ಕಂಪ್ಲಿ (ಬಳ್ಳಾರಿ ಜಿಲ್ಲೆ): ಸಮೀಪದ ಬುಕ್ಕಸಾಗರ ತೋಟಗಾರಿಕೆ ಫಾರಂ ಹಿಂಭಾಗದಲ್ಲಿರುವ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯ (ಎಲ್ಎಲ್ಸಿ) ರಕ್ಷಣಾ ಗೋಡೆಯಲ್ಲಿ ಬಿಟ್ಟಿದ್ದ ಬಿರುಕನ್ನು ಭಾನುವಾರ ದುರಸ್ತಿಗೊಳಿಸಲಾಯಿತು.
‘ದುರಸ್ತಿ ಕಾರ್ಯ ಭಾನುವಾರ ಮಧ್ಯಾಹ್ನ ವೇಳೆಗೆ ಪೂರ್ಣಗೊಂಡಿದ್ದು, ಸಂಜೆ 4ರಿಂದ ತುಂಗಭದ್ರಾ ಜಲಾಶಯದಿಂದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಪಾಲಿನ 1680 ಕ್ಯುಸೆಕ್ ಪ್ರಮಾಣದಲ್ಲಿ ನೀರನ್ನು ಕಾಲುವೆಗೆ ಬಿಡುಗಡೆ ಮಾಡಲಾಗಿದೆ’ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಡಿ. ರಂಗಾರೆಡ್ಡಿ ತಿಳಿಸಿದರು.
‘ಕಾಲುವೆ ರಕ್ಷಣಾ ಗೋಡೆಯ ಹೊರ ಭಾಗದ ಬಾಕಿ ಕಾಮಗಾರಿ ಮಂಗಳವಾರ ಪೂರ್ಣಗೊಳ್ಳಲಿದೆ’ ಎಂದು ಮಂಡಳಿ ಸೂಪರಿಂಟೆಂಡೆಂಟ್ ಎಂಜನಿಯರ್ ಪಿ. ಶಶಿಭೂಷಣರಾವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.