ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಬೋಧಕ, ಬೋಧಕೇತರ ಹುದ್ದೆಗಳಿಗೆ ಮೂರನೇ ಬಾರಿ (ಏ. 10) ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಸಲು 22 ದಿನಗಳ ಕಾಲಮಿತಿ ನೀಡಿದೆ. ಇದನ್ನು ನೋಡಿದರೆ ಅತಿ ಜರೂರಾಗಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಯುವಂತಿದೆ. ಕುಲಪತಿಗಳ ಅವಧಿ ಕೇವಲ ಮೂರು ತಿಂಗಳು ಇರುವಾಗ ಇಷ್ಟು ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿರುವುದು ಅನುಮಾನಕ್ಕೆ ಎಡೆಮಾಡಿದೆ. ಈ ಹಿಂದೆ ‘ಪ್ರಜಾವಾಣಿ’, ‘ಜಾನಪದ ವಿ.ವಿಯ ನೇಮಕಾತಿ ವಿವಾದ’ ಎಂಬ ಸರಣಿ ವರದಿ ಪ್ರಕಟಿಸಿತ್ತು. ಹೀಗೆ ನೇಮಕಾತಿ ವಿವಾದದಲ್ಲಿ ಜಾನಪದ ವಿ.ವಿಯ ಘನತೆ ಕುಂದಿರುವಾಗ ಈಗಿನ ತರಾತುರಿ ಅಧಿಸೂಚನೆ, ಮತ್ತು ಆಯ್ಕೆ ಪ್ರಕ್ರಿಯೆಯ ಅಗತ್ಯವಿದೆಯೇ?
ಯುಜಿಸಿ ನಿಯಮಾನುಸಾರ ಜಾನಪದ ಸಾಹಿತ್ಯಕ್ಕೆ ಜಾನಪದ ಎಂ.ಎ. ಮಾಡಿದವರು ಮಾತ್ರ ಅರ್ಹರು. ಆದರೆ ಅಧಿಸೂಚನೆಯಲ್ಲಿ ಕನ್ನಡ–ಹಿಂದಿ–ಇಂಗ್ಲಿಷ್ ಎಂ.ಎ. ಮಾಡಿದವರನ್ನೂ ಅರ್ಹರನ್ನಾಗಿಸಲಾಗಿದೆ. ಹಿಂದಿನ ಅಧಿಸೂಚನೆಗಳ ಆಯ್ಕೆ ಪ್ರಕ್ರಿಯೆ ಅಪೂರ್ಣವಾಗಿರುವಾಗ ಹಿಂದೆ ಸಲ್ಲಿಸಿದ ಅರ್ಜಿ ಮತ್ತು ಡಿ.ಡಿ.ಯನ್ನು ಪ್ರಸ್ತುತ ಅಧಿಸೂಚನೆಗೆ ಪರಿಗಣಿಸದಿರುವುದು ಸರಿಯೇ? ಇಂತಹ ಹತ್ತಾರು ಪ್ರಶ್ನೆಗಳು ಹೊಸ ಅಧಿಸೂಚನೆಯಿಂದ ಹುಟ್ಟುತ್ತಿವೆ. ಉನ್ನತ ಶಿಕ್ಷಣ ಸಚಿವಾಲಯ ಮತ್ತು ರಾಜ್ಯಪಾಲರು ಈ ಬಗೆಯ ತರಾತುರಿ ಅಧಿಸೂಚನೆ ಕುರಿತು ಪರಿಶೀಲಿಸಬೇಕು ಮತ್ತು ತರಾತುರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯದಂತೆ ಎಚ್ಚರ ವಹಿಸಬೇಕು.