ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರ್ಹ ಸದಸ್ಯರನ್ನು ಚುನಾವಣೆ ಅಥವಾ ಅವಿರೋಧವಾಗಿ ಆಯ್ಕೆ ಮಾಡುವುದು ಪ್ರಜಾಪ್ರಭುತ್ವದ ನಿಯಮ. ಆದರೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಒಂದು ಗ್ರಾಮದ ಜನ ಗ್ರಾಮ ಪಂಚಾಯಿತಿ ಸದಸ್ಯತ್ವವನ್ನು ಅವಿರೋಧ ಆಯ್ಕೆಯ ಹೆಸರಿನಲ್ಲಿ ₹ 17 ಲಕ್ಷಕ್ಕೆ ಹರಾಜು ಹಾಕಿರುವುದು ವರದಿಯಾಗಿದೆ (ಪ್ರ.ವಾ., ಮೇ 15). ಚುನಾವಣೆ ನಡೆದರೆ ಹಣ, ಮದ್ಯ ಎಂದು ಅಭ್ಯರ್ಥಿಗಳು ಅನಗತ್ಯವಾಗಿ ದುಂದುವೆಚ್ಚ ಮಾಡುತ್ತಾರೆ.
ಆದಕಾರಣ ಚುನಾವಣೆ ನಡೆಸದೆ, ಅದಕ್ಕಾಗಿ ವೆಚ್ಚವಾಗುವ ಹಣವನ್ನು ದೇವಾಲಯದ ಅಭಿವೃದ್ಧಿಗೆ ಬಳಸಲು ಈ ರೀತಿ ಸದಸ್ಯತ್ವವನ್ನು ಹರಾಜು ಹಾಕಲಾಗಿದೆ ಎಂದು ಆ ಗ್ರಾಮದ ಮುಖಂಡರು ಹೇಳಿದ್ದಾರೆ.
ಇದು ನಿಜಕ್ಕೂ ಪ್ರಜಾಪ್ರಭುತ್ವದ ಅಣಕ ಮಾತ್ರವಲ್ಲದೆ ನಮ್ಮ ಚುನಾವಣಾ ವ್ಯವಸ್ಥೆಯ ಲೋಪ ದೋಷಗಳನ್ನು ಎತ್ತಿ ತೋರಿಸುತ್ತದೆ.
ಹರಾಜಿನಲ್ಲಿ ಹಣ ಬಲವುಳ್ಳವರು ಮಾತ್ರ ಆಯ್ಕೆಯಾಗಲು ಸಾಧ್ಯವೇ ಹೊರತು ಜನಪರ ನಿಲುವಿನ ಸಂಭಾವಿತ ವ್ಯಕ್ತಿಗಳಲ್ಲ. ಗ್ರಾಮಸ್ಥರ ಈ ನಡೆ ನಮ್ಮ ಚುನಾವಣಾ ವ್ಯವಸ್ಥೆ ಕುರಿತು ಮರು ಅವಲೋಕನ ಮಾಡಬೇಕಾದ ಅಗತ್ಯವನ್ನು ಸಾರುತ್ತದೆ. ಸರ್ಕಾರ ಮತ್ತು ಚುನಾವಣಾ ಆಯೋಗ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಗ್ರಾಮಸ್ಥರು ದೇವಾಲಯದ ಅಭಿವೃದ್ಧಿಗೇ ಹೆಚ್ಚು ಮಹತ್ವ ಕೊಡುವುದನ್ನು ಬಿಟ್ಟು ಗ್ರಾಮದ ಒಟ್ಟಾರೆ ಅಭಿವೃದ್ಧಿ ಕಡೆ ದೃಷ್ಟಿ ಹರಿಸಬೇಕು. ಶಾಲೆ, ಸಾಮೂಹಿಕ ಶೌಚಾಲಯ, ನೈರ್ಮಲ್ಯ, ಆಸ್ಪತ್ರೆ ಅಂಥ ಮೂಲ ಸೌಕರ್ಯಗಳಿಗೆ ಆದ್ಯತೆ ಕೊಡುವುದನ್ನು ಕಲಿಯುವುದು ಯಾವಾಗ?
-ಶ್ರೀಕಾಂತ ಜಿ.ಎಸ್., ಗೊಲ್ಲರಹಳ್ಳಿ, ಹೊನ್ನಾಳಿ ತಾಲ್ಲೂಕು