ಅಭಿಪ್ರಾಯ ಹೇಳಿಕೊಳ್ಳಲು ಎಲ್ಲರೂ ಸ್ವತಂತ್ರರು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅಭಿಪ್ರಾಯ ಹೇಳುವ ಜೊತೆಯಲ್ಲೇ ಅಂಥ ಅಭಿಪ್ರಾಯಕ್ಕೆ ಕಾರಣ ಏನು ಎಂಬುದನ್ನು ತಿಳಿಸಬೇಕು.
‘ಪ್ರಜಾವಾಣಿ’ಯ ಸಂಗತ ಅಂಕಣದಲ್ಲಿ (ಮೇ 20) ಕೆ.ಎಲ್. ಚಂದ್ರಶೇಖರ್ ಐಜೂರ್, ‘ಹಿಂದೂಗಳ ತುಷ್ಟೀಕರಣ ಪ್ರಕ್ರಿಯೆಯಲ್ಲಿ ಎಡಪಕ್ಷಗಳದು ಬಿಜೆಪಿಯ ನಂತರದ ಸ್ಥಾನ ಎಂಬುದನ್ನು ಯಾರೂ ಮರೆಯುವಂತಿಲ್ಲ’ ಎಂದು ಬರೆದಿದ್ದಾರೆ.
ಇದನ್ನು ಓದಿದ ನಾನು ಒಮ್ಮೆ ಹೌಹಾರಿಬಿಟ್ಟೆ. ಎಡಪಕ್ಷಗಳು ಯಾವ ಸಂದರ್ಭದಲ್ಲಿ ಹಿಂದೂಗಳ ತುಷ್ಟೀಕರಣ ನಡೆಸಿವೆ, ಯಾವ ರೂಪದಲ್ಲಿ ನಡೆಸಿವೆ, ಅದರ ಪರಿಣಾಮ ಏನಾಯಿತು ಎಂಬುದನ್ನೆಲ್ಲ ಅವರು ವಿವರಿಸಿಯಾರೇ? ಅಭಿಪ್ರಾಯವನ್ನು ಹೇಗೆ ಬೇಕಿದ್ದರೂ ಹೇಳಬಹುದು, ಯಾರು ಬೇಕಿದ್ದರೂ ಹೇಳಬಹುದು. ಆದರೆ ಅಭಿಪ್ರಾಯಗಳು ಸತ್ಯವನ್ನು ಆಧರಿಸಿ ರೂಪುಗೊಳ್ಳಬೇಕು. ಊಹೆಗಳನ್ನು ಆಧರಿಸಿ ಅಲ್ಲ.
ಹಿಂದೂ ಎಂದು ಕರೆಯಬಹುದಾದ ಒಂದು ಸಮುದಾಯದ ಬಗ್ಗೆ ಎಡಪಕ್ಷಗಳು ನಾಲ್ಕು ಒಳ್ಳೆಯ ಮಾತನಾಡಿದ್ದರೆ ಅದು ತುಷ್ಟೀಕರಣ ಆಗುವುದಿಲ್ಲ ಎಂಬುದು ಗಮನದಲ್ಲಿರಲಿ.
-ಭೀಮ ಭಟ್ಟ, ಸಾಗರ