ವಿಜಯಪುರ: ‘ಮೈಶಾಳ್ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ. ಕುಡಿಯಲು ನೀರು ಕೊಡಿ. ಇಲ್ಲವಾದರೆ ಕರ್ನಾಟಕಕ್ಕೆ ಸೇರ್ಪಡೆ ಮಾಡುವುದಕ್ಕೆ ನಿರಾಕ್ಷೇಪಣಾ ಪತ್ರ ಕೊಡಿ’ ಎಂದು ಆಗ್ರಹಿಸಿ ಪಾದಯಾತ್ರೆ ಆರಂಭಿಸಿರುವ ಗಡಿ ನಾಡಿನ 46 ಗ್ರಾಮಗಳ ಜನರು ಗುರುವಾರ ರಾತ್ರಿ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕು ಕೇಂದ್ರ ತಲುಪಿದರು.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಪ್ರತಿಭಟನಾಕಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗುರುವಾರ ಸ್ವಯಂಪ್ರೇರಿತವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಬೆಂಬಲ ವ್ಯಕ್ತಪಡಿಸಿದರು.
‘ನ್ಯಾಯಯುತ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ಯಾವುದೇ ಕ್ಷಣದಲ್ಲಿ ನೀವು ಕರೆದರೂ ಮತ್ತೆ ಪ್ರತಿಭಟನೆಗೆ ಬರುತ್ತೇನೆ. ಕನ್ನಡ, ಮರಾಠಿ ಎಂದು ಭಾಷೆ ಹೆಸರಿನಲ್ಲಿ ವಿಷ ಬೀಜ ಬಿತ್ತುವ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ’ ಎಂದು ಸ್ವಾಮೀಜಿ ಹೇಳಿದರು.