ಚೆನ್ನೈ (ಐಎಎನ್ಎಸ್) : ಪ್ರಬಲ ಸವಾಲು ಎದುರಾದರೂ ಸಮರ್ಥ ಹೋರಾಟ ತೋರಿದ ಕರ್ನಾಟಕದ ಬಿ.ಆರ್.ನಿಕ್ಷೇಪ್ ಇಲ್ಲಿ ನಡೆಯುತ್ತಿ ರುವ 18 ವರ್ಷದೊಳಗಿನವರ ಎಂಸಿಸಿ ಎಐಟಿಎ ಜೂನಿಯರ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್ ಷಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ನಿಕ್ಷೇಪ್ 7–6, 7–6ರಲ್ಲಿ ಪಶ್ಚಿಮ ಬಂಗಾಳದ ಸನಿಲ್ ಜಗತಿಯಾನಿ ಅವರನ್ನು ಸೋಲಿಸಿದರು. ಮಂಗಳವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸುರಾನ ಕಾಲೇಜಿನಲ್ಲಿ ಓದುತ್ತಿರುವ ನಿಕ್ಷೇಪ್ 6–3, 6–0ರ ನೇರ ಸೆಟ್ಗಳಿಂದ ಹರಿಯಾಣದ ಪರಸ್ ದಹಿಯಾ ಅವರನ್ನು ಮಣಿಸಿದ್ದರು.
ವಶಿಷ್ಠಗೆ ಗೆಲುವು: ಹದಿನಾರರ ಘಟ್ಟದ ಮತ್ತೊಂದು ಹೋರಾಟದಲ್ಲಿ 9ನೇ ಶ್ರೇಯಾಂಕಿತ ಆಟಗಾರ ಕರ್ನಾಟಕದ ವಶಿಷ್ಠ ವಿನೋದ್ ಚೆರುಕು 6–2, 6–3ರಲ್ಲಿ 7ನೇ ಶ್ರೇಯಾಂಕಿತ ಮಹಾರಾಷ್ಟ್ರದ ಆರ್ಯನ್ ಗೋವೆಸ್ ಅವರಿಗೆ ಆಘಾತ ನೀಡಿ, ಎಂಟರ ಘಟ್ಟಕ್ಕೆ ಪ್ರವೇಶಿಸಿದರು.