ಬರಪೀಡಿತ ರಾಯಚೂರು, ಗುಲ್ಬರ್ಗ, ಯಾದಗಿರಿ ಜಿಲ್ಲೆಗಳಲ್ಲಿ ಬಿಟ್ಟೂ ಬಿಡದೇ ಸುರಿಯುತ್ತಿದೆ ಮಳೆ. ಅದೇ ರೀತಿಯ ಒಣಹವೆಗೆ ಹೆಸರಾದ ಕೋಲಾರ, ಚಿಕ್ಕಬಳ್ಳಾಪುರ ಕಡೆ ಮಳೆರಾಯ ಇಣುಕಿಯೂ ನೋಡುತ್ತಿಲ್ಲ. ಅತ್ತ ವರುಣನ ಮುನಿಸಿಗೂ ಇತ್ತ ಪಾತಾಳಗಂಗೆಯ ಅವಕೃಪೆಗೂ ಒಳಗಾದ ಜನರದು ದಿಕ್ಕುತೋಚದ ಸ್ಥಿತಿ.
ಈ ಎರಡೂ ಜಿಲ್ಲೆಗಳ ಬಹುತೇಕ ಕಡೆ ಇಲ್ಲಿಯವರೆಗೂ ಹಳ್ಳ–ಕೊಳ್ಳಗಳಲ್ಲಿ ನೀರು ಕಾಣಿಸಿಲ್ಲ. ಕೊಳವೆಬಾವಿಗಳು ಏದುಸಿರುಬಿಡುತ್ತಿವೆ. ಹೈನುಗಾರಿಕೆ ಇಲ್ಲದೇ ಹೋಗಿದ್ದರೆ ಇಷ್ಟೊತ್ತಿಗೆ ಎಲ್ಲರೂ ಊರು–ಕೇರಿ ಬಿಟ್ಟು ಕೂಲಿ ಅರಸಿ ಯಾವುದಾದರೂ ಪೇಟೆ ಸೇರಬೇಕಾಗಿತ್ತು.
ಚುನಾವಣೆಗೆ ಮುನ್ನ ಶಾಶ್ವತ ನೀರಾವರಿ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುತ್ತಿದ್ದ ‘ನಾಯಕಮಣಿ’ಗಳ ಬಾಯಿ ಕಟ್ಟಿದೆ ಈಗ. ಮಳೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈ ಎರಡೂ ಜಿಲ್ಲೆಗಳು ಕರ್ನಾಟಕದ ಮರುಭೂಮಿ ಆಗುವ ಕಾಲ ದೂರವಿಲ್ಲವೇನೋ ಎಂಬ ಆತಂಕ ಕಾಡುತ್ತಿದೆ. ಇದನ್ನು ನಿವಾರಿಸಬಲ್ಲ ನಾಯಕ ಸರಿದೂರದಲ್ಲಿ ಎಲ್ಲಾದರೂ ಕಾಣಸಿಗುವನೆ, ಕೈವಾರ ತಾತಯ್ಯ?
–ಡಿ.ವೈ. ನಾರಾಯಣಸ್ವಾಮಿ, ಕೋಲಾರ