ನವದೆಹಲಿ/ಚಂಡೀಗಡ (ಪಿಟಿಐ): ಉತ್ತರ ಭಾರತದಲ್ಲಿ ಶೀತಗಾಳಿಯ ಅಬ್ಬರ ಮುಂದುವರಿದಿದ್ದು, ಹರಿಯಾಣದಲ್ಲಿ ಚಳಿಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ಹರಿಯಾಣ ಮತ್ತು ಪಂಜಾಬ್ನಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ತೀವ್ರ ಕುಸಿತವಾಗಿದೆ. ಹರಿಯಾಣದ ಅಂಬಾಲ ನಗರ ಮತ್ತು ಅಂಬಾಲ ದಂಡುಪ್ರದೇಶಗಳಲ್ಲಿ ತೀವ್ರ ಚಳಿಯಿಂದ ಮೃತಪಟ್ಟ ಎರಡು ಅಪರಿಚಿತ ದೇಹಗಳು ಪತ್ತೆಯಾಗಿವೆ.
ಜನಜೀವನ ಅಸ್ತವ್ಯಸ್ತ: ದೆಹಲಿ, ಪಂಜಾಬ್, ಹರಿಯಾಣ, ಪಂಜಾಬ್ನಲ್ಲಿ ದಟ್ಟ ಮಂಜಿನ ಮುಸುಕು ಕವಿದಿದ್ದು, ಶೀತಗಾಳಿ ಮುಂದುವರಿದಿರುವ ಕಾರಣ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಈಗ ಇಲ್ಲಿ 6.3 ಡಿ.ಸೆ. ತಾಪಮಾನ ದಾಖಲಾಗಿದ್ದು, ಇದು ಋತುಮಾನದ ಸರಾಸರಿ ಉಷ್ಣತೆಗಿಂತ 2 ಡಿ.ಸೆ.ನಷ್ಟು ಕಡಿಮೆಯಾಗಿದೆ. ಬೆಳಿಗ್ಗೆ 8.30ರ ವೇಳೆಯಲ್ಲಿ ಗೋಚರತೆಯ ಪ್ರಮಾಣ 700 ಮೀ. ಮತ್ತು ವಾತಾವರಣದಲ್ಲಿನ ತೇವಾಂಶದ ಪ್ರಮಾಣ ಶೇಕಡ 94 ಇತ್ತು’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಚಂಡೀಗಡದ ಕೆಲವು ಪ್ರದೇಶಗಳಲ್ಲಿ ಗೋಚರತೆಯ ಪ್ರಮಾಣ 100–200 ಮೀ.ಗೆ ಕುಸಿದಿದ್ದರಿಂದ ರಸ್ತೆ ಮತ್ತು ರೈಲು ಮಾರ್ಗಗಳಲ್ಲಿ ತೀವ್ರ ಅಡಚಣೆ ಉಂಟಾಯಿತು.
ಅಮೃತಸರದಲ್ಲಿ ಅತ್ಯಂತ ಕಡಿಮೆ 3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಪಂಜಾಬಿನ ಅತಿ ಶೀತ ಪ್ರದೇಶವೆನಿಸಿದೆ.
‘ದಟ್ಟ ಮಂಜಿನ ಮುಸುಕು ಮತ್ತು ಶೀತಗಾಳಿಯ ವಾತಾವರಣ ಇನ್ನೂ ನಾಲ್ಕು ದಿನಗಳವರೆಗೆ ಮುಂದುವರಿಯಲಿದೆ’ ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ರೈಲು, ವಾಹನ ಸಂಚಾರ ವ್ಯತ್ಯಯ
ರೈಲು ಮತ್ತು ಇತರೆ ವಾಹನಗಳ ಸಂಚಾರದಲ್ಲೂ ತೀವ್ರ ವ್ಯತ್ಯಯ ಕಂಡುಬಂದಿತು. ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ದಟ್ಟ ಮಂಜಿನ ಕಾರಣದಿಂದಾಗಿ ಎಂಟಕ್ಕೂ ಹೆಚ್ಚು ರೈಲುಗಳನ್ನು ರದ್ದುಪಡಿಸಲಾಯಿತು. ದೇಶದ ಇತರೆ ಭಾಗಗಳಿಗೆ ತೆರಳಬೇಕಿದ್ದ 81 ರೈಲುಗಳು ತಡವಾಗಿ ಸಂಚಾರ ಆರಂಭಿಸಿದವು. ಆದರೆ ವಿಮಾನಗಳ ದಿಕ್ಕು ಬದಲಾವಣೆ ಅಥವಾ ಹಾರಾಟವನ್ನು ರದ್ದುಪಡಿಸಿದ ಬಗ್ಗೆ ಯಾವುದೇ ವರದಿಯಾಗಿಲ್ಲ.