ಚಂಡೀಗಡ (ಪಿಟಿಐ): ಹರಿಯಾಣದ ಅಂಬಾಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪ್ರಾದೇಶಿಕ ಪಕ್ಷದ ಸಂಸ್ಥಾಪಕ ಅಭ್ಯರ್ಥಿಯೊಬ್ಬರು 140 ಕೋಟಿ ರೂಪಾಯಿಗಳ ಆಸ್ತಿಯ ಒಡೆಯರಾಗಿದ್ದಾರೆ. ಇಷ್ಟೆಲ್ಲಾ ಆಸ್ತಿಯ ಒಡೆಯನಾದರೂ ಅವರ ಹೆಸರಿನಲ್ಲಿ ಒಂದೇ ಒಂದೂ ವಾಹನವೂ ಇಲ್ಲ.
ಜೂನ್ನಲ್ಲಿ ತಾವೇ ಹುಟ್ಟು ಹಾಕಿರುವ ಹರಿಯಾಣ ಜನಚೇತನ ಪಕ್ಷದಿಂದ ಸ್ಪರ್ಧಿಸಿರುವ ವಿನೋದ್ ಶರ್ಮ ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ.
ಕಲ್ಕಾ ವಿಧಾನಸಭಾ ಕ್ಷೇತ್ರದಿಂದ ಇದೇ ಪಕ್ಷದಿಂದ ಸ್ಪರ್ಧಿಸುತ್ತಿರುವ ಶರ್ಮ ಅವರ ಪತ್ನಿ ಶಕ್ತಿ ರಾಣಿ 15 ಕೋಟಿ ರೂಪಾಯಿಗಳ ಆಸ್ತಿಯ ಒಡತಿ.
ಶರ್ಮ ಮೂಲತಃ ಕಾಂಗ್ರೆಸ್ಸಿಗರು. 40 ವರ್ಷಗಳಿಂದ ಆ ಪಕ್ಷದಲ್ಲಿದ್ದ ಅವರು ಎರಡು ಬಾರಿ ರಾಜ್ಯಸಭೆಯ ಸದಸ್ಯರಾಗಿದ್ದರು.
ಕಳೆದ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಶರ್ಮ ಕಾಂಗ್ರೆಸ್ನಿಂದ ಉಚ್ಛಾಟನೆಗೊಂಡಿದ್ದರು. ಆನಂತರ ಅವರು ಸ್ವಂತ ಪಕ್ಷ ಸ್ಥಾಪಿಸಿದರು.