕಸ್, ಎರಿಕ್ ಮಸ್ಕಿನ್, ಗೋಪಾಲಕೃಷ್ಣ ಗಾಂಧಿ, ಷಡಕ್ಷರ ಸ್ವಾಮಿ, ಎನ್.ಆರ್.ಶೆಟ್ಟಿ, ಜಸ್ಟೀಸ್ ಜಾವೆದ್ ರಹೀಮ್, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಬಿ.ಎನ್.ವಿ.ಸುಬ್ರಹ್ಮಣ್ಯ, ರಾಧಾ ವಿಶ್ವನಾಥನ್, ಅಂಬಿಕಾ ದೇವಿ, ಆರ್.ವೇದವಲ್ಲಿ, ದಿಲೀಪ್ ಮಾವಿನಕುರ್ವೆ, ಜಪಾನಂದಜೀ, ಭೀಮೇಶ್ವರ ಜೋಷಿ, ರಾಗಿಣಿ ನಾರಾಯಣ್, ಆರ್.ನಾಗರತ್ನ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.
ಜಯಾರಾಜಶೇಖರ್, ವೆಂಕಟಸ್ವಾಮಿ, ಸುಂದರರಾಜನ್, ಅಪ್ಪಣ್ಣಯ್ಯ, ಜಗನ್ನಾಥನ್, ಸುಧಾಮೂರ್ತಿ (ಮತ್ತೊಮ್ಮೆ), ಟಿ.ಟಿ.ಶ್ರಿನಿವಾಸನ್, ಕಲ್ಲೂರಿ ರಾಮಕೃಷ್ಣ ಪರಮಹಂಸ, ಶಿವತನು ಪಿಳ್ಳೈ, ಮಲ್ಲೇಪುರಂ ಜಿ.ವೆಂಕಟೇಶ್ ಅವರ ಸಂಶೋಧನಾ ಪ್ರಬಂಧಗಳಿಗೆ ಡಿ.ಲಿಟ್, ಡಿ.ಎಸ್ಸಿ ಪದವಿ ನೀಡಲಾಗಿದೆ. ಆದರೆ ಗೋಪಾಲಕೃಷ್ಣ ಗಾಂಧಿ ಇನ್ನೂ ಸ್ವೀಕರಿಸಿಲ್ಲ.
ಅಧಿಕಾರದಿಂದ ಕೆಳಗೆ ಇಳಿಯುವ ಮುನ್ನ ಶರ್ಮಾ ಅವರು 23 ಮಂದಿಗೆ ಡಿ.ಲಿಟ್, ಡಿ.ಎಸ್ಸಿ ಪದವಿಗೆ ತಾತ್ಪೂರ್ತಿಕ ಪದವಿ ಪ್ರದಾನ ಮಾಡಿದ್ದಾರೆ. ಅದಕ್ಕೆ ಸಿಂಡಿಕೇಟ್ ಮತ್ತು ರಾಜ್ಯಪಾಲರ ಒಪ್ಪಿಗೆಯನ್ನು ಪಡೆದುಕೊಂಡಿದ್ದಾರೆ. ಜನವರಿಯಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ನೀಡಲಾಗುತ್ತದೆ.
ತಾತ್ಪೂರ್ತಿಕ ಡಿ.ಲಿಟ್, ಡಿ.ಎಸ್ಸಿ ಪದವಿ ಪತ್ರ ಪಡೆದವರ ಪಟ್ಟಿಯಲ್ಲಿ ಜಿ.ಎಸ್.ಮುಡಂಬಡಿತ್ತಾಯ, ರಾಮಚಂದ್ರ ಜಿ. ಭಟ್, ಮೈಸೂರು ನಾಗಮಣಿ ಶ್ರೀನಾಥ್, ಪಪ್ಪು ವೇಣುಗೋಪಾಲರಾವ್, ಜಿ.ಎನ್.ಶ್ರೀಕಂಠಯ್ಯ, ಸೂರ್ಯಪ್ರಕಾಶ್ರಾವ್ ಮೊದಲಾದವರಿದ್ದಾರೆ.
ಜನವರಿಯಲ್ಲಿ ನೀಡಲಿರುವ ಪಟ್ಟಿಯಲ್ಲಿ ವಿಶ್ವವಿದ್ಯಾಲಯದ ಕೆಲ ಸಹ ಪ್ರಾದ್ಯಾಪಕರು ಸೇರಿದ್ದಾರೆ. ಸಾಮಾನ್ಯವಾಗಿ ಪಿಎಚ್.ಡಿ ಪಡೆದ ಬಳಿಕ ಡಿ.ಎಸ್ಸಿ, ಡಿ.ಲಿಟ್ ಪದವಿ ಪಡೆಯುವುದು ವಾಡಿಕೆ. ಆದರೆ ಇಲ್ಲಿ ಪಿಎಚ್.ಡಿ ಪಡೆಯದವರಿಗೂ ಡಿ.ಲಿಟ್ ನೀಡಲಾಗಿದೆ. ವಿಜ್ಞಾನ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಎಚ್.ವೈ.ಈಶ್ವರ್, ಉಪ ಕುಲಸಚಿವ ಎನ್.ಪ್ರಸನ್ನ ಕುಮಾರ್ ಅವರಿಗೂ ನೀಡಲಾಗಿದೆ. ಉನ್ನತ ಅಧಿಕಾರ ಸ್ಥಾನದಲ್ಲಿರುವ ವಿ.ವಿ. ಉಪ ಕುಲಸಚಿವರು ತಮ್ಮದೇ ವಿ.ವಿ.ಯಲ್ಲಿ ಮಹತ್ವದ ಪದವಿ ಪಡೆದಿದ್ದಾರೆ.
ವಿ.ವಿ. ಹಣಕಾಸು ಅಧಿಕಾರಿ ಬಿ.ಕೆ.ಸುರೇಶ್ ಸುತ್ತಲೂ ವಿವಾದ ಸುತ್ತಿಕೊಂಡಿದೆ. ೨೦೧೦ರಲ್ಲಿ ವಿ.ವಿ. ಎಂ.ಬಿ.ಎ. ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಬಂದ ಬಿ.ಕೆ.ಸುರೇಶ್ ಅವರನ್ನು ಪ್ರೊಬೆಷನರಿ ಅವಧಿ ಮುಗಿಯುವ ಮುನ್ನವೇ ಹಣಕಾಸು ಅಧಿಕಾರಿ ಹುದ್ದೆಗೆ ನಿಯೋಜಿಸಲಾಗಿದೆ.
ಶರ್ಮಾ ಕುಲಪತಿ ಹುದ್ದೆಯಿಂದ ನಿರ್ಗಮಿಸುವ ವೇಳೆಗೆ ಡಿ.ಲಿಟ್ ಕೊಡುವ ಪ್ರಯತ್ನ ನಡೆಸಿದ್ದರು. ಇದೇ ಸಮಯದಲ್ಲಿ ಸುರೇಶ್ ಸಂಶೋಧನೆಗೂ ವಿ.ವಿ.ಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಒಂದು ಕೈಯಲ್ಲಿ ಪಿಎಚ್.ಡಿ ಸಂಶೋಧನೆ, ಮತ್ತೊಂದು ಕೈಯಲ್ಲಿ ಡಿ.ಲಿಟ್ ಪದವಿಗೆ ಪ್ರಬಂಧ ಸಲ್ಲಿಕೆಗೆ ತಯಾರಿ. ಜತೆಗೆ ಮಹತ್ವದ ಹಣಕಾಸು ಹುದ್ದೆ ನಿರ್ವಹಣೆ. ಒಟ್ಟಿಗೆ ಮೂರು ಕೆಲಸ ನಿರ್ವಹಿಸಿದ್ದಾರೆ.
ಬಿ.ಕೆ.ಸುರೇಶ್ ಅವರಿಗೆ ಡಿ.ಲಿಟ್ ನೀಡುವ ಕಡತ ಸಿಂಡಿಕೇಟ್ ಸಭೆಗೆ ೨೦೧೩ರ ಏಪ್ರಿಲ್ 3ರಂದು ಮಂಡನೆಯಾಗಿದೆ. ಆದರೆ ನೂತನ ಕುಲಪತಿ ಡಾ.ರಾಜಾಸಾಬ್ ಈಗ ತಡೆ ನೀಡಿದ್ದಾರೆ.
ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಎರಡು ಸಾವಿರಕ್ಕೂ ಹೆಚ್ಚಿದ್ದ ವಿದ್ಯಾರ್ಥಿಗಳ ಸಂಖ್ಯೆ ಕಡಿತಗೊಳಿಸುವಂತೆ ಕೋರಿ ವಿ.ವಿ ವಿರುದ್ಧ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದ ಎಸ್.ಕೆ.ಮೂರ್ತಿ ಅವರಿಗೂ ಎರಡನೇ ಘಟಿಕೋತ್ಸವದಲ್ಲಿ ಡಿ.ಎಸ್ಸಿ ಪದವಿ ನೀಡಲಾಗಿದೆ.
ಎಸ್.ಕೆ.ಮೂರ್ತಿ ಸಹೋದರ ಕೇಶವ ಪ್ರಸನ್ನ ಎಂಟು ತಿಂಗಳಲ್ಲಿ ಪಿಎಚ್.ಡಿ ಪದವಿ ಪಡೆದವರ ಪಟ್ಟಿಯಲ್ಲಿ ಸೇರಿದ್ದಾರೆ. ಕುಲಪತಿ ಸ್ಥಾನದಿಂದ ನಿವೃತ್ತಿ ಹೊಂದಿದ ನಂತರ ಶರ್ಮಾ ಅವರು ಕೆಲಸ ಮಾಡುತ್ತಿರುವ ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೇಶವ ಪ್ರಸನ್ನ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ವಿದೇಶಗಳಿಂದ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳನ್ನು ಘಟಿಕೋತ್ಸವಗಳಿಗೆ ಶರ್ಮಾ ಕರೆಸಿದ್ದಾರೆ. ಅರ್ಥಶಾಸ್ತ್ರದಲ್ಲಿ ನೊಬೆಲ್ ಪಡೆದ ಪ್ರೊ.ಎರಿಕ್ ಎಸ್.ಮಸ್ಕಿನ್ ಅವರು 2012ರ ಡಿಸೆಂಬರ್ 9ರಂದು ವಿ.ವಿ.ಗೆ ಭೇಟಿ ಕೊಟ್ಟಿದ್ದರು.
ಪ್ರೊ.ಎರಿಕ್ ಅವರನ್ನು ಸಹ ಲೇಖಕರಾಗಿಸಿಕೊಂಡು ಶರ್ಮಾ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಎರಡು ಕೃತಿಗಳನ್ನು ರಚಿಸಿದ್ದಾರೆ. (ಕೃತಿ– ನ್ಯಾಚುರಲ್ ಡಿಸಾಸ್ಟರ್ ಆ್ಯಂಡ್ ಪಾವರ್ಟಿ: ಆ್ಯನ್ ಓವರ್ಸೀಸ್, ಅಭಿಜಿತ್ ಪ್ರಕಾಶನ, ನವದೆಹಲಿ. ಲೇಖಕರು: ಎಸ್.ಸಿ.ಶರ್ಮಾ, ಎರಿಕ್ ಮಸ್ಕಿನ್, ವಿಲಾಸ್ ಎಂ, ಕದ್ರೋಲ್ಕರ್) ಹಾಗೂ (ಕೃತಿ– ಮೆಕಾನಿಸಂ ಫಾರ್ ಸಸ್ಟೇನಬಲ್ ಡೆವಲಪ್ಮೆಂಟ್: ಇಸ್ಸ್ಯೂ ಆ್ಯಂಡ್ ಪ್ರಾಸ್ಪೆಕ್ಟೀವೀಸ್. ಲೇಖಕರು: ಎಸ್.ಶರ್ಮಾ, ಎರಿಕ್ ಮಸ್ಕಿನ್, ವಿಲಾಸ್ ಎಂ.ಕದ್ರೋಲ್ಕರ್, ರವೀಂದ್ರಕುಮಾರ್, ಎನ್.ಟಿ.ನೀಲಕಂಠ).
ಈ ಎರಡೂ ಕೃತಿಗಳಲ್ಲಿ ಉಳಿದ ಸಹಲೇಖಕರಾದ ವಿಲಾಸ್ ಕದ್ರೋಲ್ಕರ್, ರವೀಂದ್ರ ಕುಮಾರ್, ನೀಲಕಂಠ ಅವರು ತುಮಕೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರು.
ಮುಂದಿನ ಸಂಚಿಕೆಯಲ್ಲಿ: ಸಣ್ಣ ವಿ.ವಿ.ಗೆ 25 ಗೌರವ ಪ್ರಾಧ್ಯಾಪಕರ ಹೊರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.