ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಮೊದಲನೇ ಹಂತವಾಗಿರುವ ಟಿಇಟಿ ಪರೀಕ್ಷೆಯ ಇತ್ತೀಚಿನ ಫಲಿತಾಂಶದ ಸುತ್ತ ಚರ್ಚೆಗಳು ನಡೆಯುತ್ತಿವೆ. ನಿಗದಿತ ಅಂಕ ಪಡೆದು ಮುಂದಿನ ಹಂತಕ್ಕೆ ಅರ್ಹತೆ ಪಡೆದಿರುವವರ ಸಂಖ್ಯೆ, ಪರೀಕ್ಷೆ ಬರೆದ ಒಟ್ಟು ಅಭ್ಯರ್ಥಿಗಳ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆ ಎಂಬುದು ನಿಜ. ಹಾಗೆಂದು ಟಿಇಟಿ ಪರೀಕ್ಷೆಯ ಔಚಿತ್ಯವನ್ನೇ ಪ್ರಶ್ನಿಸುವುದು ಸರಿಯಲ್ಲ.
ಯಾವುದೇ ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿರಂತರ ಅಧ್ಯಯನ ಅಗತ್ಯ. ಈ ಬಾರಿ ಅರ್ಹತೆ ಪಡೆಯಲು ವಿಫಲರಾಗಿರುವವರಿಗೆ ಶಿಕ್ಷಕರಾಗುವ ಅರ್ಹತೆ ಇಲ್ಲ ಎಂದು ಹೇಳಲಾಗುವುದಿಲ್ಲ. ಇಂದಿನ ಹಲವು ಶಿಕ್ಷಕ ತರಬೇತಿ ಸಂಸ್ಥೆಗಳು ದುಡ್ಡು ಮಾಡುವ ದಂಧೆಗೆ ಇಳಿದಿರುವುದು ಸತ್ಯವಾದರೂ, ಟಿಇಟಿ ಪರೀಕ್ಷೆಯ ಕಳಪೆ ಫಲಿತಾಂಶಕ್ಕೆ ಅಭ್ಯರ್ಥಿಗಳ ನಿರಂತರ ಅಧ್ಯಯನದ ಕೊರತೆಯೇ ಕಾರಣವೆನ್ನಬೇಕು.
ಹೀಗಾಗಿ, ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳು ಟಿಇಟಿ ಪರೀಕ್ಷೆಯ ಅಗತ್ಯವನ್ನೇ ಪ್ರಶ್ನಿಸುವ ಬದಲು, ಸೂಕ್ತ ಅಧ್ಯಯನದ ಮೂಲಕ ಮುಂದಿನ ಅವಕಾಶದಲ್ಲಿ ಯಶಸ್ವಿ ಆಗಬಹುದು.
–ವೆಂಕಟೇಶ ಬಿ.ಎಂ., ಬೆಂಗಳೂರು