ಧಾರವಾಡ: ಡಾ.ವಿ.ಕೃ. ಗೋಕಾಕರ ಪುತ್ರ ಅನಿಲ ಗೋಕಾಕರು ತಮ್ಮ ತಂದೆಯ ಕವನ ವಾಚಿಸಿದ್ದು ‘ಸಾಹಿತ್ಯ ಸಂಭ್ರಮ’ದ ವಿ.ಕೃ.ಗೋಕಾಕ ಮತ್ತು ಪು.ತಿ.ನ ಅವರ ಕವನದ ಓದು ಗೋಷ್ಠಿಯ ವಿಶೇಷ.
‘ಸೂರ್ಯನ ಪ್ರದಕ್ಷಿಣೆ ಮರೆತು..ಸ್ವಯಂಪ್ರದಕ್ಷಿಣೆಯಲಿ ಪೃಥ್ವಿ ಸ್ಥಿರೆಯಾಗಿದಾಳೆ.. ಇಂದು ರಜೆ..’ ಎಂಬ ಕವನವನ್ನು ಅವರು ವಾಚಿಸಿದರು.
‘ನನ್ಮ ತಂದೆಯವರು ದೊಡ್ಡ ಸಾರ್ವಜನಿಕ ಸಭೆಯಲ್ಲಿ ವಾಚಿಸಿದ ಕೊನೆಯ ಕವಿತೆ ಇದು. ಅವರಿಗೆ ಜ್ಞಾನಪೀಠ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಒಂದು ಇಂಗ್ಲಿಷ್ ಮತ್ತು ಒಂದು ಕನ್ನಡ ಕವನ ವಾಚಿಸಲು ಹೇಳಿದಾಗ ಅವರು ಇದನ್ನು ಓದಿದ್ದರು’ ಎಂದು ಅನಿಲ ಸ್ಮರಿಸಿದರು.
ಟಿವಿ ಪರದೆ ಮುಂದೂ ಜನ: ಸಾಂಸ್ಕೃತಿಕ ನಗರಿ ಧಾರವಾಡದ ಸಾಹಿತ್ಯ ರಸಿಕರ ಚಿತ್ತವೆಲ್ಲ ಈಗ ಸಾಹಿತ್ಯ ಸಂಭ್ರಮದತ್ತಲೇ ಇದೆ. ಆದರೆ, ನೋಂದಣಿ ಮಾಡಿಕೊಂಡವರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಪಡೆದಿದ್ದಾರೆ. ಕಟ್ಟುನಿಟ್ಟಿನ ನಿರ್ವಹಣೆಯಿಂದಾಗಿ ಬಹಳಷ್ಟು ಜನರಿಗೆ ಕಾರ್ಯಕ್ರಮದೊಳಗೆ ಹೋಗಲು ಆಗಿಲ್ಲ. ಆದರೆ, ಅವರು ನಿರಾಶರಾಗಿಲ್ಲ.
ಅವರಿಗಾಗಿಯೇ ಸುವರ್ಣ ಮಹೋತ್ಸವ ಭವನದ ಆವರಣದಲ್ಲಿ ಇರುವ ಪುಸ್ತಕ ಪ್ರದರ್ಶನ, ಮಾರಾಟ ಮಳಿಗೆಯಲ್ಲಿ ಬೃಹತ್ ಟಿವಿ ಪರದೆಯನ್ನು ಅಳವಡಿಸಲಾಗಿದೆ. ಒಳಗೆ ನಡೆಯುವ ಗೋಷ್ಠಿಗಳ ನೇರ ಪ್ರಸಾರ ಇದರಲ್ಲಿ ಪ್ರಸಾರವಾಗುತ್ತಿದೆ. ಶನಿವಾರ ಈ ಪರದೆಯ ಮುಂದೆ ಬೆಳಿಗ್ಗೆಯ ಮೊದಲ ಗೋಷ್ಠಿಯಿಂದಲೇ ಸಾಹಿತ್ಯಾಸಕ್ತರು ಸೇರಿದ್ದರು. ಬಹುತೇಕ ಕುರ್ಚಿಗಳು ಭರ್ತಿಯಾಗಿದ್ದವು. ಸಂಜೆಯ ಕೊನೆಯ ಗೋಷ್ಠಿ ಮುಗಿಯುವವರೆಗೂ ಜನರು ಟಿವಿ ಪರದೆಯ ಮುಂದೆ ಕುಳಿತಿದ್ದರು.