ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಹಾಗೂ ಒಂದು ಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯಗೊಳಿಸುವ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಆದರೆ ಕನ್ನಡ ಭಾಷೆ ಕಲಿಕೆ, ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳಿಗೆ ಕಡ್ಡಾಯವಿಲ್ಲ. ಈ ಮೂಲಕ ರಾಜ್ಯಭಾಷೆಯನ್ನು ಪ್ರತಿ ಮಗುವೂ ಕಲಿಯುವಂತಾಗಲೂ ಸೃಷ್ಟಿಸಬಹುದಾಗಿದ್ದ ಅವಕಾಶವನ್ನು ರಾಜ್ಯ ಕಳೆದುಕೊಂಡಿದೆ.
ಬೆಂಗಳೂರಿನಲ್ಲಿರುವ ಕೆಲವು ಸಿಬಿಎಸ್ಇ ಶಾಲೆಗಳು ಕನ್ನಡವನ್ನು ದ್ವಿತೀಯ ಅಥವಾ ತೃತೀಯ ಭಾಷೆಯಾಗಿಯೂ ಬೋಧಿಸುತ್ತಿಲ್ಲ. ಆದರೆ ಹಿಂದಿ ಭಾಷೆಯನ್ನು ಮಾತ್ರ ಹೇರಲಾಗುತ್ತಿದೆ. ಯಾವುದೇ ಹಂತದಲ್ಲೂ ಕನ್ನಡ ಕಲಿಯಲು ಮಕ್ಕಳಿಗೆ ಅವಕಾಶವೇ ಇಲ್ಲ. ಇದರಿಂದ, ತಮ್ಮದೇ ರಾಜ್ಯದಲ್ಲಿ ಕಲಿಯುತ್ತಿರುವ ಕನ್ನಡ ಭಾಷಿಕ ವಿದ್ಯಾರ್ಥಿಗಳ ಹಕ್ಕುಗಳ ಉಲ್ಲಂಘನೆಯಾಗಿದೆ.
ಈ ವಿಚಾರದಲ್ಲಿ ನಮ್ಮ ರಾಜ್ಯ ಸರ್ಕಾರ, ತಮಿಳುನಾಡಿನ ಮಾದರಿಯನ್ನು ನೋಡಬೇಕು. 2015–16ರ ಶೈಕ್ಷಣಿಕ ವರ್ಷದಿಂದ ಎಲ್ಲಾ ಬೋರ್ಡ್ಗಳಿಗೆ ಸೇರಿದ ಅಲ್ಲಿನ ಎಲ್ಲಾ ಶಾಲೆಗಳಲ್ಲಿ ತಮಿಳು ಕಡ್ಡಾಯ ವಿಷಯವಾಗಿ ಸೇರ್ಪಡೆಯಾಗಿದೆ.