‘ಫೆಬ್ರುವರಿ 10ರಂದು ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಲಾಗಿದೆ. ಪಿಎಫ್ ವಾಪಸ್ ಪಡೆಯಲು, ಈ ಹಿಂದೆ ಜಾರಿಯಲ್ಲಿದ್ದ ನಿಯಮಗಳೇ ಮುಂದುವರಿಯಲಿವೆ’ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೆಯ ಅವರು ಮಂಗಳವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
‘ಕಾರ್ಮಿಕರ ಸಾಮಾಜಿಕ ಭದ್ರತೆ’ ಕಾರಣ ಮುಂದಿಟ್ಟು, ಪಿಎಫ್ ಹಿಂಪಡೆಯುವ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಸರ್ಕಾರ ಹೊರಟಿತ್ತು. ಹೊಸ ನಿಯಮದ ಅನ್ವಯ, ಉದ್ಯೋಗಿಯು ನಿವೃತ್ತಿಗೆ ಮುಂಚೆ ಅಂದರೆ ತನ್ನ ವೇತನದಲ್ಲಿ ಕಡಿತವಾಗಿದ್ದ ಪಿಎಫ್ ಮೊತ್ತ ಮತ್ತು ಅದರ ಬಡ್ಡಿ ಮೊತ್ತವನ್ನಷ್ಟೇ ಪೂರ್ಣವಾಗಿ ಹಿಂದಕ್ಕೆ ಪಡೆಯುವ ಅವಕಾಶ ನೀಡಲಾಗಿತ್ತು.
ಕಂಪೆನಿ ತುಂಬಿದ್ದ ಹಣ ಮತ್ತು ಬಡ್ಡಿ ಪಡೆಯಲು 58 ವರ್ಷ ತುಂಬುವವರೆಗೆ ಕಾಯಬೇಕಿತ್ತು. ಇದಕ್ಕೆ ಕಾರ್ಮಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೇಂದ್ರದ ನಡೆಯನ್ನು ವಿರೋಧಿಸಿ ಕಾರ್ಮಿಕರು ರಸ್ತೆಗಿಳಿದಿದ್ದರು. ಮಂಗಳವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ 20ಕ್ಕೂ ಹೆಚ್ಚು ಬಸ್ಗಳು ಭಸ್ಮವಾಗಿದ್ದವು.