ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂದಾಗಿನಿಂದ, ಅಂದರೆ 2005ರಿಂದ ಗ್ರಾಮ ಪಂಚಾಯಿತಿಗಳಲ್ಲಿ ಕಂಪ್ಯೂಟರ್ ಯುಗ ಆರಂಭವಾಯಿತು. ಮೊದಲು ಈ ಯೋಜನೆಗೆ ಸಂಬಂಧಿಸಿದ ಕೆಲಸಕ್ಕೆ ಮಾತ್ರ ಬಳಕೆಯಾಗುತ್ತಿದ್ದ ಕಂಪ್ಯೂಟರ್, ಸರ್ಕಾರದ ‘ಇ– ಆಡಳಿತ’ ಜಾರಿಯಾಗುವುದರೊಂದಿಗೆ, ಅದರ ಭಾಗವಾಗಿ ಗ್ರಾಮ ಪಂಚಾಯಿತಿಗಳಲ್ಲಿ ‘ಪಂಚತಂತ್ರ’ ತಂತ್ರಾಂಶದ ಬಳಕೆಯೊಂದಿಗೆ ಸರ್ವವ್ಯಾಪಿಯಾಗಿ ಬಿಟ್ಟಿತು.
‘ಇ– ಆಡಳಿತ’ದ ಮೂಲ ಉದ್ದೇಶವೇ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವುದಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅತ್ಯಂತ ಕೆಳಸ್ತರದ ಆಡಳಿತ ಘಟಕವಾದ ಗ್ರಾಮ ಪಂಚಾಯಿತಿಗಳಲ್ಲಿ ಪಾರದರ್ಶಕತೆ ಅಗತ್ಯವಾಗಿ ಇರಬೇಕಾದದ್ದೇ. ಅದಕ್ಕನುಗುಣವಾಗಿ ಗ್ರಾಮ ಪಂಚಾಯಿತಿ ಹಂತದಲ್ಲಿ ಜಾರಿಯಾಗುವ ಎಲ್ಲ ಯೋಜನೆಗಳ ಖರ್ಚು ವೆಚ್ಚ ಆನ್ಲೈನ್ ಮುಖಾಂತರವೇ ಆಗಬೇಕೆಂದು ಸರ್ಕಾರ ನಿರ್ಧರಿಸಿತು. ತತ್ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಕಂಪ್ಯೂಟರ್ನಲ್ಲಿ ಕೆಲಸ ಹೆಚ್ಚುತ್ತಲೇ ಬಂದು, ಉದ್ಯೋಗ ಖಾತರಿ ಯೋಜನೆಯೊಂದಿಗೆ ನಿರ್ಮಲ ಭಾರತ ಯೋಜನೆ (ಎನ್ಬಿಎ, ಎಸ್ಬಿಎಮ್), ಆಶ್ರಯ ಯೋಜನೆ, ಬಸವ ವಸತಿ ಯೋಜನೆ, ಪಡಿತರ ಚೀಟಿ, ಇ– ಸ್ವತ್ತು ಮತ್ತಿತರ ಹಲವಾರು ಕೆಲಸಗಳು ಕಂಪ್ಯೂಟರ್ ಆಪರೇಟರ್ಗಳಿಗೆ ಬಿಡುವಿಲ್ಲದ ಕೆಲಸ ನೀಡಿವೆ.
ಉದ್ಯೋಗ ಖಾತರಿ ಯೋಜನೆಯಲ್ಲಿ ಕಂಪ್ಯೂಟರ್ ಕೆಲಸವಲ್ಲದೆ ಹತ್ತಾರು ರಿಜಿಸ್ಟರ್ಗಳನ್ನು ಬರೆದುಕೊಳ್ಳಬೇಕು, ಕೂಲಿಗಳಿಗೆ ಉದ್ಯೋಗ ಚೀಟಿ ವಿತರಣೆಯಂತಹ ಕೆಲಸಗಳನ್ನೂ ನಿರ್ವಹಿಸಬೇಕು. ನಿರ್ಮಲ ಭಾರತ ಯೋಜನೆ ಈಗ ಸ್ವಚ್ಛ ಭಾರತ ಅಭಿಯಾನವಾಗಿದೆ. ಈ ಯೋಜನೆಯಲ್ಲಿ ಶೌಚಾಲಯಗಳನ್ನು ಕಟ್ಟಿಕೊಳ್ಳುವ ಫಲಾನುಭವಿಯ ವರ್ಕ್ ಆರ್ಡರ್ ಹಾಕುವುದು, ಜಿಪಿಎಸ್ ಮಾಡುವುದು ಮುಂತಾದ ಕೆಲಸಗಳು ಕಂಪ್ಯೂಟರ್ ಆಪರೇಟರ್ಗಳ ಜವಾಬ್ದಾರಿ. ಇನ್ನು ‘ಪಂಚತಂತ್ರ’ದಲ್ಲಿ ನೂರೊಂದು ತಂತ್ರಗಳು.
ಅಂದರೆ ತೆರಿಗೆ ವಸೂಲಿ ಮಾಡಿದ ಬಿಲ್ಲುಗಳನ್ನು ದಾಖಲಿಸುವುದು, ವಿವಿಧ ಯೋಜನೆಗಳ ಫಲಾನುಭವಿಗಳ ಬಿಲ್ಲುಗಳನ್ನು ದಾಖಲಿಸುವುದು, ಸ್ವಸಹಾಯ ಗುಂಪುಗಳ ಮಾಹಿತಿಯನ್ನು ದಾಖಲಿಸುವುದು, ಎಲ್ಲಕ್ಕಿಂತ ಮಿಗಿಲಾಗಿ ಎಲ್ಲ ಯೋಜನೆಗಳ ಕ್ಯಾಷ್ ಬುಕ್ಗಳ ವಿವರವನ್ನು ನಮೂದಿಸಿ, ವರ್ಷದ ಕೊನೆಗೆ ಬ್ಯಾಂಕಿನ ಮರುಹೊಂದಾಣಿಕೆಯನ್ನು ಮಾಡಿ ಮುಗಿಸುವುದು. ಹೀಗೆ ಈ ಪಂಚತಂತ್ರದಲ್ಲಿನ ಕೆಲಸಗಳು ಒಂದೇ ಎರಡೇ? ಇದರ ಜೊತೆಗೆ ನಿರ್ಮಲ ಭಾರತ ಯೋಜನೆಯ ಕೆಲಸಗಳ ಉದ್ದ ಪಟ್ಟಿಯೇ ಇರುತ್ತದೆ.
ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಸ್ಥಾನದ ಮಹತ್ವವನ್ನು ತಿಳಿಸಲು ಇಷ್ಟೆಲ್ಲ ದೊಡ್ಡ ಪೀಠಿಕೆ ನೀಡಬೇಕಾಯಿತು. ಇನ್ನೂ ಹಾಸ್ಯಾಸ್ಪದ ವಿಷಯವೆಂದರೆ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ಗಳನ್ನು ಹೊರತುಪಡಿಸಿ ಉಳಿದೆಲ್ಲ ಹುದ್ದೆಗಳಿಗೂ ನೇಮಕಾತಿ ನಡೆಯುತ್ತದೆ!
ಗ್ರಾಮ ಪಂಚಾಯಿತಿಯ ಶೇಕಡ 90ರಷ್ಟು ಕೆಲಸಗಳು ಕಂಪ್ಯೂಟರನ್ನು ಆಧರಿಸಿವೆ. ಹಾಗಾಗಿ ಕಂಪ್ಯೂಟರ್ ಆಪರೇ-ಟರ್ ಸ್ಥಾನ ಕೆಲಸದ ದೃಷ್ಟಿಯಿಂದ ಪ್ರಮುಖವಾಗಿರುತ್ತದೆ. ಎಲ್ಲ ಕೆಲಸಗಳೂ ಆನ್ಲೈನ್ ಆಧಾರಿತ. ಪ್ರತಿದಿನ ಗ್ರಾಮ ಪಂಚಾಯಿತಿಗೆ ಯಾವುದೇ ಸಂದೇಶಗಳಾಗಲಿ, ಪತ್ರಗಳಾಗಲಿ, ಸೂಚನೆಗಳಾಗಲಿ ದೊರಕುವುದು ಆನ್ಲೈನ್ ಮುಖಾಂತರ. ಹೀಗಾಗಿ ಒಂದು ದಿನ ಪಂಚಾಯಿತಿಯ ಉಳಿದ ಯಾವುದೇ ನೌಕರರು ಇರದಿದ್ದರೆ ಕೆಲಸವನ್ನು ಹೇಗಾದರೂ ಸರಿದೂಗಿಸಿಕೊಂಡು ಹೋಗಬಹುದು. ಆದರೆ, ಕಂಪ್ಯೂಟರ್ ಆಪರೇಟರ್ ಇರದಿದ್ದರೆ ಕೆಲಸ ಮುಂದೆ ಸಾಗುವುದೇ ಇಲ್ಲ.
ಇಷ್ಟೊಂದು ಅವಶ್ಯಕವಾದ ಮತ್ತು ಪ್ರಮುಖವಾದ ಹುದ್ದೆಗೆ ಪಂಚಾಯತ್ ರಾಜ್ ಇಲಾಖೆ ಏಕೆ ನೇಮಕಾತಿ ಮಾಡುತ್ತಿಲ್ಲ? ಉಳಿದೆಲ್ಲ ಹುದ್ದೆಗಳ ನೇಮಕಾತಿ ಮಾಡುವಾಗ ಈ ಒಂದೇ ಒಂದು ಹುದ್ದೆ ನೇಮಕಾತಿ ಮಾಡುವುದು ಇಲಾಖೆಗೆ ಹೊರೆಯೆ? ಹಾಗಾದರೆ ಈ ಆಪರೇಟರ್ಗಳಿಗೆ ಹೊರೆಯಾಗುವಷ್ಟು ಕೆಲಸಗಳಾದರೂ ಏಕೆ?
ಇಷ್ಟೆಲ್ಲ ಕೆಲಸಗಳನ್ನು ನಿಭಾಯಿಸುವ ಆಪರೇಟರ್ಗಳ ಸಂಬಳದ್ದಂತೂ ದೊಡ್ಡ ಕಥೆಯೇ ಆಗುತ್ತದೆ. ಕನಿಷ್ಠ ವೇತನ ಜಾರಿಗೆ ಬಂದ ನಂತರವೂ ಇನ್ನೂ ಎಷ್ಟೋ ಪಂಚಾಯಿತಿಗಳಲ್ಲಿ ತೀರಾ ಕಡಿಮೆ, ಅಂದರೆ ತಿಂಗಳಿಗೆ ರೂ 7000 ಕ್ಕಿಂತ ಕಡಿಮೆ ವೇತನ ನೀಡಲಾಗುತ್ತಿದೆ. ಎಷ್ಟೋ ಪಂಚಾಯಿತಿಗಳಲ್ಲಿ 5- 6 ತಿಂಗಳಿಗೊಮ್ಮೆ ವೇತನ ಪಡೆಯುವಂತಾಗಿದೆ. ಯಾವ ಪಂಚಾಯಿತಿಯೂ ಸರಿಯಾಗಿ ವೇತನ ನೀಡುತ್ತಿಲ್ಲ.
ಕಂಪ್ಯೂಟರ್ ಆಪರೇಟರ್ಗಳ ಹುದ್ದೆಯ ಅನಿಶ್ಚಿತತೆ, ಸಂಬಳದ ಸಂಕಷ್ಟಗಳಿಗೆ ಪ್ರಸಕ್ತ ಪಂಜಾಯತ್ ರಾಜ್ ನಿಯಮಗಳು ಹಾಗೂ ಅವುಗಳಿಗೆ ಅನುಗುಣವಾಗಿ ಸರ್ಕಾರ ಹೊರಡಿಸಿರುವ ಆದೇಶಗಳೇ ತೊಡಕಾಗಿರುವಂತಿವೆ. ಸರ್ಕಾರದ ಆದೇಶದ ಪ್ರಕಾರ ಗುಮಾಸ್ತ/ ಬೆರಳಚ್ಚುಗಾರ ಹುದ್ದೆಯಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಸೇವೆಯನ್ನು ಅವರು ಮುಂದಿನ ನೇಮಕಾತಿ/ ನಿವೃತ್ತಿ ಹಾಗೂ ಇತರ ಕಾರಣಗಳಿಂದ ಸೇವೆಯಿಂದ ಮುಕ್ತವಾಗುವವರೆಗೂ ಮುಂದುವರಿಸಬೇಕು.
ನಂತರ ಈ ಹುದ್ದೆಗೆ ಪ್ರಸ್ತುತ ಗ್ರಾಮ ಪಂಚಾಯಿತಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕನಿಷ್ಠ 3 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವವರಿಗೆ ಮೊದಲ ಆದ್ಯತೆ ನೀಡಿ ಗ್ರಾಮ ಪಂಚಾಯಿತಿಯು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಬೇಕು. ಈ ಬಗ್ಗೆ ತಾಲ್ಲೂಕು ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪ್ರಸ್ತಾವ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಬೇಕು. ಆ ನಂತರವೇ ಗ್ರಾಮ ಪಂಚಾಯಿತಿಯು ಅವರು ಕರ್ತವ್ಯಕ್ಕೆ ಹಾಜರಾಗಲು ಆದೇಶ ಹೊರಡಿಸಬೇಕು.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 112ರ ಪ್ರಕಾರ, ಗ್ರಾಮ ಪಂಚಾಯಿತಿ ಸಿಬ್ಬಂದಿಯ ಮಾದರಿ ಮತ್ತು ನೇಮಕಾತಿ ವಿಧಾನದಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಸೃಷ್ಟಿಯಾಗಿರುವುದಿಲ್ಲ. ಪ್ರಸ್ತುತ ಗ್ರಾಮ ಪಂಚಾಯಿತಿಗಳು ಸಾಮಾನ್ಯ ಸಭೆಯ ನಿರ್ಣಯದ ಮೂಲಕ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ನೇಮಕ ಮಾಡಿಕೊಂಡಿರುವಂಥ ಪ್ರಕರಣಗಳು ಅಸಿಂಧುವಾಗುತ್ತವೆ. ಈ ರೀತಿ ನೇಮಕಗೊಂಡಿದ್ದವರ ಹಿಂದಿನ ಸೇವಾ ಅವಧಿಯನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸೇವಾ ಅವಧಿಯ ಜೇಷ್ಠತೆಗೆ ಪರಿಗಣಿಸಲು ಅವಕಾಶ ಇರುವುದಿಲ್ಲ.
ಸಾಮಾನ್ಯವಾಗಿ ಎಲ್ಲ ಪಂಚಾಯಿತಿಗಳಲ್ಲಿ ಈಗಾಗಲೇ ಗುಮಾಸ್ತರೂ ಇದ್ದು ಕಂಪ್ಯೂಟರ್ ಆಪರೇಟರ್ಗಳೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಹೇಳಿಕೆಯ ಪ್ರಕಾರ, ಗುಮಾಸ್ತ ಮುಂದಿನ ನೇಮಕಾತಿ/ ನಿವೃತ್ತಿಯಾಗದೇ ಹೋದರೆ ಡಾಟಾ ಎಂಟ್ರಿ ಆಪರೇಟರ್ಗಳ ನೇಮಕಾತಿ ಆಗುವುದಿಲ್ಲ ಎಂದು ಅರ್ಥ. ಹಾಗಾದರೆ ಈ ಪಂಚಾಯಿತಿಯ ಕೆಲಸವನ್ನೇ ನಂಬಿಕೊಂಡು ಕಳೆದ 7- 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಾ ಬಂದಿರುವ ಆಪರೇಟರ್ಗಳ ಗತಿ ಏನು?
ಈ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ಡಾಟಾ ಎಂಟ್ರಿ ಆಪರೇಟರುಗಳು ಅನೇಕ ಸಲ ಧರಣಿ, ಸತ್ಯಾಗ್ರಹ ನಡೆಸಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತು ಅವರ ಸೇವೆಯ ಅಗತ್ಯವನ್ನು ಮನಗಂಡು, ನೇಮಕ ಮಾಡಿಕೊಳ್ಳಬೇಕು. ಆ ಮೂಲಕ ಅವರಿಗೆ ವೃತ್ತಿಭದ್ರತೆಯನ್ನು ಒದಗಿಸಬೇಕು. ಹಾಗಾದಲ್ಲಿ ಮಾತ್ರ ಈ ಆಪರೇಟರುಗಳು ಹೆಚ್ಚಿನ ಉತ್ಸಾಹದಿಂದ, ಕರ್ತವ್ಯ ಪ್ರಜ್ಞೆಯಿಂದ ಸರ್ಕಾರದ ಯೋಜನೆಗಳಲ್ಲಿ ತೊಡಗಿಕೊಳ್ಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.