ಬೆಂಗಳೂರು: ವಿಧಾನಸಭೆಯಲ್ಲಿ 40 ಶಾಸಕರ ಬಲ ಹೊಂದಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಬಿ.ಎಂ. ಫಾರೂಕ್ ಅವರು ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಆದರೆ ಅವರಿಗೆ ಪಕ್ಷದಿಂದ ಬಿ–ಫಾರಂ ಇನ್ನೂ ಸಿಕ್ಕಿಲ್ಲ.
ಅಭ್ಯರ್ಥಿಯ ಗೆಲುವಿಗೆ ಬೇಕಿರುವ ಐದು ಮತಗಳನ್ನು ಪಕ್ಷೇತರ ಶಾಸಕರಿಂದ ಪಡೆಯುವ ಲೆಕ್ಕಾಚಾರ ಜೆಡಿಎಸ್ ವರಿಷ್ಠರಲ್ಲಿ ಇತ್ತು. ಆದರೆ ಜಮೀರ್ ಅಹಮದ್ ಖಾನ್, ಎನ್. ಚೆಲುವರಾಯಸ್ವಾಮಿ ಸೇರಿದಂತೆ ಐವರು ಶಾಸಕರು ಕಾಂಗ್ರೆಸ್ಸಿನ ಮೂರನೆಯ ಅಭ್ಯರ್ಥಿಗೆ ಮತ ಹಾಕಲು ತೀರ್ಮಾನಿಸಿದರು.
ಅಲ್ಲದೆ, ಫಾರೂಕ್ ಅವರಿಗೆ ಸೂಚಕರಾಗಿ ಸಹಿ ಮಾಡಿದ್ದ ಪಕ್ಷೇತರ ಶಾಸಕರು ಕಾಂಗ್ರೆಸ್ಸಿಗೆ ಮತ ಹಾಕುವುದಾಗಿ ಹೇಳಿಕೊಂಡಿದ್ದಾರೆ. ಇದರಿಂದಾಗಿ 45 ಮತಗಳನ್ನು ಫಾರೂಕ್ ಅವರಿಗೆ ಕೊಡಿಸಲಾಗದ ಸ್ಥಿತಿ ಜೆಡಿಎಸ್ಗೆ ಎದುರಾಗಿದೆ. ಇದು ವರಿಷ್ಠರನ್ನು ಚಿಂತೆಗೀಡುಮಾಡಿದೆ ಎನ್ನಲಾಗಿದೆ.
ಅತೃಪ್ತ ಶಾಸಕರ ವಿರುದ್ಧ ಕ್ರಮ:ಎಚ್ಡಿಕೆ
ಹಾಸನ: ‘ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ನೀಡುವುದಾಗಿ ಹೇಳಿಕೆ ನೀಡಿರುವ ಅತೃಪ್ತ ಜೆಡಿಎಸ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಜೂನ್ 11ರಂದು ತೀರ್ಮಾನಿಸಲಾಗುತ್ತದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
‘ಜೆಡಿಎಸ್ನ ಐದು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾರೆ ಎಂದು ಶಾಸಕರು ಹೇಳಿಕೆ ನೀಡಿದ್ದಾರೆ. ಅವರ ಸಮಸ್ಯೆಗಳು ಏನೇ ಇದ್ದರೂ ಪಕ್ಷದ ಆಂತರಿಕ ಚೌಕಟ್ಟಿನಲ್ಲಿ ಚರ್ಚಿಸಬೇಕಿತ್ತು. ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ, ವಿಪ್ ಜಾರಿ ಮಾಡುವ ಹಾಗಿಲ್ಲ ಎಂದು ವಿಧಾನಸಭೆ ಉಪಕಾರ್ಯದರ್ಶಿಗಳು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಈ ರೀತಿ ಮಾತನಾಡಲು ಅವರಿಗೆ ಅಧಿಕಾರ ಕೊಟ್ಟವರು ಯಾರು?’ ಎಂದು ಭಾನುವಾರ ಪ್ರಶ್ನಿಸಿದರು.