ಬೆಂಗಳೂರು: ರಾಜಕೀಯ ಪ್ರತಿಷ್ಠೆಯ ವೇದಿಕೆಯಾಗಿ ಮೂರು ಬಾರಿ ಉದ್ಘಾಟನೆ ರದ್ದುಗೊಂಡು ಸುದ್ದಿಯಾಗಿದ್ದ ನಾಗರಬಾವಿ ವಾರ್ಡ್ 128ರ ವ್ಯಾಪ್ತಿಯ ಚಂದ್ರಗಿರಿ ಉದ್ಯಾನ ಕೊನೆಗೂ ಸಾರ್ವಜನಿಕರ ಬಳಕೆಗೆ ತೆರೆದುಕೊಂಡಿತು. ಸೋಮವಾರ ಸಾರ್ವಜನಿಕರು ವಾಯುವಿಹಾರ ನಡೆಸಿದರು.
ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಅವರ ಜತೆಗೆ ಸ್ಥಳೀಯ ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ ಸೇರಿದಂತೆ ಸುಮಾರು 14 ಮಂದಿ ಪಾಲಿಕೆ ಸದಸ್ಯರು ಬೆಳಿಗ್ಗೆ ಉದ್ಯಾನಕ್ಕೆ ಭೇಟಿ ನೀಡಿ, ಒಂದು ತಾಸಿಗೂ ಅಧಿಕ ಕಾಲ ವಾಯುವಿಹಾರ ನಡೆಸಿದರು. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಸೋಮಣ್ಣ ಮಾತನಾಡಿ, ‘ಉಮೇಶ್ ಶೆಟ್ಟಿ ಅವರು ಮುತುವರ್ಜಿ ವಹಿಸಿ ರೂಪಿಸಿರುವ ಈ ಉದ್ಯಾನ ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಅಧಿಕೃತವಾಗಿ ಉದ್ಘಾಟನೆಗೊಳ್ಳದಿರುವುದು ಬೇಸರ ತಂದಿದೆ’ ಎಂದರು.
‘ಮೇಯರ್ ಅವರು ಉದ್ಯಾನವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ ಎಂದು ಈಗಾಗಲೇ ಹೇಳಿದ್ದಾರೆ. ಇಂದಿನಿಂದ ಸಾರ್ವಜನಿಕರು ಉದ್ಯಾನದ ಪ್ರಯೋಜನ ಪಡೆಯಬೇಕು’ ಎಂದು ಉಮೇಶ್ ಶೆಟ್ಟಿ ಹೇಳಿದರು.
ಉದ್ಯಾನದ ನಡಿಗೆ ಪಥದಲ್ಲಿ ಸೋಮಣ್ಣ ಅವರು ಜತೆ ಪಾಲಿಕೆ ಸದಸ್ಯರಾದ ಉಮೇಶ್ ಶೆಟ್ಟಿ, ಗಂಗಭೈರಯ್ಯ, ವಿಶ್ವನಾಥಗೌಡ, ಶಾಂತಕುಮಾರಿ, ಮೋಹನ್ ಕುಮಾರ್, ವಾಗೀಶ್ ಪ್ರಸಾದ್ ಮತ್ತು ಮಾಜಿ ಉಪಮೇಯರ್ ಲಕ್ಷ್ಮಿನಾರಾಯಣ ಸೇರಿದಂತೆ ಹಲವರು ಹೆಜ್ಜೆ ಹಾಕಿದರು.