ನವದೆಹಲಿ (ಪಿಟಿಐ): ಪಂಜಾಬ್ನ ಗುರುದಾಸಪುರದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ದೇಶದ ಭದ್ರತೆಗೆ ಆತಂಕ ಒಡ್ಡುವ ಶಕ್ತಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಸೃಷ್ಟಿಸಿದ ಕೋಲಾಹಲದ ನುಡುವೆಯೇ ಗುರುದಾಸಪುರ ಮೇಲಿನ ದಾಳಿ ಘಟನೆ ಸಂಬಂಧ ರಾಜನಾಥ್ ಸಿಂಗ್ ಅವರು ಹೇಳಿಕೆ ನೀಡಿದರು. ದಾಳಿ ನಡೆಸಿದ ಉಗ್ರರು ರಾವಿ ನದಿಯ ಮೂಲಕ ಪಾಕಿಸ್ತಾನದಿಂದ ಬಂದ್ದಿದ್ದರು ಎಂದು ಅವರು ತಿಳಿಸಿದರು. ಜಿಪಿಎಸ್ನಿಂದ ದೊರೆತ ಮಾಹಿತಿ ಆಧರಿಸಿ ಅವರು ಹೇಳಿಕೆ ನೀಡಿದ್ದಾರೆ.
ಅಲ್ಲದೇ, ದೇಶದಲ್ಲಿ ಭಯೋತ್ಪಾದನೆಗೆ ಸಂಚು ರೂಪಿಸುವ ಶಕ್ತಿಗಳನ್ನು ದಮನ ಮಾಡಲಾಗುವುದು. ದೇಶದ ಭದ್ರತೆಗೆ ಆತಂಕ ಒಡ್ಡಲು ಯತ್ನಿಸುವವರಿಗೆ ಸೂಕ್ತ ಪ್ರತ್ಯುತ್ತರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.