ನಾನು ಮೊದಲ ಬಾರಿಗೆ ಗಾಂಧಿಯ ಹೆಸರು ಕೇಳಿದ್ದು ಒಂದನೇ ತರಗತಿಯಲ್ಲಿರುವಾಗ, ನಮಗಿದ್ದ ಪಾಠವೊಂದರಲ್ಲಿ. ಈ ಪಾಠಕ್ಕೆ ಸಂಬಂಧಪಟ್ಟ ಚಿತ್ರದಲ್ಲಿ ಗಾಂಧಿ ಚರಕದಿಂದ ನೂಲುತ್ತಿರುವುದು ಈಗಲೂ ಕಣ್ಣಿಗೆ ಕಟ್ಟಿದಂತಿದೆ ಮತ್ತು ಗಾಂಧಿ ಜಯಂತಿ ಎಂದರೆ ನಮಗೆಲ್ಲಾ ಹರ್ಷದ ದಿನ. ಏಕೆಂದರೆ ಗಾಂಧಿ ಜಯಂತಿ ಮುಗಿದ ನಂತರ ನಮಗೆಲ್ಲಾ ದಸರೆ ರಜೆ ಸಿಗುತ್ತಿತ್ತು.
ಪದವಿ ತರಗತಿಗೆ ಸಹ್ಯಾದ್ರಿ ಕಾಲೇಜ್ಗೆ ಬಂದಾಗ ನನ್ನೊಳಗೆ ಅದುವರೆಗೂ ಇದ್ದ ಗಾಂಧಿಯ ಸ್ವರೂಪ ಬದಲಾಯಿತು. ಸಾಹಿತ್ಯದ ವಿದ್ಯಾರ್ಥಿಗಳಾದ ನಮಗೆ ಲಂಕೇಶರ ಕತೆಯಲ್ಲಿ, ತೇಜಸ್ವಿ ಬರಹದಲ್ಲಿ ಗಾಂಧಿ ಕಾಣಿಸುತ್ತಿದ್ದರು. ಗಾಂಧಿಯ ಬಗ್ಗೆ ನಾನು ಹೇಳಲೇಬೇಕಾದ ಒಂದು ಅಂಶವೆಂದರೆ, ದಕ್ಷಿಣ ವಲಯ ಮಟ್ಟದ ಅಂತರ್ವಿಶ್ವವಿದ್ಯಾನಿಲಯ ಸಾಂಸ್ಕೃತಿಕ ಸ್ಫರ್ಧೆ ಮೈಸೂರಿನಲ್ಲಿ ನಡೆದಿತ್ತು. ಅದರಲ್ಲಿ ಒಬ್ಬ ವಿದ್ಯಾರ್ಥಿ ಮಣ್ಣಿನ ಮಾದರಿ ವಿಭಾಗದಲ್ಲಿ ಮೂಡಿಸಿದ್ದ ಗಾಂಧಿಗೆ ಸಂಬಂಧಪಟ್ಟ ರಚನೆಯೊಂದನ್ನು ಮರೆಯಲು ಸಾಧ್ಯವಿಲ್ಲ.
ಏಕೆಂದರೆ ಆತ ಮಾಡಿದ್ದು ಗಾಂಧಿಯ ಬಿದ್ದು ಒಡೆದು ಹೋದ ಕನ್ನಡಕದ ಚೂರು ಮತ್ತು ಅದಕ್ಕೆ ಅಸಹಾಯಕರಾಗಿ ಪ್ರತಿಕ್ರ್ರಿಯಿಸುತ್ತಿರುವ ಗಾಂಧಿ. ಸ್ವತಂತ್ರನಂತರ ಭಾರತದಲ್ಲಿ ನಡೆದು ಹೋದ ಬೆಳವಣಿಗೆಗಳಿಗೆ ಗಾಂಧಿಯ ಪ್ರತಿಕ್ರಿಯೆ ಇದೇ ರೀತಿಯದು ಇರಬಹುದೇ ಎಂದು ಈಗಲೂ ಅನಿಸುತ್ತದೆ ಅಥವಾ ಗಾಂಧಿ ಕಂಡ ಕನಸುಗಳನ್ನು ನಾವು ಒಡೆದು ಹಾಕಿದ್ದೇವೆ ಎಂದೂ ಭಾವಿಸಬಹುದು. ಹಳ್ಳಿಗಳ ಪ್ರಗತಿಯಿಂದ ದೇಶದ ಪ್ರಗತಿ ಎಂಬ ಗ್ರಾಮರಾಜ್ಯದ ಕನಸನ್ನು ಕಂಡ ಗಾಂಧಿಯನ್ನು ನಾವು ನಗರೀಕರಣ ಪ್ರಕ್ರಿಯೆಯಿಂದ ಮೂದಲಿಸುತ್ತಿದ್ದೇವೇನೊ ಎಂಬ ಒಂದು ರೀತಿಯ ವಿಷಾದ ಮನೋಭಾವ ಕಾಡುತ್ತದೆ. ಕ್ರೌರ್ಯದ ಇನ್ನೊಂದು ಮುಖವೇ ಆಗಿರುವ ಜಗತ್ತಿನಲ್ಲಿ ಗಾಂಧಿಯ ಚಿಂತನೆಗಳಷ್ಟು ಪ್ರಸ್ತುತವಾಗುವ ಚಿಂತನೆಗಳು ಇರಲಾರದೇನೊ.
ಲೇಖಕಿ ನೇಮಿಚಂದ್ರ ಪೆರುದೇಶಕ್ಕೆ ಪ್ರವಾಸ ಹೋದಾಗ ಅಲ್ಲಿನ ಜನ ಭಾರತೀಯರನ್ನು ಗಾಂಧಿಯ ನಾಡಿನ ಜನರೆಂದು ಗೌರವದಿಂದ ಕಾಣುವುದನ್ನು ತಮ್ಮ ಪೆರುವಿನ ಪವಿತ್ರ ಕಣಿವೆಯಲಿ ಕೃತಿಯಲ್ಲಿ ಉಲ್ಲೇಖಿಸುತ್ತಾರೆ. ಜಗತ್ತಿಗೆ ಅಹಿಂಸಾ ಸಂದೇಶವನ್ನು ಸಾರಿಹೋದ ಗಾಂಧಿಯ ಹೆಸರನ್ನು ಮರೆತವರುಂಟೆ?. ದೇವನೂರು ಮಹಾದೇವ ಹೇಳುವಂತೆ ಭಾರತ ಒಂದು ಮನೆಯೆಂದು ತೆಗೆದುಕೊಂಡರೆ ಗಾಂಧಿ ಕಠಿಣ ವ್ಯಕ್ತಿತ್ವದ ತಂದೆಯಂತೆ. ಏನಾದರೂ ಗಾಂಧಿ ಆಪ್ ಹಮೇಶ ಅಮರ್ ರಹೇ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.